ಪಿಎಚ್ಡಿ ಪ್ರವೇಶ ಪರೀಕ್ಷೆ : ಒಬಿಸಿಗಳಿಗೆ ವಿನಾಯ್ತಿ
Team Udayavani, Feb 8, 2018, 5:38 PM IST
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ವಿನಾಯಿತಿ ನೀಡುವ ಜತೆಗೆ ಪಿಎಚ್ಡಿ ನಿಯಮಾವಳಿಯಲ್ಲಿ ಮಾರ್ಪಾಡು ಮಾಡುವ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.
ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ, ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಸ್ವಲ್ಪಮಟ್ಟಿನ ವಿನಾಯಿತಿ ನೀಡುವಂತೆ ಶಿಕ್ಷಣ ಮಂಡಳಿ ಕೆಲ ಸದಸ್ಯರು ಒತ್ತಾಯಿಸಿದರು.
ವಿವಿಯ ಹೊಸ ತಿದ್ದುಪಡಿಯ ಪ್ರಕಾರ 100ಕ್ಕೆ 55 ಅಂಕಗಳನ್ನು ಪಡೆಯುವ ಅಭ್ಯರ್ಥಿಗಳು(ಎಸ್ಸಿ/ಎಸ್ಟಿ ಹಾಗೂ ವರ್ಗ-1) ಪಿಎಚ್ಡಿ ಪ್ರವೇಶಕ್ಕೆ ಅರ್ಹತೆ ಹೊಂದಲಿದ್ದು, ಇವರು ತಮ್ಮ ಮಾರ್ಗದರ್ಶಕರ ಸಂದರ್ಶನ ಎದುರಿಸಲು ಅರ್ಹತೆ ಹೊಂದಿರುವ ಬಗ್ಗೆ ಘೋಷಿಸಲಾಗಿದೆ. ಆದರೆ ಈ ತಿದ್ದುಪಡಿಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅವಕಾಶವನ್ನು ಒದಗಿಸದ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪ್ರಭಾರ ಕುಲಪತಿ ಪೊ›.ಬಸವರಾಜು ತಿಳಿಸಿದರು.
ಸಾಮಾನ್ಯ ಪ್ರವೇಶ ಪರೀಕ್ಷೆ: ಮೈಸೂರು ವಿವಿಯಲ್ಲಿ 2018-19ನೇ ಸಾಲಿನ ಸ್ನಾತಕೋತ್ತರ ಪದವಿಯ ಕೋರ್ಸ್ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಇ) ನಡೆಸಲು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ವಿವಿಯಲ್ಲಿನ ಆಯ್ದ 10 ಕೋರ್ಸ್ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಬದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದೇ ಪ್ರವೇಶ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದರಂತೆ ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಜೈವಿಕ ತಂತ್ರಜ್ಞಾನ, ಸೂಕ್ಷ್ಮಜೀವಾಣುಶಾಸ್ತ್ರ, ರೇಷ್ಮೆಕೃಷಿ ಹಾಗೂ ಇನ್ನಿತರ
ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಸಲು ಕೌನ್ಸಿಲ್ ಅನುಮೋದನೆ ನೀಡಿದೆ. ಈ ವೇಳೆ ಮಂಡಳಿಯ ಕೆಲವು ಸದಸ್ಯರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳು(ಒಬಿಸಿ) ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿದರು. ಪ್ರಸ್ತುತ ಎಸ್ಸಿ/ಎಸ್ಟಿ ಮತ್ತು ವರ್ಗ-1ರ ವಿದ್ಯಾರ್ಥಿಗಳಿಗೆ ವಿವಿ ಮೀಸಲಾತಿ ಒದಗಿಸಿದ್ದು, ಈ ಮೀಸಲಾತಿ ಪ್ರಕಾರ ಸ್ನಾತಕೋತ್ತರ ಕೋರ್ಸ್ಗಳ ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 50ಕ್ಕೆ 10 ಅಂಕ ಹಾಗೂ ಎಸ್ಸಿ/ಎಸ್ಟಿ ಮತ್ತು ವರ್ಗ-1 ವಿದ್ಯಾರ್ಥಿಗಳು 50ಕ್ಕೆ 8 ಅಂಕಗಳನ್ನು ಪಡೆಯಬೇಕೆಂದು ನಿರ್ಧರಿಸಲಾಗಿದೆ.
ಅರ್ಹರಿಂದಲೇ ಬೋಧನೆ: ಪರಿಸರ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ ಪದವಿ ಹೊಂದಿರುವವರೇ ಪರಿಸರ ವಿಜ್ಞಾನ ವಿಷಯದ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮೈಸೂರು ವಿವಿ ಪರಿಸರಶಾಸ್ತ್ರ ಅಧ್ಯಯನ ವಿಭಾಗದ ಪ್ರೋ.ಎಸ್.ಎಲ್.ಬೆಳಗಲಿ, ಪರಿಸರ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಿರುವ ಅರ್ಹ ಅಭ್ಯರ್ಥಿಗಳ ಕೊರತೆಯಿಂದಾಗಿ, ಪ್ರಸ್ತುತ ಮೈಸೂರು ವಿವಿಯಲ್ಲಿ ಪರಿಸರ ವಿಜಾnನದ ಬೋಧನೆ ಮತ್ತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಲು ಬೇರೆ ವಿಷಯಗಳ ಅಧ್ಯಾಪಕರುಗಳನ್ನು ಬಳಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಪರಿಸರ ವಿಜ್ಞಾನ ವಿಷಯದಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರಿಂದಲೇ ಈ ವಿಷಯದ ಬೋಧನೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅವಕಾಶ ನೀಡಬೇಕಿದೆ ಎಂದರು.
