ಗಡಿಯಲ್ಲಿ ನೆಗೆಟಿವ್ ವರದಿ ಸಲ್ಲಿಸಲು, ತಪಾಸಣೆಗೆ ಕ್ಯೂ!
Team Udayavani, Feb 27, 2021, 1:01 PM IST
ಎಚ್.ಡಿ.ಕೋಟೆ: ಕೇರಳ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಬಾವಲಿ ಚೆಕ್ಪೋಸ್ಟ್ನಲ್ಲಿ ಕೇರಳದ ವಾಹನಗಳು ಹಾಗೂ ಜನರು ಸಾಲುಗಟ್ಟಿ ನಿಂತಿದ್ದರು. ಇದು ಕೇರಳ ಕೋವಿಡ್ ಸೋಂಕಿನ ಎಫೆಕ್ಟ್.
ಕೇರಳದಲ್ಲಿ ಸೋಂಕು ತೀವ್ರವಾಗಿ ವ್ಯಾಪಿಸಿರುವುದರಿಂದ ಅಲ್ಲಿನ ಜನರು ರಾಜ್ಯ ಪ್ರವೇಶಿಸಲು ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಚೆಕ್ಪೋಸ್ಟ್ನಲ್ಲಿ ನೆಗೆಟಿವ್ ವರದಿ ಇದ್ದ ರಷ್ಟೇ ಪ್ರವೇಶ ಸಿಗುತ್ತದೆ. ಹೀಗಾಗಿ ಪ್ರಯಾಣಿಕರು ವರದಿ ಸಲ್ಲಿಸಲು ಸಾಲಗಟ್ಟಿ ನಿಂತಿದ್ದರು. ಸರಕು ಸಾಗಣೆ ವಾಹನಗಳ ಚಾಲಕರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳ ಬಿಡಲಾಗುತ್ತಿದೆ. ಹೀಗಾಗಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಕೊರೆಯುವ ಚಳಿಯಲ್ಲಿ ಪ್ರಯಾಣಿಕರು ನೆಗೆಟಿವ್ ವರದಿ ಸಲ್ಲಿಸಲು ಹಾಗೂ ಚಾಲಕರು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಲು ಕ್ಯೂನಲ್ಲಿ ನಿಂತಿದ್ದರು. ಈ ದೃಶ್ಯವು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನಕ್ಕೆ ಟಿಕೆಟ್ ಪಡೆಯಲು ಕ್ಯೂ ನಿಂತಿರುವಂತೆ ಕಂಡು ಬಂದಿತು. ಸೋಂಕಿತರು ಕೇರಳದಿಂದ ಕರ್ನಾಟಕಕ್ಕೆ ಬಾರದಂತೆ ಕಟ್ಟುನಿಟ್ಟಿನ ಎಚ್ಚರವಹಿಸಿದ್ದು, ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನೇ ತರಬೇಕು ಎಂದು ಸೂಚಿಸಲಾಗಿದೆ.
ಬಾವಲಿ ಮಾರ್ಗವಾಗಿ ಮೈಸೂರು ಜಿಲ್ಲೆಗೆ ಆಗ ಮಿಸಬೇಕಾದರೆ ನಾಗರಹೊಳೆ ಅಭಯಾರಣ್ಯ ಮಧ್ಯ ಮಾರ್ಗದಿಂದ ಹಾದು ಬರಬೇಕು. ವನ್ಯ ಜೀವಿಗಳ ಕಾಯ್ದೆಯಂತೆ ಅರಣ್ಯ ಮಾರ್ಗದ ಸಂಚಾರಕ್ಕೆ ಬೆಳಗಿನ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಮಾತ್ರ ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗಿನ 6 ಗಂಟೆ ತನಕ ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಹೀಗಾಗಿ ಶುಕ್ರವಾರ ಮುಂಜಾನೆಯಾಗುತ್ತಿದ್ದಂತೆಯೇ ಬಾವಲಿ ಚೆಕ್ಪೋಸ್ಟ್ನಲ್ಲಿ ಬೆಳಗಿನ ಹಿಮವನ್ನೂ ಲೆಕ್ಕಿಸದೆ ಕೇರಳಿಗರು ಸರದಿಯಲ್ಲಿ ಬಂದು ತಪಾಸಣೆ ಮಾಡಿಸಿಸಿಕೊಂಡರು. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದು ತಪಾಸಣೆ ನಡೆಸಿ, ನೆಗೆಟಿವ್ ವರದಿ ಇದ್ದವರಿಗೆ ಪ್ರವೇಶ ನೀಡಿದರು.