ತಗ್ಗಿದ ಮಳೆ: ಸಹಜ ಸ್ಥಿತಿಯತ್ತ ಮೈಸೂರು ಜಿಲ್ಲೆ
Team Udayavani, Aug 14, 2019, 3:00 AM IST
ಮೈಸೂರು: ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಕಳೆದ ಒಂದು ವಾರದಿಂದ ನಲುಗಿದ್ದ ಮೈಸೂರು ಜಿಲ್ಲೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿದ್ದರಿಂದ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ಗಳಷ್ಟು ನದಿಗೆ ನೀರು ಬಿಟ್ಟಿದ್ದರಿಂದ ನದಿ ಪಾತ್ರದಲ್ಲಿ ಹಲವು ಸೇತುವೆಗಳ ಮುಳುಗಡೆ, ನೂರಾರು ಎಕರೆ ಜಮೀನು ಮುಳುಗಡೆಯಾಗಿದ್ದಲ್ಲದೆ ಮನೆಗಳಿಗೂ ನೀರು ನುಗ್ಗಿದ್ದರಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಇದೀಗ ಕಳೆದ ಎರಡು ದಿನಗಳಿಂದ ಮಳೆ ಸಂಪೂರ್ಣ ಬಿಡುವು ಕೊಟ್ಟಿರುವುದರಿಂದ ಕಬಿನಿ ಜಲಾಶಯಕ್ಕೆ ಒಳ ಹರಿವು ಕಡಿಮೆಯಾಗಿದ್ದರಿಂದ ನದಿಗೆ ಬಿಡುತ್ತಿದ್ದ ನೀರಿನ ಪ್ರಮಾಣವನ್ನೂ ಕಡಿಮೆ ಮಾಡಲಾಗಿದೆ. ಹೀಗಾಗಿ ಸೇತುವೆಗಳ ಮೇಲೆ ಹರಿಯುತ್ತಿದ್ದ ನೀರು ಕುಗ್ಗಿದ್ದು, ಜಮೀನುಗಳಲ್ಲಿ ನಿಂತಿದ್ದ ನೀರೂ ಇಂಗಿದೆ. ಇನ್ನು ಮನೆಗಳಿಗೆ ನುಗ್ಗಿದ್ದ ನೀರು ಕೂಡ ಖಾಲಿಯಾಗಿದ್ದು, ನೀರು ನುಗ್ಗಿದ್ದರಿಂದ ಮನೆ ಖಾಲಿಮಾಡಿ ಪರಿಹಾರ ಕೇಂದ್ರಗಳು, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದ ಜನರು ನಿಧಾನಕ್ಕೆ ತಮ್ಮ ಮನೆಗಳತ್ತ ಬಂದು ಮನೆಯೊಳಗೆ ನಿಂತಿರುವ ನೀರು, ಕೊಳಚೆಯನ್ನು ತೆರವುಗೊಳಿಸಿ ಮನೆಯನ್ನು ಸ್ವತ್ಛಗೊಳಿಸಿಕೊಳ್ಳತೊಡಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,013 ಮನೆಗಳು ಹಾನಿಯಾಗಿವೆ.
ಕೇರಳದ ವೈನಾಡು ಪ್ರದೇಶ ಹಾಗೂ ಮೈಸೂರು ಜಿಲ್ಲೆಯಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾಗಿ ಭಾರೀ ಪ್ರಮಾಣದಲ್ಲಿ ನದಿಗೆ ನೀರು ಬಿಟ್ಟಿದ್ದರಿಂದ ಎಚ್.ಡಿ.ಕೋಟೆ, ನಂಜನಗೂಡು ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದ ಪರಿಣಾಮ ಹುಣಸೂರು ತಾಲೂಕಿನ ಹನಗೋಡು ಹೋಬಳಿಯಲ್ಲಿ ಭಾರೀ ಹಾನಿ ಸಂಭವಿಸಿದೆ. ಕಾವೇರಿ ನದಿಯಲ್ಲಿ ಹೆಚ್ಚಿನ ಹರಿವಿನಿಂದಾಗಿ ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ತಿ.ನರಸೀಪುರ ತಾಲೂಕುಗಳಲ್ಲಿ ಹಾನಿ ಉಂಟಾಗಿದೆ.
