ಟಿಪ್ಪು ಬಂದಾಗಲೇ ಹೆದರಲಿಲ್ಲ,ಸಿದ್ದು ಸುಲ್ತಾನ್ ಗೆ ಹೆದರುತ್ತೇವಾ?: ಪ್ರತಾಪ್ ಸಿಂಹ
2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದರು...
Team Udayavani, Aug 22, 2022, 3:48 PM IST
ಮೈಸೂರು: ”ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ. ಸಿದ್ದು ಸುಲ್ತಾನ್ ಬಂದರೇ ಹೆದರುತ್ತೇವಾ” ಎಂದು ಸಂಸದ ಪ್ರತಾಪ್ ಸಿಂಹ ಆಗಸ್ಟ್ 26 ರ ”ಮಡಿಕೇರಿ ಚಲೋ” ಕುರಿತು ಸೋಮವಾರ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.
”ಸಿದ್ದರಾಮಯ್ಯ ಅವರೇ ಮೈಸೂರು, ಮಂಡ್ಯ, ಹಾಸನ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ” ಎಂದು ಸವಾಲು ಹಾಕಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ ಎಂಬ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಸಂಸದ ಪ್ರತಾಪಸಿಂಹ ತಿರುಗೇಟು ನೀಡಿ ”ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ. ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ” ಎಂದರು.
ಗಂಭೀರ ಆರೋಪ
”ಸಿದ್ದರಾಮಯ್ಯ ಪದೇ ಪದೇ ಈ ರೀತಿ ಮಾಡುತ್ತಾರೆ. 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ.ಈಗ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.
”ಮಾಂಸ ತಿನ್ನಲು ಯಾವ ದೇವರು ಹೇಳಿಲ್ಲ.ಹಂದಿ ಸಹಾ ಆಹಾರ ಪದ್ದತಿ. ಅದನ್ನು ತಿನ್ನಬೇಡಿ ಅಂತಾ ಯಾವ ದೇವರು ಹೇಳಿಲ್ಲ.ಜಮೀರ್ ಅಹಮದ್ ಹಾಗೂ ಆತನ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಿ.ನೀವು ಅದನ್ನು ಹೇಳುವುದಿಲ್ಲ. ನಿಮಗೆ ಆ ರೀತಿ ಹೇಳಲು ಧೈರ್ಯ ಇಲ್ಲ” ಎಂದು ಸವಾಲು ಹಾಕಿದರು.
ಸಂಪತ್ ಬಿಜೆಪಿ ಕಾರ್ಯಕರ್ತ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಪೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗುವುದಿಲ್ಲ.ಆತ ನನ್ನ ಚುನಾವಣೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾನೆ” ಎಂದರು.
”ಬಳ್ಳಾರಿ ಪಾದಯಾತ್ರೆ ಮಾಡುವಾಗ ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರು ಸಿದ್ದರಾಮಯ್ಯ ಜತೆಯಲ್ಲಿದ್ದರು. ಗಣಿ ವಿಚಾರದ ಬಗ್ಗೆ ರಾಜ್ಯದ ಜನರಲ್ಲೂ ಆಕ್ರೋಶವಿತ್ತು.ಆ ಪಾದಯಾತ್ರೆ ಮಾಡಿದ್ದಕ್ಕೆ ಅರ್ಥವಿತ್ತು. ನಂತರ ನಡೆದ ಚುನಾವಣೆಯಲ್ಲಿ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಅಂತಾ ಬಿಜೆಪಿ ಛಿದ್ರವಾಗಿತ್ತು.ಅದರ ಫಲವಾಗಿ ಮುಂದಿನ ಚುನಾವಣೆಯಲ್ಲಿ 119 ಸ್ಥಾನ ಗೆಲ್ಲೋಕೆ ಸಾಧ್ಯವಾಯಿತು.ಈಗ ಯಾವ ಕಾರಣಕ್ಕೆ ಕೊಡಗಿನ ಮಕ್ಕಳ ಮೇಲೆ ಸಿದ್ದರಾಮಯ್ಯ ದಂಡೆತ್ತಿ ಬರಬೇಕು.ಟಿಪ್ಪು ಸುಲ್ತಾನ್ ಕೂಡ ನಿಮ್ಮಂತೆ ದಂಡೆತ್ತಿ ಬಂದು ಸೋತಿದ್ದ.ಕೊನೆಗೆ ಮೋಸದಿಂದ ಕೊಡಗಿನವರನ್ನ ಕೊಂದು ಹಾಕಿದ್ದ.ನಿಮ್ಮ ಪಾದಯಾತ್ರೆಗೆ ನಾವು ಉತ್ತರ ಕೊಡುವುದಿಲ್ಲ.ಕೊಡಗಿನ ಮಕ್ಕಳೇ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.
ಕೊಡಗಿಗೆ ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ವಿಚಾರಕ್ಕೆ ಸಂಬಂಧಿಸಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುಪ್ತಚರ ವರದಿ ಆಧರಿಸಿ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.