ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ
ಶೇ.22 ಮಳೆ ಕೊರತೆಯಿಂದ ಶೇ.53ರಷ್ಟು ಮಾತ್ರ ಬಿತ್ತನೆ • ನಾಲೆಗಳಿಗೆ ನೀರು ಬಿಡದಿದ್ದಕ್ಕೆ ಭತ್ತದ ಬೀಜ ವಿತರಿಸಿಲ್ಲ
Team Udayavani, Jul 27, 2019, 9:51 AM IST
ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಕೆಡಿಪಿ ಪ್ರಗತಿಪರಿಶೀಲನಾ ಸಭೆ ನಡೆಯಿತು.
ಮೈಸೂರು:ಮುಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚು ಬೆಳೆಹಾನಿ ಸಂಭವಿಸಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ಕೊಡುವುದು ಕಷ್ಟವಾಗಿರುವುದರಿಂದ ಈ ವರ್ಷ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಮಾಡುತ್ತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಮಹಾಂತೇಶಪ್ಪ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಶೇ.22 ಮಳೆ ಕೊರತೆ: ಮೈಸೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ 374.0 ಮಿ.ಮೀ. ವಾಡಿಕೆ ಮಳೆ ಬೀಳಬೇಕಿತ್ತು. ಆದರೆ, ಈವರೆಗೆ 291.0 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.22ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ತಿ.ನರಸೀಪುರ ತಾಲೂಕಿನಲ್ಲಿ ಶೇ.35ರಷ್ಟು ಮಳೆ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲೇ ಅತಿ ಹೆಚ್ಚಿನ ಮಳೆ ಕೊರತೆ ಈ ತಾಲೂಕಿನಲ್ಲಾಗಿದೆ. ಕೆ.ಆರ್.ನಗರ ತಾಲೂಕಿನಲ್ಲಿ ಶೇ.30, ಎಚ್.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲೂಕುಗಳಲ್ಲಿ ತಲಾ ಶೇ.27ರಷ್ಟು, ಮೈಸೂರು ತಾಲೂಕು ಶೇ.18, ನಂಜನಗೂಡು ತಾಲೂಕು ಶೇ.16, ಹುಣಸೂರು ತಾಲೂಕಿನಲ್ಲಿ ಶೇ.8ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ವಿವರಿಸಿದರು.
ಶೇ.53ರಷ್ಟು ಬಿತ್ತನೆ: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಮಳೆ ಆಶ್ರಿತ ಪ್ರದೇಶದಲ್ಲಿ 2,86,220 ಹೆಕ್ಟೇರ್, ನೀರಾವರಿ ಪ್ರದೇಶದಲ್ಲಿ 1,14,100 ಹೆಕ್ಟೇರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 4 ಲಕ್ಷದ 320 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಾಗಿದ್ದು, ಈವರೆಗೆ ಮಳೆ ಆಶ್ರಿತ ಪ್ರದೇÍದಲ್ಲಿ 2,07,860 ಹೆಕ್ಟೇರ್, ನೀರಾವರಿ ಪ್ರದೇಶದಲ್ಲಿ 3,700 ಹೆಕ್ಟೇರ್ ಸೇರಿದಂತೆ 2,13,203 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದ್ದು, ಶೇ.53ರಷ್ಟು ಬಿತ್ತನೆಯಾಗಿದೆ ಎಂದರು.
ಬಾಡುತ್ತಿವೆ ಬೆಳೆಗಳು: ಏಕದಳ ಧಾನ್ಯಗಳಾದ ರಾಗಿ, ಜೋಳ ಮತ್ತು ಮುಸುಕಿನ ಜೋಳ 42,514 ಹೆಕ್ಟೇರ್ ಪ್ರದೇಶದಲ್ಲಿ, ದ್ವಿದಳ ಧಾನ್ಯ ಬೆಳೆಗಳಾದ ಅಲಸಂದೆ, ಹೆಸರು, ಉದ್ದು, ಅವರೆ ಮತ್ತು ತೊಗರಿ 49,541 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದೆ. ಎಣ್ಣೆಕಾಳು ಬೆಳೆಗಳಾದ ನೆಲಗಡೆಲೆ, ಹರಳು ಮತ್ತು ಎಳ್ಳು 4,401 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದ್ದು, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಮತ್ತು ತಂಬಾಕು ಬೆಳೆಗಳು 1,16,747 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿದೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದ್ದು, ಮುಸುಕಿನ ಜೋಳದ ಬೆಳೆಗಳು ಬಿತ್ತನೆ ಮತ್ತು ಬೆಳವಣಿಗೆ ಹಂತದಲ್ಲಿದೆ. ಉದ್ದು, ಹೆಸರು, ಅಲಸಂದೆ, ತಂಬಾಕು, ಹತ್ತಿ ಬೆಳೆಗಳು ಬೆಳವಣಿಗೆ ಹಂತದಲ್ಲಿದ್ದು, ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿವೆ ಎಂದು ವಿವರಿಸಿದರು.