ನಂಜನಗೂಡು: ನಂಜನಗೂಡು ತಾಲೂಕಿನ ಮಲ್ಲನಮೂಲೆ ಬಳಿ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ನೀರು ನಿಂತಿದ್ದರಿಂದ ಕಡಿತಗೊಂಡಿದ್ದ ಮೈಸೂರು-ಊಟಿ ಮಾರ್ಗದಲ್ಲಿ ಸಂಚಾರ ಪುನರಾರಂಭವಾಗಿದೆ. ಸುತ್ತೂರು ಸೇತುವೆ ಮೇಲೆ ಹರಿಯುತ್ತಿದ್ದ ನೀರು ಕಡಿಮೆಯಾಗಿರುವುದರಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ತಾಲೂಕಿನಲ್ಲಿ ಹ್ಯಾಂಡ್ಪೋಸ್ಟ್- ಸರಗೂರು ನಡುವಿನ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಲಾವೃತವಾಗಿದ್ದ ತುಂಬಸೋಗೆ, ಮಾದಾಪುರ, ಚೆಕ್ಕೂರು, ಹೊಮ್ಮರಗಳ್ಳಿ, ಎಂ.ಸಿ.ತಳಲು, ಹೊಸಕೋಟೆ ಸೇತುವೆಯಲ್ಲಿ ನೀರು ಖಾಲಿಯಾಗಿದ್ದರಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೋಳಗಾಲ ಗ್ರಾಮದ ಸಮೀಪ ಕಬಿನಿ ಹಿನ್ನೀರಿನಿಂದ ಜಲಾವೃತವಾಗಿದ್ದ ರಸ್ತೆಯನ್ನು ಕೂಡ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೈಸೂರು -ಎಚ್.ಡಿ.ಕೋಟೆ ಮಾರ್ಗದ ಹೈರಿಗೆ ಗ್ರಾಮದ ರಸ್ತೆ ಕೂಡ ಈಗ ಸಂಚಾರಕ್ಕೆ ಮುಕ್ತವಾಗಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ 4,749 ಎಕರೆ ಬೆಳೆ ಹಾನಿಯಾಗಿದೆ.
ಹುಣಸೂರು: ಹುಣಸೂರು ತಾಲೂಕಿನ ಹನಗೋಡು-ಬಿಲ್ಲೇನಹೊಸಹಳ್ಳಿ ರಸ್ತೆ, ಅಬ್ಬೂರು, ನಿಲವಾಗಿಲು, ಶಿಂಡೇನಹಳ್ಳಿ ಗ್ರಾಮಗಳ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹುಣಸೂರು-ಹನಗೋಡು ರಸ್ತೆ ಸಂಚಾರ ಇನ್ನೂ ಬಂದ್ ಮಾಡಲಾಗಿದ್ದು, ಹೆಮ್ಮಿಗೆ ಗ್ರಾಮದ ಮೂಲಕ ಬದಲಿ ಮಾರ್ಗದಲ್ಲಿ ಹನಗೋಡು ಗ್ರಾಮಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಹನಗೋಡು-ಕಿರಂಗೂರು ಸೇತುವೆ ಮುಳುಗಡೆಯಾಗಿರುವುದರಿಂದ ಈ ರಸ್ತೆಯನ್ನು ಮುಚ್ಚಲಾಗಿದ್ದು, ಪಕ್ಕದ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲೂಕಿನ ಮೈಸೂರು-ಮಡಿಕೇರಿ ಮುಖ್ಯ ರಸ್ತೆ, ಆವರ್ತಿ, ಕೊಪ್ಪ, ಮುತ್ತಿನ ಮುಳಸೋಗೆ (ದಿಂಡಗಾಡು) ಹಾಗೂ ಬೆಟ್ಟದ ಪುರ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕಣಗಾಲ್-ಪಿರಿಯಾಪಟ್ಟಣ ರಸ್ತೆ ಬದಲಿಗೆ ಸೂಳೆಕೋಟೆ-ಹೊನ್ನಾಪುರ ರಸ್ತೆಯಲ್ಲಿ ಬದಲಿ ಮಾರ್ಗ ಕಲ್ಪಿಸಲಾಗಿದೆ. ಕೊಪ್ಪ-ಗೋಲ್ಡನ್ ಟೆಂಪಲ್ ರಸ್ತೆಯಲ್ಲಿ ನೀರು ಹೆಚ್ಚಾಗಿದ್ದು, ಚಿಕ್ಕ ಹೊಸೂರು ರಸ್ತೆಯಲ್ಲಿ ಬದಲಿ ಮಾರ್ಗ ಕಲ್ಪಿಸಲಾಗಿದೆ.
