ಬೆಡ್ ಇಲ್ಲದ್ದಕ್ಕೆ ಆಸ್ಪತ್ರೆ ಹೊರಗೆ ಕುಳಿತ ರೋಗಿಗಳು
Team Udayavani, Apr 29, 2021, 1:36 PM IST
ಮೈಸೂರು: ಕೋವಿಡ್ ಎರಡನೇ ಅಲೆಗೆ ಮೈಸೂರು ತತ್ತರಿಸಿದ್ದು, ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಾಗಿರುವುದು ಒಂದೆಡೆಯಾದರೆ, ಆಸ್ಪತ್ರೆಗಳ ಮುಂದೆ ಚಿಕಿತ್ಸೆಗಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಸೋಮವಾರ 1,563, ಮಂಗಳವಾರ 2,042 ಕೋವಿಡ್ ಪ್ರಕರಣಗಳು ವರದಿಯಾದ ಬೆನ್ನಲ್ಲೆ ಮೈಸೂರು ನಗರದ ಜಿಲ್ಲಾಸ್ಪತ್ರೆ, ಕೆ.ಆರ್.ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್ ಹಾಸಿಗೆಗಳು ಸಂಪೂರ್ಣವಾಗಿ ರೋಗಿಗಳಿಂದ ತುಂಬಿಹೋಗಿದ್ದು, ಹೊಸ ರೋಗಿಗಳಿಗೆ ಹಾಸಿಗೆಗಳ ಕೊರತೆ ಎದುರಾಗಿದೆ.
ಬಹುತೇಕ ಪೂರ್ತಿ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸೋಂಕಿನ ತೀವ್ರತೆ ಹೆಚ್ಚಾಗಿರುವ ಪರಿಣಾಮ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 250 ಹಾಸಿಗೆಗಳಲ್ಲಿ ಬಹುತೇಕ ಬೆಡ್ ಭರ್ತಿಯಾಗಿವೆ. ಅಂತೆಯೇ 15 ವೆಂಟಿಲೇಟರ್ ಐಸಿಯು ಬೆಡ್ ಕೂಡ ಭರ್ತಿಯಾಗಿದೆ. ಇನ್ನು ನಗರದ ಕೆ.ಆರ್.ಆಸ್ಪತ್ರೆಯಲ್ಲಿ 200 ಆಕ್ಸಿಜನ್ ಬೆಡ್, ಕಲ್ಲುಬಿಲ್ಡಿಂಗ್ನಲ್ಲಿ 200 ಆಕ್ಸಿಜನ್ ಬೆಡ್, ಟ್ರಾಮಾ ಸೆಂಟರ್ನಲ್ಲಿ 100 ಆಕ್ಸಿಜನ್ ಬೆಡ್ ಸೇರಿ 500 ಬೆಡ್ ಹಾಗೂ 50ವೆಂಟಿಲೇಟರ್ ಬೆಡ್ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದ್ದು, ಅವುಗಳು ಭರ್ತಿಯಾಗಿವೆ.
ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಿಂದ 50ರಷ್ಟುಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆಂದೇ ಮೀಸಲಿಡಲಾಗಿದ್ದು,ಈಗಾಗಲೇ ಶೇ.95ರಷ್ಟು ಭರ್ತಿಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ತಂದೊಡ್ಡಿದೆ. ಗ್ರಾಮಾಂತರ ಪ್ರದೇಶದ ಸೋಂಕಿತರಿಗೆ ಸಮಸ್ಯೆಯಾಗದಂತೆ ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಈಗಾಗಲೇ ತಲಾ 5ರಂತೆ ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಜೊತೆಗೆ ಪ್ರತಿ ಆಸ್ಪತ್ರೆಗೂ 30 ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆಯಾಯ ತಾಲೂಕಿನಲ್ಲಿ ಸೋಂಕಿನ ತೀವ್ರತೆ ಆಧಾರದಲ್ಲಿ ಹಾಸಿಗೆ ಸೌಲಭ್ಯ ಹೆಚ್ಚಿಸಲಾಗುವುದು ಎಂದು ವೈದ್ಯಾಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.
