ಕಾಲಹರಣ ಮಾಡುವ ಅಧಿಕಾರಿಗೆ ನೋಟಿಸ್
Team Udayavani, Aug 1, 2017, 12:00 PM IST
ತಿ.ನರಸೀಪುರ: ಕುಡಿಯುವ ನೀರು, ಮನೆ, ಮಳಿಗೆಗಳಿಂದ ಕಂದಾಯ ವಸೂಲಾತಿ ಮಾಡಲು ವಿಫಲರಾಗಿರುವ ಪುರಸಭೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಸ್ವಾಮಿ ಕಂದಾಯ ಅಧಿಕಾರಿ ರಾಣಿಗೆ ಸೂಚಿಸಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪುರಸಭೆ ಅಧಿಕಾರಿಗಳು ಕಂದಾಯ ವಸೂಲಾತಿ ಮಾಡುವಲ್ಲಿ ವಿಫಲರಾಗಿದ್ದು, ಪುರಸಭೆಯಲ್ಲಿ ಹಣದ ಕೊರತೆ ಎದುರಾಗಿ ಪುರಸಭೆ ವ್ಯಾಪ್ತಿಯ ಜನರಿಗೆ ಸಮರ್ಪಕವಾಗಿ ಮೂಲ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ. ಜೊತೆಗೆ ವಸೂಲಿಗಿಂತ ಅಧಿಕಾರಿಗಳ ವೇತನ ಜಾಸ್ತಿಯಾಗಿದೆ. ಅಲ್ಲದೇ ಕೆಲ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಕಾಲಹರಣ ಮಾಡುತ್ತಿದ್ದು ಇಂತಹ ಅಧಿಕಾರಿಗೆ ನೋಟಿಸ್ ಜಾರಿ ಮಾಡಬೇಕು ಎಂದರು.
ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳಿಂದ ಶುಲ್ಕ ವಸೂಲಿ ಮಾಡುವ ವ್ಯಕ್ತಿ ಸಿನಕ್ಕೊಂದು ರೀತಿಯ ಹಣ ಕಟ್ಟುತ್ತಿದ್ದು ಪುರಸಭೆಗೆ ಹಣ ವಂಚಿಸುತ್ತಿದ್ದಾನೆ. ಹಾಗಾಗಿ ಶೀಘ್ರದಲ್ಲೇ ಈ ಬಗ್ಗೆ ಟೆಂಡರ್ ಕರೆದು ಪ್ರತಿ ಬಸ್ಗೆ ಇಂತಿಷ್ಟು ಹಣ ಎಂದು ನಿಗದಿಪಡಿಸಬೇಕೆಂದು ಸಭೆಯಲ್ಲಿದ್ದ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಹಲವೆಡೆ ಪುರಸಭೆ ಸೇರಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ಅಂತಹ ಸ್ಥಳ ಗುರುತಿಸಿ ಬೇಲಿ ಹಾಕುವ ಜೊತೆಗೆ ನಾಮಫಲಕ ಅಳವಡಿಸಿ ಎಂದು ಸದಸ್ಯ ರಾಘವೇಂದ್ರ ಒತ್ತಾಯಿಸಿದರು. ಈಗಾಗಲೇ ಪಟ್ಟಣದ ಹಲವೆಡೆ ಅಕ್ರಮ ಒತ್ತುವರಿ ಜಾಗ ತೆರವುಗೊಳಿಸಲಾಗಿದ್ದು ಶೀಘ್ರದಲ್ಲೇ ಆ ಸ್ಥಳಕ್ಕೆ ಪುರಸಭೆಗೆ ಸೇರಿದ ಜಾಗವೆಂದು ನಾಮಫಲಕ ಅಳವಡಿಸಲಾಗುವುದೆಂದು ಮುಖ್ಯಾಧಿಕಾರಿ ನಾಗರತ್ನ ಸಭೆಯಲ್ಲಿ ತಿಳಿಸಿದರು.
ಪಟ್ಟಣದ ಮುರುಗನ್ ಟಾಕೀಸ್ ಎದುರಿನ ವಿನಾಯಕ ಕಾಲೋನಿಗೆ ತೆರಳುವ ರಸ್ತೆ ಸಂಪೂರ್ಣ ಹಳ್ಳಕೊಳ್ಳದಿಂದ ಕೂಡಿದೆ ಜೊತೆಗೆ ರಸ್ತೆ ಮಧ್ಯದಲ್ಲೇ ಬಾಳೆಮಂಡಿಗಳು ಆಕ್ರಮವಾಗಿ ತಲೆ ಎತ್ತಿದ್ದು ಕೂಡಲೇ ಅದನ್ನು ತೆರವುಗೊಳಿಸಿ ರಸ್ತೆ ದುರಸ್ತಿಪಡಿಸುವಂತೆ ಸದಸ್ಯರು ಮುಖ್ಯಾಧಿಕಾರಿಗೆ ಒತ್ತಾಯಿಸಿದರು.