ಇದಕ್ಕೆ ಉತ್ತರಿಸಿದ ಪ್ರಭಾರ ಕುಲಪತಿ ಪ್ರೋ.ಸಿ.ಬಸವರಾಜು, ಯುಜಿಸಿ ನಿಯಮಾವಳಿ ಪ್ರಕಾರ ಪರಿಸರ ವಿಜ್ಞಾನ ವಿಷಯದ ಬೋಧನೆ ಮಾಡಲು ಈ ವಿಷಯದಲ್ಲಿ ಎಂಎಸ್ಸಿ ಪದವಿ ಹೊಂದಿರಬೇಕಿದೆ. ಅಲ್ಲದೆ ಈ ವಿಷಯ ಬೋಧನೆ ಮಾಡುವವರಿಗೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೂ ಅವಕಾಶ ನೀಡಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಮಿತಿ ಸದಸ್ಯರು, ಪರಿಸರ ವಿಜಾnನ ವಿಷಯದ ತರಗತಿ ವಾರದಲ್ಲಿ 4 ಗಂಟೆಗಳು ಮಾತ್ರ ನಡೆಯಲಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ಕೇವಲ 4 ಗಂಟೆ ತರಗತಿಗಾಗಿ ಎಂಎಸ್ಸಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಕಷ್ಟವಾಗಲಿದೆ ಅಭಿಪ್ರಾಯ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರುವ ಅಧ್ಯಾಪಕರನ್ನೇ ನೇಮಕ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಪ್ಪಲಾಯಿತು.
ಉಳಿದಂತೆ ಬಿ.ಎಡ್ ಕಾಲೇಜುಗಳ ಶೈಕ್ಷಣಿಕ ಅವಧಿಯನ್ನು ಜೂನ್-ಜುಲೈ ಅವಧಿಯಲ್ಲೇ ಪ್ರಾರಂಭಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೋ. ಜೆ.ಸೋಮಶೇಖರ್ ಸೇರಿದಂತೆ ಶಿಕ್ಷಣ ಮಂಡಳಿಯ ಸದಸ್ಯರು ಭಾಗವಹಿಸಿದ್ದರು
ವಿದೇಶಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಕಡ್ಡಾಯ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದ ಕುರಿತು ಬ್ರಿಡ್ಜ್ ಕೋರ್ಸ್ ಕಡ್ಡಾಯಗೊಳಿಸುವ ಬಗ್ಗೆ ಮೈಸೂರು ವಿವಿ ಶಿಕ್ಷಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ವಿವಿ ಪ್ರಭಾರ ಕುಲಪತಿ ಪ್ರೋ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷ(2018-19) ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವ ಎಲ್ಲಾ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್ಡಿ ವಿದೇಶಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಇಂಗ್ಲಿಷ್ ತರಬೇತಿ ಕೋರ್ಸ್ ಆರಂಭಿಸಲು ಅನುಮೋದನೆ ನೀಡಲಾಯಿತು. ಆದರೆ, ಬ್ರಿಡ್ಜ್ ಕೋರ್ಸ್ ತರಬೇತಿಯನ್ನು ಒಂದು ತಿಂಗಳ ಬದಲು ಮೂರು ತಿಂಗಳಿಗೆ ವಿಸ್ತರಿಸುವಂತೆ ಕೆಲ ಸದಸ್ಯರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಭಾರ ಕುಲಪತಿ ಪ್ರೋ.ಸಿ. ಬಸವರಾಜು, ವಿದೇಶದಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ಮೈಸೂರು ವಿವಿಗೆ ವ್ಯಾಸಂಗ ಮಾಡಲು ಬರುವ ಬಹುತೇಕ ವಿದೇಶಿ ವಿದ್ಯಾರ್ಥಿಗಳು ಆಂಗ್ಲ ಬಾಷೆಯ ಮೇಲೆ ಒಳ್ಳೆಯ ಹಿಡಿತ ಹೊಂದಿರುವುದಿಲ್ಲ. ಇದದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ಓದಲು, ಮಾತನಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಲಿದ್ದು, ಬೋಧಕ ಸಿಬ್ಬಂದಿ ಹಾಗೂ ಪಿಎಚ್.ಡಿ ಮಾರ್ಗದರ್ಶಕರಿಗೆ ಇದು ಸವಾಲಾಗಿದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಬಾಷೆಯ ಬಗ್ಗೆ ಕೌಶಲ್ಯ ಹಾಗೂ ಹಿಡಿತ ಹೊಂದುವಂತೆ ಮಾಡಲು ಸಾಮಾನ್ಯ ತರಗತಿಗಳ ಪ್ರಾರಂ¸ಕ್ಕೂ ಮುನ್ನ ಆಂಗ್ಲ ಬಾಷೆಯ ಬಗ್ಗೆ ಒಂದು ತಿಂಗಳ ಬ್ರಿಡ್ಜ್ ಕೋರ್ಸ್ ಪಡೆಯುವುದನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಈ ತರಬೇತಿಯನ್ನು ಮೈಸೂರು ವಿವಿಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೇವೆಗಳ ಕೇಂದ್ರ(ಸಿಪಿಡಿಪಿಎಸ್) ವತಿಯಿಂದ ನೀಡಲಿದ್ದು, ಇದಕ್ಕಾಗಿ ಪ್ರತಿ ವಿದ್ಯಾರ್ಥಿ 5 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಬೇಕಿದೆ ಎಂದು ಅವರು, ಬಾರತದಲ್ಲಿ ಪದವಿ ವ್ಯಾಸಂಗ ಮಾಡಿ ರುವ ವಿದೇಶಿ ವಿದ್ಯಾರ್ಥಿಗಳಿಗೆ ಈ ಕೋರ್ಸ್ನ ಅಗತ್ಯವಿರುವುದಿಲ್ಲ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