ಮೈಸೂರು:ವಿಭಜಕಕ್ಕೆ ಗುದ್ದಿ ಕಾರು ಪಲ್ಟಿ;3 ವಿದ್ಯಾರ್ಥಿಗಳು ಬಲಿ
Team Udayavani, Jan 31, 2018, 5:00 PM IST
ಮೈಸೂರು: ನಗರದ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಬುಧವಾರ ನಡೆದ ಕಾರು ಅವಘಡದಲ್ಲಿ ವಿದ್ಯಾರ್ಥಿನಿ ಸೇರಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ನಿಯಂತ್ರಣ ತಪ್ಪಿ ಕಾರು ವಿಭಜಕಕ್ಕೆ ಗುದ್ದಿ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಮಹಮದ್ ಫರಾನ್, ರಿಯಾನ್ ರೆಹಮಾನ್ ಮತ್ತು ದಿವ್ಯಾ ಎಂಬಾಕೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರಾದ ಆಸಿಂ ಮತ್ತು ಸ್ಫೂರ್ತಿ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕುವೆಂಪುನಗರ ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಹಲವು ಸುತ್ತು ಉರುಳಿ ಬಿದ್ದಿದ್ದು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳದಲ್ಲಿ ನೂರಾರು ಜನರು ಸೇರಿದ್ದರು.