ಭಗವದ್ಗೀತೆ ಪಠಣದಿಂದ ವ್ಯಕ್ತಿತ್ವ ಬೆಳವಣಿಗೆ : ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಅಭಿಮತ
Team Udayavani, Dec 5, 2022, 9:52 PM IST
ಮೈಸೂರು: ಗೀತೆಯನ್ನು ನಿತ್ಯ ಪಠಣ ಮಾಡುವುದರಿಂದ, ಮನುಷ್ಯನ ಜೀವನ ಮತ್ತು ವ್ಯಕ್ತಿತ್ವದ ಸಮಗ್ರ ಬೆಳವಣಿಗೆಯಾಗುತ್ತದೆ’ ಎಂದು ಸುಪ್ರಸಿದ್ಧ ಪ್ರವಚನಕರಾದ ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಅಭಿಪ್ರಾಯಪಟ್ಟರು.
ಮೈಸೂರು ನಗರದ ಅಗ್ರಹಾರದಲ್ಲಿರುವ ಉತ್ತರಾದಿ ಮಠದ ರಸ್ತೆಯಲ್ಲಿರುವ ಶ್ರೀ ಉತ್ತರಾದಿ ಮಠದ ಆವರಣದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಗೀತಾ ಜಯಂತಿ ಹಾಗೂ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ‘ಗೀತೆಯ ಭಾಷೆ ಸುಲಭವಾಗಿ ಅರಿಯುವಷ್ಟು ಸರಳವಾಗಿದ್ದರೂ ಆಳವಾದ ಅರ್ಥಗಳನ್ನು ಅದು ಒಳಗೊಂಡಿದೆ. ಆಧ್ಯಾತ್ಮಿಕವಾಗಿ ಅಷ್ಟೇ ಅಲ್ಲದೆ, ಬದುಕಿಗೂ ಗೀತೆ ಮಾರ್ಗದರ್ಶಿಯಾಗಿದೆ’ ಎಂದರು.
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಭಗವದ್ಗೀತೆ, ಮಾನವೀಯ ಮೌಲ್ಯಗಳ ಅಮೂಲ್ಯ ಗ್ರಂಥ,ಭಗವದ್ಗೀತೆ ಗ್ರಂಥವಷ್ಟೇ ಅಲ್ಲ; ಜೀವನದ ಮಾರ್ಗದರ್ಶಕವೂ ಆಗಿದೆ. ಇಡೀ ಮನುಕುಲಕ್ಕೆ ಸಂಬಂಧಿಸಿದ ಗ್ರಂಥ ಇದಾಗಿದೆ ಎಂದು ಹೇಳಿದರು.
ಶ್ರೀ ಉತ್ತರಾದಿ ಮಠದ ಆಡಳಿತ ಅಧಿಕಾರಿ ಪಂಡಿತ್ ಅನಿರುದ್ಧ ಆಚಾರ್ಯ ಪಾಂಡುರಂಗಿ, ಪಂಡಿತ್ ಗೋವಿಂದಾಚಾರ್ಯ ಪಾಂಡುರಂಗಿ, ಇಳೈಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜಸೇವಕರಾದ ಕೆ ರಘುರಾಮ ವಾಜಪೇಯಿ, ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಬಿ ವಾಸುದೇವ ಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಹಾಜರಿದ್ದರು.