ಮೈಸೂರು ಕೋರ್ಟ್ನಲ್ಲಿ ಸ್ಪೋಟ: ಮೂವರು ದೋಷಿಗಳು
ಬೆಂಗಳೂರಿನ ಎನ್ಐಎ ಕೋರ್ಟ್ನಿಂದ ತೀರ್ಪು ಅ.11ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಪ್ರಕಟ
Team Udayavani, Oct 9, 2021, 1:01 PM IST
Representative Image
ಬೆಂಗಳೂರು: ಐದು ವರ್ಷಗಳ ಹಿಂದೆ ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದಿದ್ದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿಷೇಧಿತ ಅಲ್-ಖೈದಾ ಸಂಘಟನೆ ಪ್ರೇರಿತ ಬೆಸ್ ಮೂಮೆಂಟ್ ಸಂಘಟನೆಯ ಮೂವರು ಉಗ್ರರನ್ನು ಬೆಂಗಳೂರಿನ ರಾಷ್ಟ್ರೀಯ ತನಿಖಾದಳ(ಎನ್ಐಎ) ಕೋರ್ಟ್ ಅಪರಾಧಿಗಳು ಎಂದು ಆದೇಶ ನೀಡಿದ್ದು, ಅ.11ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ತಮಿಳುನಾಡಿನ ನೈನಾರ್ ಅಬ್ಟಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಟಾಸ್(34), ಸಮ್ಸುನ್ ಅಬ್ದುಲ್ ಕರೀಂ ರಾಜ ಅಲಿಯಾಸ್ ಅಬ್ದುಲ್ ಕರೀಂ(36) ಮತ್ತು ದಾವೂದ್ಸುಲೈಮನ್(40) ಅಪರಾಧಿಗಳಾಗಿದ್ದಾರೆ. ಅವರ ಶಿಕ್ಷೆ ಪ್ರಮಾಣವನ್ನು ಅ.11ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಎನ್ಐಎ ಪರ ಸರ್ಕಾರಿ ಅಭಿಯೋಜಕರಾಗಿ ವಕೀಲ ಪಿ.ಪ್ರಸನ್ನ ಕುಮಾರ್ವಾದ ಮಂಡಿಸಿದ್ದರು.
ಇದನ್ನೂ ಓದಿ;- ‘ಸಲಗ’ನಿಗೆ ‘ಟಗರು’ ಸಾಥ್!
2016 ಆ.1ರಂದು ಮೈಸೂರಿನ ಚಾಮರಾಜಪುರಂ ಕೋರ್ಟ್ ಆವರಣದಲ್ಲಿರುವ ಸಾರ್ವಜನಿಕರ ಶೌಚಾಲಯದ ಬಳಿ ಅಡುಗೆಯ ಕುಕ್ಕರ್ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದರು. ಈ ಸಂಬಂಧ ಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದಲ್ಲಿ ಭಯೋತ್ಪಾದನೆ ಕರಿ ನೆರಳು ಕಂಡ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್ಐಎ ತನಿಖೆಗೆ ಆದೇಶಿಸಿತ್ತು.
ಬಳಿಕ ಎನ್ಐಎ ಅಧಿಕಾರಿಗಳು ಪ್ರತ್ಯೇಕವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿತ್ತು. 2017 ಮೇ 24ರಂದು ಕೋರ್ಟ್ಗೆ ಅವರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿತ್ತು.
