ನೀವು ಮಾಡಿದ ಸಾಲಕ್ಕೆ ಮೊದಲು ಲೆಕ್ಕ ಕೊಡಿ: ಸಂಸದ
Team Udayavani, Feb 23, 2021, 2:06 PM IST
ಮೈಸೂರು:ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನೀಡಿದ ತಮ್ಮ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 2.86 ಲಕ್ಷ ಕೋಟಿ ರೂ. ಸಾಲದ ಹೊರೆ ನೀಡಿದ ಲೆಕ್ಕವನ್ನು ಮೊದಲು ಕೊಡಿ, ಆ ನಂತರ ರಾಮಮಂದಿರದ ಲೆಕ್ಕ ಕೇಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಕಳೆದೊಂದು ವಾರದಿಂದ ರಾಮಮಂದಿರದ ಲೆಕ್ಕದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೆ, ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನೀವು ನಿಮ್ಮೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೀರಿ, ಅದರ ಅಂದಾಜು ಎಷ್ಟು ಅಂತ ಲೆಕ್ಕ ಕೇಳಿದ ಪತ್ರಕರ್ತರಿಗೆ, ನಾನು ಲೆಕ್ಕ ಕೊಡಲ್ಲ ಅಂತ ಹೇಳಿದ್ದೀರಿ.ಆದ್ರೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಲೆಕ್ಕ ಮಾತ್ರ ಕೇಳ್ತಿರಾ? ಇದೇಂತ ದ್ವಂದ್ವ ನಡೆ ನಿಮ್ಮದು ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.
ರಾಮಮಂದಿರಕ್ಕೆ ದೇಣಿಗೆ ನೀಡಿದವರು ಲೆಕ್ಕ ಕೇಳ್ಳೋದ್ರಲ್ಲಿ ಅರ್ಥವಿದೆ.
ಆದ್ರೆ ಒಂದು ರೂಪಾಯಿಯನ್ನು ದೇಣಿಗೆ ನೀಡದ ಸಿದ್ದರಾಮಯ್ಯನವರು ಅದ್ಯಾವ ಅರ್ಥದಲ್ಲಿ ಲೆಕ್ಕ ಕೇಳ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರ ಹೆಸರಲ್ಲೆ ರಾಮನಿದ್ದಾನೆ, ಅವರ ಊರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದಾರೆ. ಹಾಗಾಗಿ ಅವರು ಮುಸ್ಲಿಂಮರನ್ನು ಓಲೈಸೋದಕ್ಕೆ ಸುಮ್ಮನೆ ಹೇಳಿಕೆ ಕೊಡ್ತಾರೆ. ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸಿದರು.
1.86 ಲಕ್ಷ ಕೋಟಿ ರೂ. ಏನಾಯ್ತು? :
ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಬರುವ ಮುನ್ನ ರಾಜ್ಯ ಬೊಕ್ಕಸದ ಒಟ್ಟು ಸಾಲ 1 ಲಕ್ಷ ಕೋಟಿ ರೂ. ಇತ್ತು. ನೀವು ಬಂದು 5 ವರ್ಷ ಆಡಳಿತ ಮಾಡಿ ವಾಪಸ್ ಹೋಗುವಷ್ಟರಲ್ಲಿ, ಅದನ್ನು 2.86 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಿದ್ದೀರಿ, ನಿಮ್ಮ ಅವಧಿಯಲ್ಲಿ ಮಾಡಿದ 1.86 ಲಕ್ಷ ಕೋಟಿ ರೂ. ಸಾಲದ ಹಣ ಎಲ್ಲಿಗೆ ಹೋಯ್ತು, ಅಷ್ಟು ಹಣವನ್ನು ಯಾವುದಕ್ಕೆ ಖರ್ಚು ಮಾಡಿದಿರಿ ಅಥವಾ ಯಾವುದಕ್ಕೆ ದುರುಪಯೋಗ ಮಾಡಿದ್ರಿ ಅಂತ ಹೇಳಿ. ಆ ಮೇಲೆ ಅಯೋಧ್ಯೆಯ ರಾಮಮಂದಿರದ ಲೆಕ್ಕ ಕೇಳಿ ಎಂದು ಪ್ರತಾಪ್ ಸಿಂಹ ವಾಗ್ಧಾಳಿ ನಡೆಸಿದರು.
ಬಿಜೆಪಿ ಜತೆ ಜೆಡಿಎಸ್ ಕೈಜೋಡಿಸಲಿ :
ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ಮೈತ್ರಿಗೆ, ಜೆಡಿಎಸ್ನವರು ನಮ್ಮೊಂದಿಗೆ ಬಂದರೆ ಖುಷಿ. ಇಲ್ಲ ಅಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳು ಇವೆ. ಮೈಸೂರು ಮಹಾನಗರ ಪಾಲಿಕೆಗೆ ಏನು ಕೆಲಸ ಆಗಬೇಕೋ ಅದನ್ನು ಮಾಡಿಸಿಕೊಳ್ಳುತ್ತೇವೆ. ಇದನ್ನು ಅರ್ಥ ಮಾಡಿಕೊಂಡು ಜೆಡಿಎಸ್ ನಮ್ಮೊಂದಿಗೆ ಸಹಕರಿಸಬೇಕು. ಈ ಹಿಂದೆ ಪಾಲಿಕೆ ಮತ್ತು ಜಿಪಂನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನುಭವ ಚೆನ್ನಾಗಿತ್ತು. ಕಳೆದೆರೆಡು ವರ್ಷದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಲ್ಲಿ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದನ್ನು ಅರ್ಥಮಾಡಿಕೊಂಡು ಜೆಡಿಎಸ್ನವರು ಬಿಜೆಪಿಯೊಂದಿಗೆ ಕೈಜೋಡಿಸಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.