ಭಾರೀ ಮಳೆಗೆ ನಲುಗಿದ ಮೈಸೂರಿಗರು
ಗುರುವಾರ ಸಂಜೆ ಭರ್ಜರಿ ಮಳೆ|ಧರೆಗುರುಳಿದ ಮರಗಳು, ತುಂಡಾದ ವಿದ್ಯುತ್ ಕಂಬ; ಕತ್ತಲೆಯಲ್ಲಿ ಜನತೆ
Team Udayavani, May 25, 2019, 5:03 PM IST
ಮೈಸೂರು: ನಗರದಲ್ಲಿ ಗುರುವಾರ ಸಂಜೆ ಬಿದ್ದ ಭಾರೀ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಹಲವು ಪ್ರದೇಶಗಳು ಹಾನಿಗೊಳಗಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಗುರುವಾರ ಸಂಜೆ 5.30ಕ್ಕೆ ಆರಂಭವಾದ ಭಾರೀ ಮಳೆ, ಗಾಳಿ ಸಹಿತ ಜೋರು ಮಳೆಗೆ ನಗರದ 50ಕ್ಕೂ ಹೆಚ್ಚು ಪ್ರಮುಖ ರಸ್ತೆಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಮುರಿದು ಬಿದ್ದು, ಅಪಾರ ಹಾನಿಯಾಗಿದೆ. ದೊಡ್ಡ, ದೊಡ್ಡ ಮರಗಳು ಉರುಳಿ ಬಿದ್ದ ಪರಿಣಾಮ 40ಕ್ಕೂ ಹೆಚ್ಚು ವಿದ್ಯುತ್ ಕಂಬ ತುಂಡಾಗಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿತ್ತು.
ಮನೆಗಳಿಗೆ ನುಗ್ಗಿದ ನೀರು:ಕುವೆಂಪು ನಗರ, ಜಯನಗರ, ಸರಸ್ವತಿಪುರಂ, ಚಾಮರಾಜಪುರಂ, ಕೃಷ್ಣಮೂರ್ತಿಪುರಂ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್, ಟೆಲಿಫೋನ್ , ಕೇಬಲ್ ಸಂಪರ್ಕವಿಲ್ಲದೇ ಜನರು ಪರದಾಡು ವಂತಾಯಿತು. ಮಳೆಯಿಂದ ಕುವೆಂಪುನಗರ, ಜಯ ನಗರ ಹಾಗೂ ಸರಸ್ವತಿಪುರಂನಲ್ಲಿ ಹೆಚ್ಚು ಹಾನಿಯಾಗಿದ್ದು, 2 ಕಾರು, ರಸ್ತೆ ಬದಿಯ ಪೆಟ್ಟಿಗೆ ಅಂಗಡಿಗಳು ಹಾಗೂ ಬೈಕ್ಗಳಿಗೆ ಹಾನಿಯಾಗಿದೆ. ಜೊತೆಗೆ ಇಟ್ಟಿಗೆಗೂಡಿನಲ್ಲಿ ಮನೆ ಚಾವಣಿ ಹಾರಿಹೋಗಿರುವ ಘಟನೆ ನಡೆದಿದೆ. ಇದಲ್ಲದೇ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಕೆಲವು ಮನೆಗಳಿಗೆ ನೀರು ತುಂಬಿಕೊಂಡಿತ್ತು.