ಚಿಕಿತೆಗೆಂದು ಕಾಯ್ದು ಕುಳಿತ ರೋಗಿಗಳು: ನಗರದಮೇಟಗಳ್ಳಿಯಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲಾ275 ಹಾಸಿಗೆಗಳು ಭರ್ತಿಯಾಗಿರುವುದರಿಂದ ತುರ್ತುಚಿಕಿತ್ಸೆಗಾಗಿ 40ಕ್ಕೂ ಹೆಚ್ಚು ಕೊರೊನಾ ರೋಗಿಗಳುಆಸ್ಪತ್ರೆಯ ಹೊರ ಭಾಗದಲ್ಲಿ ಕಾಯ್ದು ಕುಳಿತಿದ್ದ ದೃಶ್ಯಕಂಡು ಬಂದಿತು.
8 ಸಾವಿರಕ್ಕೇರಿದ ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 8ಸಾವಿರದ ಗಡಿ ದಾಟಿದೆ. ಜಿಲ್ಲೆಯಲ್ಲಿ ಕೊರೊನಾರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಹಾಗೂ ಖಾಸಗಿಆಸ್ಪತ್ರೆ ಸೇರಿದಂತೆ ಒಟ್ಟು 7 ಸಾವಿರದಷ್ಟು ಹಾಸಿಗೆಗಳಿದ್ದು,ಶೇ.90 ರಷ್ಟು ಭರ್ತಿಯಾಗಿವೆ. ಉಳಿದ 2,440 ಮಂದಿಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತಷ್ಟು ಕೋವಿಡ್ ಕೇರ್ ಸೆಂಟರ್ ಅಗತ್ಯ:ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ದ್ವಿಗುಣಗೊಂಡಿರುವ ಹಿನ್ನೆಲೆ ಎ ಸಿಮrಮ್ಯಾಟಿಕ್ ಇರುವ ರೋಗಿಗಳನ್ನು ಐಸೋಲೇಷನ್ನಲ್ಲಿಟ್ಟು ಚಿಕಿತ್ಸೆ ನೀಡಲು, ಮಂಡಕಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ಮಾದರಿಯ ಮತ್ತಷ್ಟು ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ.
ಇದರಿಂದ ಸೋಂಕಿತರಿಂದ ಬೇರೊಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ಸಿಬಂದಿ ಕೊರತೆ: ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ವೈದ್ಯ, ನರ್ಸ್, ಫಾರ್ಮಾಸಿಸ್ಟ್,ಪೆಥಾಲಜಿಸ್ಟ್, ಡಿ. ಗ್ರೂಪ್ ನೌಕರರ ಕೊರತೆ ಇದ್ದು, ಅಗತ್ಯ ಸಿಬ್ಬಂದಿ ಇಲ್ಲದ ಪರಿಣಾಮ ಸೋಂಕಿತರು ಚಿಕಿತ್ಸೆಗಾಗಿ ಹೆಣಗುವಂತಾಗಿದೆ.
ಕೆ.ಆರ್.ಆಸ್ಪತ್ರೆಯಲ್ಲಿ 200 ಹಾಸಿಗೆಗಳು ಶುಕ್ರವಾರದ ವೇಳೆಗೆ ಸಿದ್ಧವಾಗುತ್ತವೆ. ಅಲ್ಲದೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 5ವೆಂಟಿಲೇಟರ್ ಇದೆ. ಇದಲ್ಲದೆ ಜಿಲ್ಲೆಗೆ 600 ಆಕ್ಸಿಜನ್ ಹಾಸಿಗೆ,100 ವೆಂಟಿಲೇಟರ್ಗಳು ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸದ್ಯಕ್ಕೆ ಸರ್ಕಾರದಿಂದ 50 ವೆಂಟಿಲೇಟರ್ಗಳು ಬರಲಿವೆ. ಸೂಪರ್ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಹಾಗೂ ಪಿಕೆಟಿಬಿಯಲ್ಲಿ 400 ಆಕ್ಸಿಜನ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ.
ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ.
ಸತೀಶ್ ದೇಪುರ