ಅಪರಾಧಿಗಳ ಪೈಕಿ ನೈನಾರ್ ಅಬ್ಟಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಟಾಸ್ ಸ್ಫೋಟಕ ವಸ್ತುಗಳನ್ನು ತಯಾರು ಮಾಡಿದ್ದ. ಎರಡನೇ ಅಪರಾಧಿ ಅಬ್ದುಲ್ ಕರೀಂ ಕೋರ್ಟ್ ಆವರಣಕ್ಕೆ ಹೋಗಿ ಸಾರ್ವಜನಿಕರು ಯಾವ ಪ್ರಮಾಣದಲ್ಲಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದ. ಮೂರನೇ ಅಪರಾಧಿ ದಾವುದ್ ಸುಲೈಮನ್ ಬ್ಯಾಗ್ವೊಂದರಲ್ಲಿ ಅಡುಗೆ ಕುಕ್ಕರ್ ಒಳಗಡೆ ಸ್ಫೋಟಕ ಇಟ್ಟು ನ್ಪೋಟಿಸಿದ್ದ ಎಂಬುದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಐದು ಸ್ಫೋಟಕ ಪ್ರಕರಣ ಪತ್ತೆ: ಅಪರಾಧಿಗಳ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕದ ಮೈಸೂರು ಸೇರಿ ದೇಶದಲ್ಲಿಟ್ಟಿದ್ದ ಸ್ಫೋಟಕ ಪ್ರಕರಣಗಳು ಪತ್ತೆಯಾಗಿವೆ. ಅಲ್-ಖೈದಾ ಸಂಘಟನೆಯಿಂದ ಪ್ರೇರಣೆಗೊಂಡು ಸ್ಫೋಟ ನಡೆಸುತ್ತಿದ್ದ ಅಪರಾಧಿಗಳು, 2016 ಏಪ್ರಿಲ್ 7ರಂದು ಆಂಧ್ರಪ್ರದೇಶದ ಚಿತ್ತೂರು ಕೋರ್ಟ್, ಮೇ 15ರಂದು ಕೇರಳದ ಕೊಲ್ಲಂ ಕೋರ್ಟ್, ಸೆ.12 ರಂದು ಆಂಧ್ರಪ್ರದೇಶದ ಚಿತ್ತೂರು ಕೋರ್ಟ್, ನವೆಂಬರ್ 1ರಂದು ಕೇರಳದ ಮಲ್ಲ ಪುರಂ ಕೋರ್ಟ್ ಆವರಣ ಮತ್ತು ಆ.1ರಂದು ಮೈಸೂರು ಕೋರ್ಟ್ ಆವರಣದ ಸ್ಫೋಟಕ ಪ್ರಕರಣಗಳು ಪತ್ತೆಯಾಗಿವೆ ಎಂದು ಎನ್ಐಎ ತಿಳಿಸಿದೆ.
ಅಲ್ಖೈದಾ ಪ್ರೇರಿತ ಬೆಸ್ಮೂಮೆಂಟ್ ತಮಿಳುನಾಡು ಮೂಲದ ಅಪರಾಧಿಗಳು ಅಲ್ಖೈದಾ ಸಂಘಟನೆ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಸಿದ್ಧಾಂತಗಳಿಂದ ಪ್ರೇರಿತಗೊಂಡು ನೈನಾರ್ ಅಬ್ಟಾಸ್ ಅಲಿ ಅಲಿಯಾಸ್ ಲೈಬ್ರರಿ ಅಬ್ಟಾಸ್ ಮತ್ತು ದಾವೂದ್ ಸುಲೈಮನ್ 2015ರಲ್ಲಿ ತಮಿಳುನಾಡಿನಲ್ಲಿ ಬೆಸ್ ಮೂಮೆಂಟ್ ಸಂಘಟನೆ ಸದಸ್ಯರಾಗಿದ್ದರು. ನಂತರ ಸಾಕಷ್ಟು ಮಂದಿಯನ್ನು ಸಂಘಟನೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ತೊಡಗಿದ್ದರು.
ಈ ವೇಳೆ ಸರ್ಕಾರಿ ಕಚೇರಿಗಳು, ಮುಖ್ಯವಾಗಿ ನ್ಯಾಯಾಲಯಗಳಿಗೆ ಬೆದರಿಕೆಯೊಡ್ಡಲು ಸಂಚು ರೂಪಿಸಿದ್ದರು. ಅಲ್ಲದೆ, ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಆದಂತಹ ಅನ್ಯಾಯದ ವಿರುದ್ಧ ಹೋರಾಟದ ಹೆಸರಿನಲ್ಲಿ ಕೋರ್ಟ್ಗಳು, ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಮತ್ತು ಮುಖ್ಯವಾಗಿ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆದರಿಕೆಯೊಡುತ್ತಿದ್ದರು ಎಂದು ಎನ್ಐಎ ತಿಳಿಸಿದ್ದಾರೆ.