ಭತ್ತದ ಬೆಳೆ ಕಷ್ಟ: ಕೆಆರ್ಎಸ್ ಮತ್ತು ಹಾರಂಗಿ ಜಲಾಶಯಗಳ ನೀರಾವರಿ ಸಲಹಾ ಸಮಿತಿ ಸಭೆ ನಡೆದು, ನಾಲೆಗಳಿಗೆ ಬಿಡಲಾಗಿದೆ. ಆದರೆ, ಕಬಿನಿ ಜಲಾಶಯದ ನೀರಿನ ಮಟ್ಟ ಕಡಿಮೆ ಇರುವ ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದರಿಂದ ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಈ ವರ್ಷ ಬೆಳೆದು ನಿಂತಿರುವ ಬೆಳೆಗೆ ಬಿಟ್ಟು, ಹೊಸದಾಗಿ ಭತ್ತದ ಬೆಳೆಗೆ ನೀರು ಕೊಡುವುದು ಕಷ್ಟ. ಹೀಗಾಗಿ ಕೃಷಿ ಇಲಾಖೆಯಿಂದ ಸಬ್ಸಿಡಿಯಲ್ಲಿ ಭತ್ತದ ಬೀಜ ವಿತರಣೆ ಮಾಡುತ್ತಿಲ್ಲ ಎಂದು ತಿಳಿಸಿದರು.
ವರ್ಗಾವಣೆ: ವರ್ಗಾವಣೆ ಕೌನ್ಸಿಲಿಂಗ್ನಲ್ಲಿ ದೂರದ ಊರುಗಳ ಶಾಲೆಗಳನ್ನು ಯಾವ ಶಿಕ್ಷಕರೂ ಆಯ್ಕೆ ಮಾಡಿಕೊಳ್ಳಲ್ಲ. ಇಲ್ಲಿಗೇ ಹೋಗಿ ಎಂದು ನಾವು ಬಲವಂತವಾಗಿ ಹೇರಲಾಗಲ್ಲ ಎಂದು ಡಿಡಿಪಿಐ ಉತ್ತರಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ, ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ಕೊಡುವಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದರೆ ಇಲಾಖೆಯಲ್ಲಿ ಎಷ್ಟರ ಮಟ್ಟಿಗೆ ನಿಮ್ಮ ಹಿಡಿತ ಇದೆ ಎಂಬುದನ್ನು ತೋರಿಸುತ್ತದೆ. ಸರ್ಕಾರಿ ವ್ಯವಸ್ಥೆ ಈ ರೀತಿ ಆದರೆ ಹೇಗೆ ಸೇವೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ನಿಯೋಜಿತ ಶಿಕ್ಷಕರು ಮೂಲ ಸ್ಥಳಗಳಿಗೆ ಕಳುಹಿಸುವಂತೆ ತಾಕೀತು ಮಾಡಿದರು.
ಜನರೇ ಗಲೀಜು ಮಾಡ್ತಾರೆ: ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದ್ದು, ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಮುಂಗಾರು ಆರಂಭವಾಗಿರುವುದರಿಂದ ಅಲ್ಲಲ್ಲಿ ಮಳೆ ನೀರು ನಿಂತು ಲಾರ್ವಾ ಬೆಳೆಯಲು ಕಾರಣವಾಗುತ್ತಿದೆ. ನೀರು ಶೇಖರಣೆ ಬಗ್ಗೆ ಮನೆ ಮನೆಗೂ ಭೇಟಿ ಮಾಡಿ ಮಾಹಿತಿ ಕೊಡುತ್ತಿದ್ದೇವೆ. ಆದರೆ, ಸ್ಥಳೀಯ ಸಂಸ್ಥೆಗಳವರು ಸ್ವಚ್ಛತೆ ಮಾಡಿದರೂ ಜನ ಅಲ್ಲಿಗೇ ಕಸ ಹಾಕಿ ಗಲೀಜು ಮಾಡುತ್ತಾರೆ. ಇದು ಸಾಂಕ್ರಮಿಕ ರೋಗಗಳು ಕಾರಣವಾಗುತ್ತದೆ ಎಂದು ಡಿಎಚ್ಒ ಡಾ.ವೆಂಕಟೇಶ್ ತಿಳಿಸಿದರು.
ಟೆಂಡರ್ ಆಗಿಲ್ಲ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಪಿ.ಶಿವಣ್ಣ, ರಾಜ್ಯಮಟ್ಟದಲ್ಲಿ ಟೆಂಡರ್ ಆಗದ ಕಾರಣ ಜಿಲ್ಲೆಗೆ ಜೂನ್-ಜುಲೈ ತಿಂಗಳಲ್ಲಿ ತೊಗರಿಬೇಳೆ ಸರಬರಾಜಾಗಿಲ್ಲ. ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಕೇಜಿಗೆ 90 ರಿಂದ 100 ರೂ. ದರ ಇದೆ. ಸರ್ಕಾರ ಕೇಜಿಗೆ 70 ರೂ.ಗಳಿಗಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡುವಂತಿಲ್ಲ ಅಂದಿದ್ದರಿಂದ ಟೆಂಡರ್ ಆಗಿರಲಿಲ್ಲ. ಈ ತಿಂಗಳು ಟೆಂಡರ್ ಆಗಿದ್ದು, ಆಗಸ್ಟ್ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ತೊಗರಿಬೇಳೆ ಕೊಡಲಾಗುವುದು ಎಂದು ಹೇಳಿದರು. ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಮುಖ್ಯ ಯೋಜನಾಧಿಕಾರಿ ಪದ್ಮಶೇಖರ ಪಾಂಡೆ ಸಭೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