ರೇಷನ್ ಬೇಕು ಹಣ ಬೇಡ, 6 ದಿನ ಹಾಲು ಕೊಡಿ
Team Udayavani, Jan 21, 2017, 12:15 PM IST
ಮೈಸೂರು: ಅನ್ನಭಾಗ್ಯ ಅಂತಾ ತಲೆಗೆ 5 ಕೆಜಿ ಅಕ್ಕಿ ಕೊಟ್ರೆ ಎಲ್ಲಿ ಸಾಲ್ತದೆ, ಅಕ್ಕಿ ಹೆಚ್ಚು ಕೊಡಿ… ರೇಷನ್ ಬದಲು ಹಣ ಕೊಡೋ ಸಿಸ್ಟಂ ಬರ್ತದೆ ಅಂತಾವೆ, ನಮ್ಗೆ ಹಣ ಬೇಡಾ ರೇಷನ್ನೇ ಕೊಡಿ…. ಕ್ಷೀರಭಾಗ್ಯದಡಿ 3 ದಿನದ ಬದಲಿಗೆ ವಾರ ಪೂರ್ತಿ ಹಾಲು ಕೊಡಿ, ಬರೀ ಹಾಲು ಕುಡಿಯಲಾಗಲ್ಲ, ಬಾದಾಮಿ, ಡ್ರೆ„ಫೂ›ಟ್ಸ್, ಚಾಕ್ಲೇಟ್ ಫ್ಲೇವರ್ ಹೀಗೆ ದಿನಕ್ಕೊಂದು ಫ್ಲೇವರ್ ಹಾಕಿ ಕೊಡಿ ನಾವೂ ಚಟುವಟಿಕೆಯಿಂದ ಇರ್ತೇವೆ.
ನಮಗೂ ಸಿಗಬೇಕಾದ ಸವಲತ್ತುಗಳನ್ನು ಕೊಟ್ಟು ಸಮಾಜದಲ್ಲಿ ಗೌರವಯುತವಾಗಿ ಬಾಳಲು ಅವಕಾಶ ಮಾಡಿಕೊಡಿ…ಮಾತುಗಳು ಕೇಳಿಬಂದದ್ದು, ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಜನಮನ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ ಕಾರ್ಯಕ್ರಮದಲ್ಲಿ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ ಹಾಗೂ ಮನಸ್ವಿನಿ, ವಿದ್ಯಾಸಿರಿ, ಕ್ಷೀರಧಾರೆ, ಕೃಷಿಭಾಗ್ಯ ಹಾಗೂ ಪಶುಭಾಗ್ಯ, ಋಣಮುಕ್ತ, ವಸತಿ, ಶಾದಿಭಾಗ್ಯ, ರಾಜೀವ್ ಆರೋಗ್ಯ ಭಾಗ್ಯ ಯೋಜನೆಗಳ ಆಯ್ದ ಫಲಾನುಭವಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪಅವರು ಸುಮಾರು 3 ಗಂಟೆಗಳ ಕಾಲ ಸಂವಾದ ನಡೆಸಿ, ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಭಾಗ್ಯಗಳ ತಲಾ 8 ಮಂದಿ ಫಲಾನುಭವಿಗಳ ಅಭಿಪ್ರಾಯಗಳನ್ನು ಆಲಿಸಿ, ಅವರು ಎತ್ತಿದ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ನೀಡುತ್ತಾ, ಈ ಭಾಗ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಏನು ಮಾಡಬೇಕು ಎಂಬ ಸಲಹೆಗಳನ್ನು ಪಡೆದರು.
ಹೀಗೆ ವಿದ್ಯಾಸಿರಿ, ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ, ಋಣಮುಕ್ತ, ವಸತಿ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಫಲಾನುಭವಿಗಳು ತಮ್ಮ ಅಭಿಪ್ರಾಯಗಳನ್ನು ಸಚಿವರೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಶಾಸಕ ವಾಸು ಅಧ್ಯಕ್ಷತೆವಹಿಸಿದ್ದರು. ಮೇಯರ್ ಎಂ.ಜೆ.ರವಿಕುಮಾರ್, ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕಾಡಾ ಅಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾಧಿಕಾರಿ ಡಿ.ರಂದೀಪ್, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅನ್ನಭಾಗ್ಯ: 5 ಕೆಜಿ ಅಕ್ಕಿ ಯಾವುದಕ್ಕೂ ಸಾಲಲ್ಲ
ಅನ್ನಭಾಗ್ಯ ಯೋಜನೆಯಡಿ ತಲೆಗೆ 5 ಕೆಜಿ ಕೊಡುತ್ತಿರುವುದು ಸಾಲುತ್ತಿಲ್ಲ. ಹೆಚ್ಚು ಕೊಡಿ. ರೇಷನ್ ಬದಲು ಹಣ ಕೊಡ್ತೇವೆ ಎನ್ನಲಾಗುತ್ತಿದೆ. ನಮಗೆ ಹಣ ಬೇಡ ರೇಷನ್ ಕೊಡಿ. ಅಕ್ಕಿ ಜತೆಗೆ ರಾಗಿ, ಗೋಧಿ ಕೊಡುತ್ತಿರುವುದರಿಂದ ಅನುಕೂಲವಾಗ್ತಿದೆ. ಕರೆಂಟ್ ಅಭಾವ ಇರೋದ್ರಿಂದ ಸೀಮೆಎಣ್ಣೆ ಬುಡ್ಡಿ ಹಚ್ಚಲಾದರೂ 1 ಲೀಟರ್ ಸೀಮೆಎಣ್ಣೆ ಕೊಡಿ. ಅಕ್ಕಿ ಜತೆಗೆ ಬೇಳೆಕಾಳು ಕೊಡಿ. ಪುಡಿ ಉಪ್ಪಿನ ಗುಣಮಟ್ಟ ಸರಿಯಿಲ್ಲ. ನೀರಿಗೆ ಹಾಕಿದರೆ ಬಣ್ಣ ಬರುತ್ತೆ. ಹೀಗಾಗಿ ಪುಡಿ ಉಪ್ಪಿನ ಬದಲು ಗುಣಮಟ್ಟದ ಹರಳು ಉಪ್ಪು$ಕೊಡಿ ಎಂದು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸಚಿವರಿಗೆ ಮನವಿ ಹಾಗೂ ಸಲಹೆ ನೀಡಿದರು.
