ಸತತ ಅಭ್ಯಾಸದಿಂದ ಸಾಧನೆ ಸಾಧ್ಯ
Team Udayavani, Aug 28, 2018, 12:07 PM IST
ಹುಣಸೂರು: ಕ್ರೀಡಾಪಟುಗಳಲ್ಲಿ ಸತತ ಅಭ್ಯಾಸವಿದ್ದಲ್ಲಿ ಮಾತ್ರ ಸಾಧನೆಗೈಯಲು ಸಾಧ್ಯವೆಂದು ಜಿಪಂ ಮಾಜಿ ಸದಸ್ಯ ಸಿ.ಟಿ.ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲೂಕಿನ ಚಿಲ್ಕುಂದದಲ್ಲಿ ಅಲ್ಲಿನ ಸರ್ಕಾರಿ ಪ್ರೌಢಶಾಲೆ ಪ್ರಾಯೋಜಕತ್ವದಲ್ಲಿ ನಡೆದ ಹುಣಸೂರು ನಗರ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರತಿಭೆ ಅಡಗಿರುತ್ತದೆ. ಯಾವುದಾದರೊಂದು ನಿರ್ದಿಷ್ಟ ಆಟವನ್ನು ಆಯ್ಕೆ ಮಾಡಿಕೊಂಡು ಸತತ ಅಭ್ಯಾಸ ಮಾಡಿದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಸಾಧ್ಯ ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಜಿಪಂ ಸದಸ್ಯೆ ಜಯಲಕ್ಷ್ಮೀ ರಾಜಣ್ಣ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳಲ್ಲಿ ಉಲ್ಲಾಸ ಉಂಟುಮಾಡಲಿದ್ದು, ಓದಿಗೂ ಪೂರಕವಾಗಿದ್ದು, ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕೆಂದು ಸೂಚಿಸಿದರು.
ತಾಪಂ ಉಪಾಧ್ಯಕ್ಷ ಪ್ರೇಮಕುಮಾರ್, ಗ್ರಾಪಂ ಅಧ್ಯಕ್ಷೆ ಸುಮಿತ್ರ, ಎಪಿಎಂಸಿ ಅಧ್ಯಕ್ಷ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಾಗಸುಂದರ್, ಎಸ್ಡಿಎಂಸಿ ಅಧ್ಯಕ್ಷ ಜಗದೀಶ್, ಮುಖ್ಯಶಿಕ್ಷಕಿ ಮಾಲತಿ, ದೈಹಿಕ ಶಿಕ್ಷಕ ಶಿವರುದ್ರಪ್ಪ, ಶಿಕ್ಷಕರಾದ ಲೋಕೇಶ್ ಗ್ರಾಮಸ್ಥರು ಹಾಜರಿದ್ದರು. ಕ್ರೀಡಾಕೂಟದಲ್ಲಿ ಹುಣಸೂರು ನಗರದ ಸಂತಜೋಸಫರ ಪ್ರೌಢಶಾಲೆಯ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡರೆ, ಚಿಲ್ಕುಂದ ಪ್ರೌಢಶಾಲೆ ಕ್ರೀಡಾಪಟುಗಳು ದ್ವಿತೀಯ ಸ್ಥಾನ ಗಳಿಸಿದರು.