ಶೋಷಣೆ ತಡೆಗೆ ಮನಸ್ಥಿತಿ ಬದಲಾವಣೆ ಅಗತ್ಯ
Team Udayavani, Feb 21, 2021, 1:59 PM IST
ಎಚ್.ಡಿ.ಕೋಟೆ: ಮನಸ್ಥಿತಿ ಬದಲಾದಾಗ ಮಾತ್ರ ದೌರ್ಜನ್ಯ ತಡೆ ಸಾಧ್ಯ, ಶೋಷಣೆಗಳು ನಿಲ್ಲಬೇಕಾದರೆ ಮನಸ್ಥಿತಿ ಬದಲಾಗಬೇಕೆಂದು ನ್ಯಾಯಾಧೀಶ ಡಿ.ಆರ್.ರೇಣಕ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ಜೀವಿತಾ- ಉನ್ನತಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಕಾಯ್ದೆ ಕುರಿತ ತಾಲೂಕು ಮಟ್ಟದ ವಿಚಾರ ಗೋಷ್ಠಿ ಹಾಗೂ ಕೋಮು ಸೌಹಾರ್ದತೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ವತಂತ್ರ್ಯ ಪೂರ್ವದಲ್ಲಿ ಕಸುಬಿನ ಆಧಾರದ ಮೇಲೆ ಜಾತಿ ಪಟ್ಟಿ ತಯಾರಿಸಿ ಅವರಿಗೆ ಸವಲತ್ತು ನೀಡಲಾಗುತ್ತಿದೆ. ಆದರೆ 100 ವರ್ಷ ಉರುಳಿದರೂ ಅಸ್ಪೃಶ್ಯತೆ ಆಚರಣೆ ದೂರವಾಗಿಲ್ಲ ಎಂದು ವಿಷಾದಿಸಿದರು. ಜಾತಿಯತೇ ಆಚರಿಸುವವರ ತಲೆಯಿಂದ ಜಾತಿಯತೇ ತೊಲಗುವ ತನಕ ದೇಶ ಜಾತಿ ಮುಕ್ತವಾಗಲು ಸಾಧ್ಯವಿಲ್ಲ. ಜಾತಿ ವಿನಾಶವಾಗದೆ ದೇಶಕ್ಕೆ ಭವಿಷ್ಯ ಇಲ್ಲ. ಶಿಕ್ಷಣದ ಕನಸು ಪುಸ್ತಕ ಗಳಿಗಷ್ಟೇ ಸೀಮೀತವಾಗದೇ ಆಚರಣೆಗೆ ತಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ದೌರ್ಜನ್ಯ ಕಾಯ್ದೆ ಪ್ರಕರಣದಲ್ಲಿ ಪೊಲೀಸರ ಕಾರ್ಯ, ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಇಂತಹ ಪ್ರಕರಣಗಳನ್ನು 3 ತಿಂಗಳಲ್ಲಿ ತೀರ್ಪು ನೀಡಬೇಕು, ವಿಳಂಬವಾದರೆ ಪ್ರಕರಣಗಳಲ್ಲಿ ನ್ಯಾಯ ದೊರೆಯುವುದು ಕಷ್ಟಕರ ಎಂದರು.
ಅಂಬೇಡ್ಕರ್ ವಾದಿ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ಎಸ್ಸಿ ಎಸ್ಟಿ ಕಾನೂನು ಜಾರಿ ಯಲ್ಲಿದ್ದರೂ ದೌರ್ಜನ್ಯಕ್ಕೊಳಗಾದ ಮಂದಿಗೆ ನ್ಯಾಯ ದೊರೆಕಿರು ವುದು ಬೆರಳೆಣಿಕೆಯಷ್ಟು ಮಾತ್ರ.ಆಹಾರದ ಪದ್ಧತಿಯಿಂದ ಮನುಷ್ಯ ಮನುಷ್ಯÃನು ° ಕೀಳಾಗಿ ಕಾಣುವುದು ತರವಲ್ಲ. ಜಾತಿ ವಿನಾಶವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಶಾಸಕ ಎಸ್.ಅನಿಲ್ ಚಿಕ್ಕಮಾದು ಮಾತನಾಡಿ, ಜಾತಿಯ ವಿಷಬೀಜ ಹೇಗಿದೆಯೆಂದರೆ ನಾನು ಬಾಲ್ಯದಲ್ಲಿ ಶಾಲೆಗೆ ಪ್ರವೇಶಿಸುತ್ತಿದ್ದಂತೆಯೇ ಮೇಲ್ವರ್ಗದವರು ಮಡಿವಂತಿಕೆ ಆಚರಿಸುತ್ತಿದ್ದ ಘಟನೆ ನೋವು ತಂದಿದೆ. ತಾಲೂಕಿನಲ್ಲಿ ಬಹುತೇಕ ಪ್ರಕರಣಗಳನ್ನು ಸಂಧಾನದ ಮೂಲಕ ಪರಿಹರಿಸಿದ್ದು, ಪರಿಹಾರವಾದ ಪ್ರಕರಣಗಳು ಮಾತ್ರ ದಾಖಲಾಗಿವೆ. ಇಂತಹ ಕಾರ್ಯಾಗಾರಗಳನ್ನು 3ತಿಂಗಳಿಗೊಮ್ಮೆಯಾದರೂ ಸಮಾಜ ಕಲ್ಯಾಣ ಇಲಾಖೆ ಅಯೋಜಿಸಬೇಕು ಎಂದರು.
ಜಿಪಂ ಸದಸ್ಯ ವೆಂಕಟಸ್ವಾಮಿ, ಪುರಸಭೆ ಅಧ್ಯಕ್ಷೆ ಸರೋಜಮ್ಮ, ಉಪಾಧ್ಯಕ್ಷೆ ಗೀತಾ ಗಿರಿಗೌಡ, ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ,ಸೋಗಳ್ಳಿ ಶಿವಣ್ಣ, ಚಾ.ನಂಜುಂಡಮೂರ್ತಿ, ಮುದ್ದಮಲ್ಲಯ್ಯ, ಭೀಮನಹಳ್ಳಿ ಸೋಮೇಶ್, ಬಸಪ್ಪ, ಉಮೇಶ್ ಬಿ.ನೂರಲಕುಪ್ಪೆ, ರವಿ, ವಕೀಲ ತಿಮ್ಮಯ್ಯ, ಚಂದ್ರಕಲಾ, ನಯಾಜ್ ಇತರರಿದ್ದರು.