ಕ್ಷೀರಭಾಗ್ಯ: 6 ದಿನನೂ ಹಾಲು ಕೊಡಿ, ಡ್ರೈಫೂಟ್ಸ್ ಬೇಕು
ಸಚಿವರ ಜತೆಗೆ ಕುಳಿತು ಹರಳು ಹುರಿದಂತೆ ಕ್ಷೀರಭಾಗ್ಯದಿಂದಾಗುವ ಪ್ರಯೋಜನಗಳನ್ನು ಶಾಲಾ ಮಕ್ಕಳು ಮಾತನಾಡಿದ್ದನ್ನು ಕಂಡು ಬೆರಗಾದ ಸಚಿವ ಮಹಾದೇವಪ್ಪ , ಇದನ್ನೆಲ್ಲ ಹೀಗೇ ಹೇಳಬೇಕು ಎಂದು ನಿಮ್ಮ ಮೇಷ್ಟ್ರುಗಳು ಹೇಳಿಕೊಟ್ಟಿದ್ದಾರೋ, ಇಲ್ಲ ನಿಮ್ಮ ಸ್ವಂತ ಅನುಭವ ಹೇಳುತ್ತಿದ್ದೀರೋ ಎಂದು ಪ್ರಶ್ನಿಸಿದರು. ನಮ್ಮ ಸ್ವಂತ ಅನುಭವದಿಂದಲೇ ಹೇಳುತ್ತಿದ್ದೇವೆ. ಹಾಲು ಕುಡಿಯುವುದರಿಂದ ಪೌಷ್ಟಿಕಾಂಶ ಹೆಚ್ಚುತ್ತೆ. ಹೀಗಾಗಿ ವಾರದಲ್ಲಿ 3 ದಿನದ ಬದಲಿಗೆ 6 ದಿನ ಕೊಡಿ, ಎಲ್ಲ ಮಕ್ಕಳೂ ಹಾಲು ಕುಡಿಯುವುದಿಲ್ಲ. ಹೀಗಾಗಿ 1 ದಿನ ಬಾದಾಮಿ ಹಾಲು, ಇನ್ನೊಂದು ದಿನ ಡ್ರೆ„ಫೂ›ಟ್ಸ್, ಚಾಕ್ಲೇಟ್ ಫ್ಲೇವರ್ ಸೇರಿದಂತೆ ಒಂದೊಂದು ದಿನ ಒಂದೊಂದು ಫ್ಲೇವರ್ ಹಾಕಿ ಕೊಟ್ಟರೆ ಉತ್ತಮ. ಪೌಡರ್ ಹಾಲಿನ ಬದಲು ರೈತರಿಂದಲೇ ನೇರವಾಗಿ ಹಾಲು ಖರೀದಿಸಿಕೊಡಿ, ರೈತರಿಗೂ ಲಾಭವಾಗುತ್ತೆ.
