ಮುಕ್ತ ವಿವಿ ವಿದ್ಯಾರ್ಥಿಗಳಿಗೆ ಆನ್ಲೈನ್ ಉದ್ಯೋಗ ಮೇಳ
Team Udayavani, Apr 11, 2023, 2:27 PM IST
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ 15 ದಿನ ಪ್ಲೇಸ್ಮೆಂಟ್ ಉತ್ಸವ-2023 (ಉದ್ಯೋಗ ಮೇಳ) ಆಯೋಜಿಸಲಾಗಿದೆ ಎಂದು ಕೆಎಸ್ಒಯು ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ತಿಳಿಸಿದರು.
ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಕ್ತ ವಿವಿ ವಿದ್ಯಾ ರ್ಥಿಗಳ ಅನುಕೂಲಕ್ಕಾಗಿ ಪ್ರೊಫೈಲ್ ಇನ್ ಸಂಸ್ಥೆಯ ಸಹಯೋಗದಲ್ಲಿ ಏ.15ರಿಂದ 15 ದಿನ ಉದ್ಯೋಗ ಮೇಳವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿದೆ ಎಂದು ಹೇಳಿದರು. ಇದು ಮುಕ್ತ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಮೇಳ ಹಮ್ಮಿಕೊಂಡಿದ್ದು, ಎಂಬಿಎ, ಎಂಕಾಂ ಪದವೀಧರರಿಗೆ ಹೆಚ್ಚಿನ ಅವಕಾಶಗಳಿವೆ. ಅಂದಾಜು 10 ಕಂಪನಿಗಳಿಂದ 2 ಸಾವಿರ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ವಾರ್ಷಿಕ 3 ರಿಂದ 6 ಲಕ್ಷ ರೂ. ವರೆಗೆ ಅಧಿಕ ವೇತ ನದ ಉದ್ಯೋಗಗಳಿವೆ ಎಂದು ವಿವರಿಸಿದರು.
ಹತ್ತಿರದ ಸ್ಥಳದಲ್ಲಿ ಸಂದರ್ಶನ: ಮೂರು ಹಂತದಲ್ಲಿ ಪ್ರಕ್ರಿಯೆ ನಡೆಯಲಿದ್ದು, ಡಿಜಿಟಲ್ ಬಯೋಡಾಟಾ ಸಿದ್ಧಪಡಿಸಲು ಅಭ್ಯರ್ಥಿಗಳಿಗೆ ಸಹಾಯ ಮಾಡುವುದು, ಕಂಪನಿಗಳಿಗೆ ಅವಶ್ಯಕ ವಿರುವ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನೆ ಮಾಡುವುದು ಹಾಗೂ ಪ್ರಾಥಮಿಕ ಹಂತದ ಸಂದರ್ಶನ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆ ಯಾದ ಅಭ್ಯರ್ಥಿಗಳಿಗೆ ಅವರ ಹತ್ತಿರದ ಸ್ಥಳದಲ್ಲಿ ಮುಖಾಮುಖೀ ಸಂದರ್ಶನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
535 ಜನರಿಗೆ ಉದ್ಯೋಗ: ವಿವಿಧ ಭಾಗದಲ್ಲಿರುವ ಮುಕ್ತ ವಿವಿ ವಿದ್ಯಾರ್ಥಿಗಳು ತಮ್ಮ ಸ್ಥಳದಿಂದಲೇ ಆನ್ಲೈನ್ ಮೂಲಕ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಇದಕ್ಕೆ ಉಚಿತ ಪ್ರವೇಶ ಇದೆ. 2021ರಲ್ಲಿ ಆನ್ಲೈನ್ ಮೂಲಕ ಉದ್ಯೋಗ ಮೇಳ ಮಾಡಲಾಗಿತ್ತು. ಅದರಲ್ಲಿ 2,900 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಪೈಕಿ 535 ಜನರಿಗೆ ಉದ್ಯೋಗ ಸಿಕ್ಕಿದೆ ಎಂದು ಮಾಹಿತಿ ನೀಡಿದರು.
27ಕ್ಕೆ ನ್ಯಾಕ್ ಭೇಟಿ: ಮುಕ್ತ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಏ.27ಕ್ಕೆ ಭೇಟಿ ನೀಡಲಿದ್ದು, ಮೂರು ದಿನ ಪರಾಮರ್ಶೆ ನಡೆಸಲಿದೆ. ನ್ಯಾಕ್ ಸಮಿತಿ ಭೇಟಿಗೂ ಮುನ್ನವೇ ಆಂತರಿಕವಾಗಿ ಕಲ್ಪಿತ ಪರಿಶೀಲನಾ ಕಾರ್ಯ ನಡೆಯಲಿದ್ದು, ಶಿವಮೊಗ್ಗ, ತುಮಕೂರು, ಮೈಸೂರು ವಿವಿಯ ಪ್ರಾಧ್ಯಾಪಕರನ್ನು ಕರೆಸಿಕೊಂಡು ಇದನ್ನು ಕೈಗೊಳ್ಳಲಾಗುವುದು ಎಂದರು.
ಅಧ್ಯಯನ ಕೇಂದ್ರ ತೆರೆಯಲು ಚಿಂತನೆ: ಹೊಸ ಕೋರ್ಸ್ ಪ್ರಾರಂಭಿಸಲು ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆತರೆ ಡಾಟಾ ಸೈನ್ಸ್, ಎಂಸಿಎ, ಸೈಬರ್ ಸೆಕ್ಯೂರಿಟಿ, ಬಿಎಸ್ಡಬ್ಲ್ಯು, ಎಂಎಸ್ಡಬ್ಲ್ಯು, ಭೂವಿಜ್ಞಾನ ಕೋರ್ಸ್ ಆರಂಭಿಸಲಾಗುವುದು. ವಿವಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಣೆಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಕೇಂದ್ರ ತೆರೆಯಲಾಗು ವುದು. ಜತೆಗೆ, ಮೂಲಸೌಕರ್ಯ ಇರುವ ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಕೇಂದ್ರ ತೆರೆಯಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಕ್ತ ವಿವಿ ಕುಲಸಚಿವ ಪ್ರೊ. ಕೆ.ಎಲ್.ಎನ್.ಮೂರ್ತಿ, ಉದ್ದಿಮೆ ಸಂಸ್ಥೆ ಸಮನ್ವಯ ಘಟಕದ ಸಂಯೋಜಕಿ ಡಾ.ಎಚ್.ರಾಜೇಶ್ವರಿ, ಉದ್ಯೋಗ ಘಟಕದ ನಿರ್ದೇಶಕಿ ಡಾ.ಆರ್.ಎಚ್ .ಪವಿತ್ರಾ, ಪ್ರೊಫೈಲ್ ಇನ್ ಸಂಸ್ಥೆಯ ವೆಂಕಟೇಶ್ ಇದ್ದರು.