ವಾಲ್ಮೀಕಿ ಹಾಗೂ ಬಂಗಾರಪ್ಪ ಬಡಾವಣೆ ನಿವಾಸಿಗಳ ಖಾಲಿ ನಿವೇಶನಕ್ಕೆ ಸಂಬಂಧಪಟ್ಟಂತೆ ಹಲವು ಜನರಿಗೆ ಮೂಲ ದಾಖಲಾತಿಗಳಿಲ್ಲದೇ ಇ-ಸ್ವತ್ಛತು ಮಾಡಿಕೊಳ್ಳಲು ತೊಂದರೆಯಾಗಿದೆ. ಹಾಗಾಗಿ ಮೂಲ ದಾಖಲಾತಿ ಇಲ್ಲದ ಜನರಿಗೆ ಇಸಿ ನೋಡಿ ಇ-ಸ್ವತ್ತು ಮಾಡಿಕೊಡುವಂತೆ ಸದಸ್ಯ ರಾಘವೇಂದ್ರ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದರು.
ಬಡಾವಣೆ ಹಲವು ನಿವಾಸಿಗಳಿಗೆ ಹಕ್ಕು ಪತ್ರ ಇದ್ದರೂ ತಮ್ಮ ನಿವೇಶನದ ಸ್ಥಳ ಗೊತ್ತಿಲ್ಲ ಹಾಗಾಗಿ ಶೀಘ್ರದಲ್ಲಿ ಮತ್ತೂಮ್ಮೆ ಜಾಗದ ಪರಿಶೀಲನೆ ನಡೆಸಿ ನಿವೇಶನ ಖಾತೆ ಮಾಡಿಕೊಡಲಾಗುವುದು ಇದಕ್ಕೆ ಸದಸ್ಯರು ಸಹಕಾರ ನೀಡಬೇಕೆಂದು ನಾಗರತ್ನಮ್ಮ ತಿಳಿಸಿದರು.
ಪುರಸಭೆ ವತಿಯಿಂದ ಮೂವರು ಪೌರ ಕಾರ್ಮಿಕರನ್ನು ಸಿಂಗಾಪುರ ಅಧ್ಯಯ್ಯನ ಪ್ರವಾಸಕ್ಕೆ ಕಳುಹಿಸಲು ಸರ್ಕಾರದ ಆದೇಶ ಮಾಡಿದೆ. ಹಾಗಾಗಿ ಸದಸ್ಯರು ಮೂವರು ಅರ್ಹ ಪೌರಕಾರ್ಮಿಕರನ್ನು ಸೂಚಿಸಬೇಕೆಂದು ಆರೋಗ್ಯಧಿಕಾರಿ ಚೇತನ್ಕುಮಾರ್ ಹೇಳಿದರು. ಸಿಂಗಾಪುರ ಪ್ರವಾಸಕ್ಕೆ ಇಚ್ಚಿಸುವ ಪೌರಕಾರ್ಮಿಕರನ್ನು ಗುರುತಿಸಿ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಿ ನಂತರ ಅರ್ಹರನ್ನು ಆಯ್ಕೆ ಮಾಡಿ ಕಳುಹಿಸಿಕೊಡುವಂತೆ ಸದಸ್ಯರು ಅಧಿಕಾರಿಗೆ ತಿಳಿಸಿದರು.
ಅಧ್ಯಕ್ಷೆ ಸುಧಾ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಪುಟ್ಟಸ್ವಾಮಿ, ಉಮೇಶ್, ಮಲ್ಲೇಶ್ ನಾಯ್ಕ, ಗುಲ್ಜರ್ಖಾನ್, ನಾಗೇಂದ್ರ, ಎನ್.ಮಹದೇವಸ್ವಾಮಿ, ಸಿ.ಮಹದೇವ, ರಾಜಮ್ಮ, ಮೀನಾಕ್ಷಿ, ಅಧಿಕಾರಿಗಳಾದ ಕಿರಿಯ ಎಂಜಿನಿಯರ್ ಮೈತ್ರಾವತಿ, ಯೋಜನಾಧಿಕಾರಿ ಕೆಂಪರಾಜು, ಜೆಇ ಪುರುಷೋತ್ತಮ್, ಲೆಕ್ಕ ಸಹಾಯಕ ವಿನಯ್, ಆಶಾರಾಣಿ ಇತರರು ಇದ್ದರು.