ಮನಸ್ವಿನಿ: ಕಮಿಷನ್ ಮುರಿದುಕೊಂಡು ಹಣ ಕೊಡ್ತಾರೆ
ಸರ್ಕಾರ ಕೊಡುವ 500 ರೂಪಾಯಿಯಲ್ಲಿ ಜೀವನ ನಡೆಸುವುದು ಕಷ್ಟ. ಅದರಲ್ಲೂ ಅನಾರೋಗ್ಯ ಸಮಸ್ಯೆ ಬಂದಾಗ ಚಿಕಿತ್ಸೆ ಪಡೆಯಲೂ ನಮ್ಮ ಬಳಿ ಹಣವಿರಲ್ಲ. ಪಿಂಚಣಿ ಹಣ ತಂದು ಕೊಡುವವರೂ ಸಹ ಕಮಿಷನ್ ಮುರಿದುಕೊಳ್ಳುತ್ತಾರೆ. ಯಜಮಾನ್ರು ನನ್ನನ್ನು ಬಿಟ್ಟು ಬೇರೆ ಮದುವೆ ಮಾಡಿಕೊಂಡವೆ. ಕೂಲಿ ಮಾಡ್ಕೊಂಡು ಜೀವನ ಸಾಗಿಸ್ತಿದ್ದೇನೆ. ಆಸ್ಪತ್ರೆಗೆ ಹೋದ್ರು ಲಂಚ ಇಲ್ಲದೆ ಒಳಗೆ ಬಿಡಲ್ಲ. ಔಷಧಿಗಳನ್ನೂ ಹೊರಗೆ ಬರೆದು ಕೊಡ್ತಾರೆ. ಹೀಗಾಗಿ ಪಿಂಚಣಿ ಮೊತ್ತ ಹೆಚ್ಚಳ ಮಾಡಿ.
ಮೈತ್ರಿ: ಮಂಗಳಮುಖೀಯರಿಗೆ ಸಾಲ ಸೌಲಭ್ಯ ಕೊಡಿ
ಮೈತ್ರಿ ಯೋಜನೆ ತುಂಬಾ ಚೆನ್ನಾಗಿದೆ. ಆದರೆ, ಹಳ್ಳಿಗಾಡಿನ ಜನರಿಗೆ ಇನ್ನೂ ಈ ಯೋಜನೆಯ ಪರಿಚಯವಾಗಿಲ್ಲ. ಮಂಗಳಮುಖೀ ಯರನ್ನು ಗಣತಿ ಮಾಡಿ ಯೋಜನೆ ಜಾರಿ ಮಾಡಿ. ಕೆಲವು ಜನರಿಂದ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಮಂಗಳಮುಖೀಯರೂ ಸ್ವಸಹಾಯ ಗುಂಪುಗಳನ್ನು ಮಾಡಿಕೊಂಡಿದ್ದೇವೆ. ನಮಗೂ ಇತರರಂತೆ ಸಾಲ ಸೌಲಭ್ಯ ಕೊಡಿ ಎಲ್ಲರಂತೆ ಗೌರವಯುತವಾಗಿ ಬಾಳುವ ಆಸೆ ನಮಗೂ ಇದೆ.
ಶಾದಿ ಭಾಗ್ಯ: 2 ಮಕ್ಕಳಾದ್ರು ಶಾದಿಭಾಗ್ಯದ ಹಣ ಬಂದಿಲ್ಲ
ಮದುವೆಯಾಗಿ 2 ಮಕ್ಕಳಾದ್ರು ಶಾದಿಭಾಗ್ಯದ ಹಣ ಬಂದಿಲ್ಲ. ಜತೆಗೆ ಸರ್ಕಾರ ಕೊಡುವ 50 ಸಾವಿರದಲ್ಲಿ ಈಗಿನ ಕಾಲದಲ್ಲಿ ಮದುವೆ ಮಾಡಲಾಗಲ್ಲ. ಒಂದು ಲಕ್ಷ ರೂ. ಕೊಡಿ. ಮದುವೆಯಾದ ನಂತರ ಹಣ ಬಂದರೆ, ಅದು ಗಂಡನ ಮನೆ ಪಾಲಾಗುತ್ತದೆ. ಹೀಗಾಗಿ ಮದುವೆ ಸಂದರ್ಭದಲ್ಲೇ ಹಣ ಕೊಡಿ.
ಜನಮನ ಮೌಲ್ಯಮಾಪನದ ವೇದಿಕೆ
ಮೈಸೂರು: ಸರ್ಕಾರ ರೂಪಿಸಿರುವ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪುತ್ತಿವೆಯೇ, ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿ ಯಾಗಿಸಬೇಕೆ ಎಂದು ತಿಳಿದುಕೊಳ್ಳಲು ಆಯೋಜಿಸಿರುವ ಜನಮನ ಕಾರ್ಯಕ್ರಮ ಮೌಲ್ಯಮಾಪನದ ವೇದಿಕೆಯಂತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ, ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಜನಮನ ಫಲಾನುಭವಿಗಳೊಂದಿಗೆ ಜಿಲ್ಲಾ ಸಚಿವರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರು ಸರ್ಕಾರದ ಯೋಜನೆಗಳ ಫಲ ಪಡೆದ ನಂತರ ಜೀವನಮಟ್ಟದಲ್ಲಿ ಉಂಟಾದ ಬದಾಲಾವಣೆಗಳ ಬಗ್ಗೆ ಫಲಾನುಭವಿಗಳು ನೇರವಾಗಿ ತಮ್ಮ ಅಭಿಪ್ರಾಯ ಹಂಚಿಕೆ ಮಾಡಿಕೊಂಡಿದ್ದಾರೆ. ಕೆಲವು ಯೋಜನೆಗಳಲ್ಲಿ ಹಣ ಬಿಡುಗಡೆ ನಿಧಾನವಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!