ಬಾಡಿಗೆ ಮನೆ ವಾಸ ಸಾಕಾಗಿದೆ, ಸೂರು ಕಲ್ಪಿಸಿ
Team Udayavani, Jan 5, 2019, 6:07 AM IST
ಮೈಸೂರು: ಅಂಬೇಡ್ಕರ್ ಆವಾಸ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ನರ್ಮ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಬರಬೇಕಿದ್ದ ಹಣ ಬಿಡುಗಡೆಯಾಗಿಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ.. ನಮಗೊಂದು ಸೂರು ಕಲ್ಪಿಸಿಕೊಡಿ.. ನಮ್ಮ ಕಾಲೋನಿಯಲ್ಲಿ ಕಸ ವಿಲೇವಾರಿ ಆಗಿಲ್ಲ…
ನಗರದ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಳಗೇರಿ ನಿವಾಸಿಗಳ ಅಹವಾಲು ಸಭೆಯಲ್ಲಿ ಜನರು ಜಿಲ್ಲಾಧಿಕಾರಿಯವರ ಮುಂದೆ ತೋಡಿಕೊಂಡ ಅಳಲುಗಳ ಸರಮಾಲೆ ಹೀಗಿತ್ತು.
ಭಾರತನಗರ ಕೊಳೆಗೇರಿ ನಿವಾಸಿಗಳ ಕಾಲೋನಿ, ಕೆಸರೆ, ಜ್ಯೋತಿನಗರ, ಧರ್ಮಸಿಂಗ್ ಕಾಲೊನಿ, ಮೇಟಗಳ್ಳಿಯ ಅಂಬೇಡ್ಕರ್ ಕಾಲೊನಿ, ಗೋಕುಲಂ, ನೆಲ್ಲೂರು ಶೆಡ್, ವಸಂತನಗರ, ಸಿ.ವಿ.ರಸ್ತೆ, ಹೆಬ್ಟಾಳ್, ಮೇಟಗಳ್ಳಿ ಭಾಗದಿಂದ ಆಗಮಿಸಿದ್ದ ನೂರಾರು ಮಂದಿ ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ತೋಡಿಕೊಂಡರು.
ಬಜೆಟ್ ಮಂಡನೆ: ಸಭೆ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಜನರು ಹೇಳಿಕೊಳ್ಳುವ ಸಮಸ್ಯೆಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಹಾರ ಸೂಚಿಸಲಿದ್ದಾರೆ. ಬಜೆಟ್ ಮಂಡನೆಗೆ ಒಂದು ತಿಂಗಳು ಬಾಕಿ ಇದೆ. ನಗರದಲ್ಲಿ ಜನರ ಸಮಸ್ಯೆ ಆಲಿಸಿ, ಪರಿಹಾರಕ್ಕೆ ಅನುದಾನ ಪಡೆಯುವುದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಈ ಸಭೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಧರ್ಮಸಿಂಗ್ ಕಾಲೋನಿ ಹನುಮಂತಯ್ಯ ಮಾತನಾಡಿ, 1999-2000ನೇ ಸಾಲಿನಲ್ಲಿ ಖಾತೆ ಸಂಖ್ಯೆಗಾಗಿ ನಗರಪಾಲಿಕೆಯವರು ಕೊಳೆಗೇರಿ ನಿವಾಸಿಗಳಿಂದ ಅಕ್ರಮ ಸಕ್ರಮ ಯೋಜನೆಯಡಿ ಕಟ್ಟಡ ಮತ್ತು ಮನೆಗಳನ್ನು ಸಕ್ರಮಗೊಳಿಸಲು ತೆರಿಗೆ ವಸೂಲಿ ಮಾಡಿದ್ದಾರೆ. ಈವರೆಗೂ ಯಾವುದೇ ಖಾತೆ, ಖಾತೆ ಸಂಖ್ಯೆಯನ್ನೂ ನೀಡಿಲ್ಲ. ಇದಕ್ಕೆ ಸಂಬಂಧಿಸಿದ ಕಾಗಪತ್ರ ಕೊಡಿಸಿಕೊಡಿ ಎಂದು ಮನವಿ ಮಾಡಿದರು.
