ಕ್ಷೇತ್ರದ ಅಭಿವೃದ್ಧಿಗೆ ಜನತೆ ಬೆಂಬಲಿಸಿ
Team Udayavani, May 5, 2018, 12:31 PM IST
ತಿ.ನರಸೀಪುರ: ಪ್ರಸಕ್ತ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ರಣತಂತ್ರವನ್ನು ಅಭ್ಯರ್ಥಿಯಾಗಿ ನಾನು ರೂಪಿಸುವುದಕ್ಕಿಂತ ಮತದಾರರೆ ರೂಪಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ಅಶ್ವಿನ್ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಮೂಗೂರು ಗ್ರಾಮದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಮತವನ್ನು ಪಡೆದು ಗೆದ್ದ ನಂತರ ಜನರ ಕೈಗೆ ಸಿಗದ ಸಚಿವ ಮಹದೇವಪ್ಪರನ್ನು ಸೋಲಿಸಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಶಕ್ತಿ ಏನೆಂದು ಜನರೇ ತೋರಿಸುತ್ತಾರೆ.
ತಿ.ನರಸೀಪುರವನ್ನು ಸಿಂಗಾಪುರ ಮಾಡಿದ್ದೇನೆ ಎಂದು ವೇದಿಕೆಗಳಲ್ಲಿ ಮಾರುದ್ದ ಭಾಷಣ ಮಾಡುತ್ತಾರೆ. ಆದರೆ ಮೂಗೂರು ಗ್ರಾಮದ ಅಭಿವೃದ್ಧಿ ನೋಡಿದರೆ ಹಾಗೂ ಈ ಭಾಗದ ರೈತರ ನೋವನ್ನು ಗಮನಿಸಿದರೆ ಸಚಿವರು ಸಿಂಗಾಪುರ ಮಾಡಿಲ್ಲ, ನರಕಪುರ ಮಾಡಿದ್ದಾರೆಂದು ಟೀಕಿಸಿದರು.
ಎಂ.ಆರ್.ಶಿವಮೂರ್ತಿ ಮಾತನಾಡಿ, ಕಳೆದ 25 ವರ್ಷಗಳಿಂದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದ ಮೂಗೂರು ರಾಚೇಗೌಡರ ಕುಟುಂಬಕ್ಕೆ ಸಚಿವರು ಕಳೆದ 5 ವರ್ಷಗಳಿಂದ ನೀಡಿದ ಮಾನಸಿಕ ಹಿಂಸೆಯಿಂದ ಬೇಸತ್ತು ಈ ಬಾರಿ ಜೆಡಿಎಸ್ ಪಕ್ಷ ಗೆಲ್ಲಿಸಲು ಟೊಂಕ ಕಟ್ಟಿ ನಿಂತಿದ್ದೇವೆ.
ಮಹದೇವಪ್ಪ ಅವರನ್ನು ನಮ್ಮ ಕುಟುಂಬದಲ್ಲಿ ಒಬ್ಬರೆಂದು ಭಾವಿಸಿ ಅವರ ಗೆಲುವಿಗೆ ಶ್ರಮಿಸುತ್ತ ಬಂದೆವು. ಬಳಿಕ ಸಚಿವರು ನಮ್ಮ ಕುಟುಂಬವನ್ನು ತಾತ್ಸಾರವಾಗಿ ಕಂಡರು. ಅದರಲ್ಲೂ ಲೋಕೊಪಯೋಗಿ ಸಚಿವರಾದ ಮೇಲೆ ನಮಗೆ ಮಾನಸಿಕ ಹಿಂಸೆ ನೀಡಿದರು. ರಾಜಕೀಯವಾಗಿ ತುಳಿಯಲು ಪ್ರಯತ್ನಿಸಿದರು.
ಇದರಿಂದ ರೋಸಿಹೋದ ನಾವು ನಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅವರು ಕೊಟ್ಟಂತ ತೊಂದರೆ ಸವಾಲಾಗಿ ಸ್ವೀಕರಿಸಿ ಸಚಿವರ ಸೋಲಿಗೆ ಟೊಂಕ ಕಟ್ಟಿ ನಿಂತ್ತಿದ್ದೇವೆ ಎಂದರು. ಕ್ಷೇತ್ರಾದ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಮೂಗೂರು ಬಸವಣ್ಣ, ಮಾಜಿ ಅದ್ಯಕ್ಷರಾದ ಗೌಡ್ರು ಜಗದೀಶ್ಮೂರ್ತಿ, ಕುರುಬೂರು ವೀರೇಶ್, ಅಧ್ಯಕ್ಷರಾದ ಶಿವಕುಮಾರ್, ಮುಖಂಡರಾದ ಕು.ಶಿ.ಬೃಂಗೀಶ್, ಕನ್ನಹಳ್ಳಿ ಚಿಕ್ಕಸ್ವಾಮಿ,
ಯುವ ಘಟಕದ ಅಧ್ಯಕ್ಷ ದಿಲೀಪ್ಕುಮಾರ್, ಎಸ್ಸಿ/ಎಸ್ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೊಸಪುರ ಕೆ.ಮಲ್ಲು, ಬಿಎಸ್ಪಿ ಮುಖಂಡರಾದ ಕೆ.ಎನ್.ಪ್ರಭುಸ್ವಾಮಿ, ಬಿ.ಮಹದೇವಸ್ವಾಮಿ, ಜೆಡಿಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೂದಹಳ್ಳಿ ಸಿದ್ದರಾಜು, ಕುಮಾರ್, ಅರವಿಂದ್ ಮತ್ತಿತರರು ಹಾಜರಿದ್ದರು.