ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ: ಶಾಸಕ ಕೆ.ಮಹದೇವ್
Team Udayavani, Jun 18, 2022, 5:25 PM IST
ಪಿರಿಯಾಪಟ್ಟಣ: ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ವಿಕಾಸಗೊಳ್ಳಲು ಸಾಧ್ಯ ಎಂದು ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2021-22 ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ಉನ್ನತ ಶಿಕ್ಷಣವನ್ನರಸಿ ತಾಲೂಕಿನ ಮಕ್ಕಳು ಬೇರೆಬೇರೆ ಸ್ಥಳಗಳಿಗೆ ಹೋಗಬೇಕಾಗಿತ್ತು. ಆದರೆ ಇಂದು ತಾಲೂಕಿನಲಿಯೇ ಎಲ್ಲಾ ರೀತಿಯ ಶೈಕ್ಷಣಿಕ ಸವಲತ್ತುಗಳು ಸಿಗುತ್ತದೆ. ಹಾಗಾಗಿ ನಮ್ಮ ತಾಲೂಕಿನ ಮಕ್ಕಳು ಸಹ ಶೈಕ್ಷಣಿಕವಾಗಿ ವರ್ಧಮಾನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ಕಲ್ಪಿಸಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಮುಂತಾದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪಠ್ಯೇತರ ಚಟುವಟಿಕೆ ಸಹಕಾರಿ:
ಕೆ.ಆರ್. ನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಟಿ.ವಿಜಯ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ವಿದ್ಯಾರ್ಥಿಯಲ್ಲಿರುವ ಸೃಜನಾತ್ಮಕ ಚಿಂತನೆಯನ್ನು ಹೊರಗೆಳೆಯುವುದಲ್ಲದೇ, ಅವರ ವ್ಯಕ್ತಿತ್ವ ವಿಕಸನದಲ್ಲೂ ಸಹಾಯ ಮಾಡುತ್ತದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ತಾನು ಶಿಕ್ಷಣದ ನಂತರ ಏನು ಮಾಡಬೇಕು, ಯಾವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಅರಿವಿರಬೇಕು. ಆಗ ಓದಿದ ವಿದ್ಯೆ ಸಾರ್ಥಕಗೊಳ್ಳುತ್ತದೆ. ವಿದ್ಯಾರ್ಥಿಗಳಿಗ ಒಳಿತಿಗೆ ಸದಾ ಶ್ರಮಿಸುವ ಪೋಷಕರ ಬಗ್ಗೆ ಕಾಳಜಿ ಇರಬೇಕಾದ್ದು ಬಹು ಮುಖ್ಯ. ಈ ಎಲ್ಲದರ ಪಾಲನೆಯಿಂದ ಒಬ್ಬ ಉತ್ತಮ ನಾಗರಿಕ ರೂಪುಗೊಳ್ಳುತ್ತಾನೆ ಎಂದರು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರಾದ ಪ್ರಸಾದ್, ವಿಶ್ವನಾಥ್, ಮಾಯಾದೇವಿ, ಅಂಬಿಕಾ, ರಾಜಗೋಪಾಲ್, ಗುರು ಬಸವರಾಜ ಸ್ವಾಮಿ ಪಂಡಿತ್, ಶೈಲಜಾ, ಸಾಗರ್, ನಫೀಜ್ ಉಲ್ಲಾ ಷರೀಫ್, ಮುಖಂಡರಾದ ನಾಗೇಂದ್ರ, ಜಲೇಂದ್ರ, ಅಶೋಕ್, ರಾಜು, ಗೋಪಾಲ್ ರಘುನಾಥ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.