ಶುಕ್ರವಾರ ರಾತ್ರಿ ಮರ ಹಾಗೂ ತುಂಡಾದ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ಮುಗಿಯಲಿದ್ದು, ನಂತರ ವಿದ್ಯುತ್ ಕಂಬ ಹಾಗೂ ಸಂಪರ್ಕ ದುರಸ್ತಿ ಕಾಮಗಾರಿ ನಡೆಯಲಿದೆ. ಕುವೆಂಪು ನಗರ ಸೇರಿ ಹಲವು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಷ್ಟ. ಮರ ತೆರವು ಕಾರ್ಯಾಚರಣೆ ಹಾಗೂ ಕಂಬ ದುರಸ್ತಿಯಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಇಷ್ಟೇ ಅಲ್ಲದೆ ಹಲವು ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಮರ ಉರುಳಿರುವುದು, ವಿದ್ಯುತ್ ಸಂಪರ್ಕ ಕಡಿತ ಸೇರಿ ಮಳೆ ಹಾನಿ ಸಂಬಂಧ ಗುರುವಾರ ರಾತ್ರಿಯೇ ಪಾಲಿಕೆ ಕಂಟ್ರೋಲ್ ರೂಂಗೆ ನೂರಕ್ಕೂ ಹೆಚ್ಚು ದೂರು ಬಂದಿವೆ ಎಂದು ಅಧಿಕಾರಿಗಳು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಸರಸ್ವತಿ ಪುರಂ, ಕುವೆಂಪು ನಗರ, ಜಯ ನಗರ, ಕೃಷ್ಣಮೂರ್ತಿ ಪುರಂ, ಚಾಮರಾಜ ಪುರಂನಲ್ಲಿ ಹೆಚ್ಚು ಮರ ಉರುಳಿವೆ. ಕುವೆಂಪು ನಗರದ ಆದಿಚುಂಚನಗಿರಿ ರಸ್ತೆ, ಉದಯ ರವಿ ರಸ್ತೆಯ ಉದ್ದಕ್ಕೂ ಇಕ್ಕೆಲದಲ್ಲಿದ್ದ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯಾವರ್ಧಕ ಶಾಲಾ ಮುಂಭಾಗದ ರಸ್ತೆಯಲ್ಲಿ ಮರ ಬಿದ್ದು 2 ಕಾರು ಜಖಂಗೊಂಡರೆ, ಕುವೆಂಪು ನಗರ ಒಂದರಲ್ಲೇ 20ಕ್ಕೂ ಹೆಚ್ಚು ವಿದ್ಯುತ್ ಕಂಬ ಉರುಳಿವೆ. ನಗರದ ಬೇರೆ ಪ್ರದೇಶಗಳಲ್ಲಿ 10 ಕಂಬ ಸೇರಿ 30ಕ್ಕೂ ಹೆಚ್ಚು ವಿದ್ಯುತ್ ಕಂಬ ಮುರಿದು ಬಿದ್ದಿವೆ. ಶುಕ್ರವಾರ ಬೆಳಗ್ಗೆಯಿಂದಲೇ ಮರ ತೆರವು ಕಾರ್ಯಾಚರಣೆಯನ್ನು ಆಭಯ ತಂಡ ಆರಂಭಿಸಿ, ಮರ ತೆರವುಗೊಳಿಸಿದ ನಂತರ ವಿದ್ಯುತ್ ಕಂಬಗಳ ದುರಸ್ತಿ ಕಾಮಗಾರಿ ನಡೆಯಿತು. ರಾತ್ರಿ ಹೊತ್ತಿಗೆ ಕುವೆಂಪು ನಗರ, ಕೃಷ್ಣಮೂರ್ತಿಪುರಂ, ಚಾಮರಾಜಪುರಂ ಸೇರಿ ಮತ್ತಿತರರ ಪ್ರದೇಶಕ್ಕೆ ವಿದ್ಯುತ್ ಹಾಗೂ ಕೇಬಲ್ ಸಂಪರ್ಕ ಲಭ್ಯವಾಯಿತು. ಅಗ್ರಹಾರ, ರಾಮಾನುಜ ರಸ್ತೆ, ಶಾಂತಲ ಚಿತ್ರ ಮಂದಿರ, ಸರಸ್ವತಿ ಪುರಂ ಬೇಕ್ಪಾಯಿಂಟ್ ವೃತ್ತ, ಅಶೋಕ ಪುರಂ, ಜಗನ್ಮೋಹ ಅರಮನೆ ಸಮೀಪ, ಗಾಯಿತ್ರಿ ಪುರಂ, ಕೆ.ಜಿ.ಕೊಪಲ್, ಜೆ.ಪಿ.ನಗರ, ದೊಡ್ಡೆಕೆರೆ ಮೈದಾನ, ಮಾನಸಗಂಗೋತ್ರಿ ಕ್ಯಾಂಪಸ್ ಬಳಿ ಒಂದೆರಡು ಮರಗಳು ಉರುಳಿವೆಯಾದರೂ ವಿದ್ಯುತ್ ಕಂಬಗಳ ಹೊರತಾಗಿ ಯಾವುದೇ ಹಾನಿಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