ಶೋಷಣೆಯಿಂದ ಹೊರಬರಲು ನಿರಂತರ ಸಮಾಜ ಸಂಘಟನೆ ಅತ್ಯಗತ್ಯ : ಎನ್.ಟಿ.ರವಿಕುಮಾರ್
Team Udayavani, Apr 17, 2022, 6:42 PM IST
ಪಿರಿಯಾಪಟ್ಟಣ: ಶೋಷಣೆಗೆ, ಅನ್ಯಾಯಕ್ಕೆ ಒಳಗಾದ, ಅವಕಾಶ ವಂಚಿತ ಸಮುದಾಯಗಳು ಮುಖ್ಯವಾಹಿನಿಗೆ ಬರುವವರೆಗೂ ಸಮಾಜದ ಸಂಘಟನೆ ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂದು ಪಿರಿಯಾಪಟ್ಟಣ ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎನ್.ಟಿ.ರವಿಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪಿರಿಯಾಪಟ್ಟಣ ತಾಲೂಕು ಭೋವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಮಾತನಾಡಿದರು.
ಭೋವಿ ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಕೇವಲ ಶೇ.7ರಷ್ಟಿದೆ. ಆದರಲ್ಲೂ ಹೆಣ್ಣುಮಕ್ಕಳು ವಿದ್ಯಾವಂತರಾಗುವ ಪ್ರಮಾಣ ಇನ್ನೂ ಕಡಿಮೆ. ಕೇವಲ ಕಲ್ಲು ಹೊಡೆಯುವ ಕುಲ ಕಸುಬನ್ನಷ್ಟೇ ಮಾಡದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಸರ್ಕಾರ ಕಲ್ಲು ಗಣಿಗಾರಿಕೆ ಮಾಡುವವರ ಮೇಲೆ ಹಾಕುತ್ತಿರುವ ಸುಳ್ಳು ಪ್ರಕರಣಗಳನ್ನು ರದ್ದು ಮಾಡಬೇಕು ಎಂದರು.
ಸಭೆಯಲ್ಲಿ ಭೋವಿ ಸಮಾಜದ ಮುಖಂಡ ಬೈಲುಕುಪ್ಪೆ ಮಂಜೇಶ್ ಮಾತನಾಡಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಈ ಸಮುದಾಯ ಸರ್ಕಾರ ಮೀಸಲಾತಿ ಕಲ್ಪಿಸಿದರೂ ಸಹಿತ ಶಿಕ್ಷಣ ಕೊರತೆ ಹಾಗೂ ಆರ್ಥಿಕ ಹಿನ್ನೆಡೆಯಿಂದ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ ಕಾರಣ ತಾಂತ್ರಿಕವಾಗಿ ವೈಜ್ಞಾನಿಕ ಯುಗದಲೂ ವಡ್ಡರ ಜನಾಂಗವೂ ಇಂದಿಗೂ ತಮ್ಮ ಹಳೆ ಕುಲಕಸಬನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಒಡೆಯುವ ಯಂತ್ರಗಳು ಬಂದ ಮೇಲೆ ವಡ್ಡರ ಜನಾಂಗದ ಉದ್ಯೋಗಕ್ಕೆ ಹೊಡೆತ ಬಿದ್ದು ಬೀದಿಪಾಲಾಗುವಂತೆ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ಸಮಾಜ ಬಾಂಧವರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಪರ್ಯಾಯ ಉದ್ಯೋಗದಲ್ಲಿ ತೊಡಗಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.
ಇದನ್ನೂ ಓದಿ : ಒಂದು ಸಲ KGFನಲ್ಲಿ ಶೂಟಿಂಗ್ ಮಾಡುವಾಗ.. Part 2
ನೂತನ ಪದಾಧಿಕಾರಿಗಳ ಪಟ್ಟಿ:
ಸಭೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಭೋವಿ ಸಮಾಜದ ಗೌರವಧ್ಯಕ್ಷರಾಗಿ ಬೆಟ್ಟದಪುರ ಲೋಕೇಶ್, ಅಧ್ಯಕ್ಷರಾಗಿ ಎನ್.ಟಿ.ನಾಗನಳ್ಳಿ ಪಾಳ್ಯ ರವಿಕುಮಾರ್, ಕಾರ್ಯದರ್ಶಿಯಾಗಿ, ಸತ್ಯಗಾಲ ಗುರುರಾಜ್, ಉಪಾಧ್ಯಕ್ಷರಾಗಿ ಮರಡಿಯೂರು ಶಿವು, ಮಾಕನಹಳ್ಳಿ ಪಾಳ್ಯ ಪ್ರಶಾಂತ ಬೆಣಗಲು ಸುಬ್ರಮಣ್ಯ, ಸಂಘಟನಾಕಾರ್ಯದರ್ಶಿಯಾಗಿ ನಾಗನಹಳ್ಳಿ ಪಾಳ್ಯ ಶಾಂತಕುಮಾರ್ ಲಕ್ಷ್ಮಣ (ದಾಸ) ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಯೋಧ ಶಿವು, ಗುತ್ತಿಗೆದಾರ ಮೋಹನ್ ಮಲ್ಲೇಶ್, ಉಧ್ಯಮಿ ರಾಗಿಆಲದಮರ ಗಣೇಶ್, ಮುಖಂಡರಾದ ಗುರುರಾಜ್, ಶರವಣ, ಬೆಣಗಾಲು ಗಣೇಶ್ ನಟರಾಜ್ ಸೇರಿದಂತೆ ತಾಲ್ಲೂಕಿನ ಭೋವಿ ಸಮಾಜದ ಮುಖಂಡರು, ಯಜಮಾನರು ವಿವಿಧ ಸಂಘಟನೆಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.