ಸರಗೂರು: ಸರಗೂರು ತಾಲೂಕಿನಲ್ಲಿ ಜಲಾವೃತಗೊಂಡಿದ್ದ ಎಲ್ಲ ಸೇತುವೆಗಳಲ್ಲೂ ನೀರು ಕಡಿಮೆಯಾಗಿದ್ದು, ಮಂಗಳವಾರ ಬೆಳಗ್ಗೆಯಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮೈಸೂರು ತಾಲೂಕಿನ ಕುಪ್ಪೇಗಾಲ ಗ್ರಾಮದ ಸೇತುವೆ ಬಳಿಯಿರುವ ಕೋಳಿಫಾರಂಗೆ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ಕೋಳಿಫಾರಂನ್ನು ಸ್ಥಳಾಂತರಿಸಲಾಗಿದೆ.
ತಿ.ನರಸೀಪುರ: ತಿ.ನರಸೀಪುರ ತಾಲೂಕಿನಲ್ಲಿ ಜಲಾವೃತಗೊಂಡಿದ್ದ ಹೆಮ್ಮಿಗೆ ಸೇತುವೆಯಲ್ಲಿ ನೀರು ತೆರವಾಗಿದ್ದರಿಂದ ಸಂಚಾರ ಪುನಾರಂಭಗೊಂಡಿದೆ. ಮುಖ್ಯ ರಸ್ತೆಯ ಸೇತುವೆಯ ಬಳಿ ಅಗಸ್ತೇಶ್ವರ ದೇವಸ್ಥಾನದವರೆಗೆ ಬಂದಿದ್ದ ನೀರು ಈಗ ಕಡಿಮೆಯಾಗಿದೆ. ತಾಲೂಕಿನ ಕೆಂಡನಕೊಪ್ಪಲು ರಸ್ತೆಯೂ ಸಂಚಾರಕ್ಕೆ ಮುಕ್ತವಾಗಿದೆ.
ಮನೆಗಳಿಗೆ ನುಗ್ಗಿದ್ದ ನೀರು ಇಳಿಕೆ: ಕಪಿಲಾ ನದಿ ಪ್ರವಾಹದಿಂದ ನಂಜನಗೂಡು ಪಟ್ಟಣದ ತೋಪಿನ ಬೀದಿ, ಹಳ್ಳದಕೇರಿ, ಗೌರಿಘಟ್ಟ ಸೇರಿದಂತೆ ನದಿ ಪಾತ್ರದ ತಗ್ಗುಪ್ರದೇಶದ ಹಲವು ಬಡಾವಣೆಗಳ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿದೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದ ಮುಸ್ಲಿಂ ಬ್ಲಾಕ್ ಹಾಗೂ ಬಿ.ಎಂ.ರಸ್ತೆ ಆಸುಪಾಸಿನ 45 ಮನೆಗಳು ಹಾಗೂ ಹಲವು ಅಂಗಡಿ ಮಳಿಗೆಗಳು ಇನ್ನೂ ಜಲಾವೃತವಾಗಿಯೇ ಇವೆ.
ಮೈಸೂರು ತಾಲೂಕಿನ ಯಡಕೊಳ ಗ್ರಾಮದ ಬಳಿ ನೀರು ನುಗ್ಗುವ ಸಂಭವಿದ್ದುದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಯಾವುದೇ ಅಪಾಯ ಎದುರಾಗದ್ದರಿಂದ ಅವರು ತಮ್ಮ ಮನೆಗಳಿಗೆ ಮರಳಿದ್ದಾರೆ. ತಿ.ನರಸೀಪುರ ಪಟ್ಟಣದ ಅಗಸ್ತೇಶ್ವರ ದೇವಸ್ಥಾನ ಹಿಂಭಾಗದ 12 ಮನೆಗಳಿಗೆ ಒಳ ಚರಂಡಿ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕೆ.ಆರ್.ನಗರ ತಾಲೂಕಿನ ಹನಸೋಗೆ ಗ್ರಾಮದ ಬಳಿ ಮೂರು ಮನೆಗಳ ಸಮೀಪಕ್ಕೆ ಕಾವೇರಿ ನೀರು ನುಗ್ಗಿರುವುದರಿಂದ ಅಲ್ಲಿನ ನಿವಾಸಿಗಳು ಮನೆ ಖಾಲಿ ಮಾಡಿ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ತಾಲೂಕು- ಮನೆಹಾನಿ
ನಂಜನಗೂಡು 1,132
ಎಚ್.ಡಿ.ಕೋಟೆ 306
ಹುಣಸೂರು 192
ಪಿರಿಯಾಪಟ್ಟಣ 47
ಸರಗೂರು 322
ತಿ.ನರಸೀಪುರ 5
ಕೆ.ಆರ್.ನಗರ 9
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