ಅಂಗನವಾಡಿ ಕಟ್ಟಡಕ್ಕಾಗಿ ಹಾಡಿಗರ ಪ್ರತಿಭಟನೆ
Team Udayavani, Aug 25, 2020, 1:21 PM IST
ಮೈಸೂರು: ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ 216 ಜನರಿರುವ ಮಾನಿ ಮೂಲೆ ಎಂಬ ಹಾಡಿಗೆ ಅಂಗನವಾಡಿ ಕಟ್ಟಡ ನೀಡುವಂತೆ ಸ್ಥಳೀಯ ಹಾಡಿ ನೀವಾಸಿಗಳು ಪ್ರತಿಭಟನೆ ನಡೆಸಿದರು.
ಮಾನಿ ಮೂಲೆ ಹಾಡಿಯಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲ, ಹಲವಾರು ವರ್ಷಗಳಿಂದಲೂ ಎಲ್ಲಾ ಜನ ಪ್ರತಿನಿಧಿಗಳ ಗಮನಕ್ಕೆ ತಂದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈಗ ತಾತ್ಕಾಲಿಕವಾಗಿ ನಡೆಯುತ್ತಿರುವ ಗುಡಿಸಲನ್ನು ತಮ್ಮ ಮಕ್ಕಳ ಕಲಿಕೆ, ಆರೋಗ್ಯದ ಹಿತದೃಷ್ಟಿಯಿಂದ ಹಾಡಿ ಜನರೇ ನಿರ್ಮಿಸಿಕೊಂಡಿದ್ದು, ಕಳೆದ ಮಾರ್ಚ್ ತಿಂಗಳಿನಿಂದ ಇದುವರೆಗೂ ಮೂರು ಬಾರಿ ಆನೆ ದಾಳಿ ಮಾಡಿದೆ. ಅಲ್ಲದೆ, ಮಳೆಯಿಂದ ಮಣ್ಣಿನ ಗೋಡೆ ಕುಸಿಯುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಲಿ, ಯಾವುದೇ ಸರ್ಕಾರವಾಗಲಿ ಮಕ್ಕಳ ಶಿಕ್ಷಣಕ್ಕಾಗಿ, ಮಕ್ಕಳ ಆರೋಗ್ಯಕ್ಕಾಗಿ ನೂರಾರು ಕೋಟಿ ಯೋಜನೆಗಳನ್ನು ಪ್ರತಿವರ್ಷ ಘೋಷಣೆ ಮಾಡಿದರು ಸಹ ಇಂತಹ ಗಡಿನಾಡಿನ ಹಾಗೂ ಅರಣ್ಯದೊಳಗೆ ವಾಸಿಸುವ ಅರಣ್ಯವಾಸಿ ಜನರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕೂಡಲೇ ಜಿಪಂ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳು ಹೊಸ ಅಂಗನವಾಡಿ ಕೇಂದ್ರವನ್ನು ಸ್ಥಾಪಿ ಸಿಸುವ ಮೂಲಕ ಮಾನಿಮೂಲೆ ಹಾಡಿ ಆದಿ ವಾಸಿ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಾಡಿ ಮುಖಂಡ ರಾದ ಗಂಗೆ, ಮಂಜುಳಾ, ಸುರೇಶ್, ಮೀನಾ, ಸಾವಿತ್ರಿ, ಸುಶೀಲಾ, ಭಾಗ್ಯ, ರತ್ನ ಹಾಜರಿದ್ದರು.