ಕರ್ನಾಟಕ ಕೊಳೆಗೇರಿ ಮಂಡಳಿಯವರು 2009ರಲ್ಲಿ ವಾಲ್ಮೀಕಿ ಅಂಬೇಡ್ಕರ್ ಅವಾಸ್ ಯೋಜನೆಯಡಿ ಮನೆ ಕಟ್ಟಿಕೊಡುವುದಾಗಿ ಹೇಳಿ ಡಿಡಿ ರೂಪದಲ್ಲಿ ಹಣ ಪಡೆದು ಮನೆ ಕಟ್ಟಿಕೊಟ್ಟಿಲ್ಲ. ಅರ್ಧದಷ್ಟು ಹಣ ಮಾತ್ರ ಹಿಂತಿರುಗಿಸಿದ್ದಾರೆ. ಪೂರ್ತಿ ಹಣ ಹಿಂತಿರುಗಿಸುವಂತೆ ಕ್ರಮವಹಿಸಬೇಕು. ಅಲ್ಲದೇ, ಸರ್ಕಾರದ ವಿವಿಧ ಯೋಜನೆಗಳ ಸದುಯೋಗಕ್ಕಾಗಿ ನಿವೇಶನ ಕ್ರಯಪತ್ರ, ದಾನಪತ್ರ ಅಗತ್ಯವಿದೆ. ನೋಂದಣಿ ಮಾಡಿಕೊಳ್ಳಲು ಸಂಬಂಧಪಟ್ಟ ತಹಸೀಲ್ದಾರರಿಗೆ ಸೂಚನೆ ನೀಡಬೇಕು ಎಂದು ಕೇಳಿಕೊಂಡರು. ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಸೂರು ಕಲ್ಪಿಸಿ: ಕಳೆದ ಒಂದು ವರ್ಷದ ಹಿಂದೆ ಅಂಬೇಡ್ಕರ್ ಅವಾಸ್ ಯೋಜನೆಯಡಿ ಮನೆಕಟ್ಟಲು ನನಗೆ ಗ್ರಾÂಂಟ್ ಆಗಿದೆ. ಮೂರು ಬಿಲ್ ಬರಬೇಕಿತ್ತು. ಜಿಪಿಎಸ್ ಆಗಿದ್ದರೂ, ಎರಡು ಬಿಲ್ ಈವರೆಗೂ ಬಂದಿಲ್ಲ. ಬಿಲ್ ಬಾರದ ಕಾರಣ ಮನೆಕಟ್ಟಲಾಗದೇ ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಕೂಡಲೇ ಬಿಲ್ ಕೊಡಿಸಿಕೊಡಿ ಎಂದು ಮೇಟಗಳ್ಳಿ ನಿವಾಸಿ ಶಾಂತಮ್ಮ ಬೇಡಿಕೆ ಇಟ್ಟರು.
ರೂಪನಗರ, ಭಾರತ್ನಗರ, ಅಂಬೇಡ್ಕರ್ನಗರ ಸುತ್ತಮುತ್ತ ಕಸದ ರಾಶಿ ಇದೆ. ಹೊರಗಡೆಯವರೂ ಹೇಳದೆ ಕೇಳದೆ ಕಸ ತಂದು ಸುರಿಯುತ್ತಿದ್ದಾರೆ. ಭಾರತ್ನಗರದಲ್ಲಿ ಶಾಲೆ ಕಟ್ಟಡ ಬಳಿಯೇ ಕಸ ಚೆಲ್ಲಾಡಿದೆ. ಈ ಭಾಗದ ಜನರು ರೋಗ ಹರಡುವ ಭೀತಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಪಾಲಿಕೆ, ಗ್ರಾಪಂಯವರಿಗೆ ತಿಳಿಸಿದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ.
ಹೇಗೋ ಗುಡಿಸಲಿನಲ್ಲೇ ಜೀವನ ಸಾಗಿಸುತ್ತಿದ್ದ ನಮ್ಮನ್ನು ತೆರವುಗೊಳಿಸಿ, ಯಾವುದೇ ಮೂಲಸೌಕರ್ಯಗಳಿಲ್ಲದ ಜಾಗದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿ ಅನ್ಯಾಯವಾಗಿದೆ ಎಂದು ಸಮಸ್ಯೆ ಹೇಳಿಕೊಂಡರು. ಈ ಸಂಬಂಧ ಅಧಿಕಾರಿಗಳ ಸಭೆ ಕರೆದು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
30 ವರ್ಷಗಳಿಂದ ವಾಸವಾಗಿದ್ದ 55 ಫಲಾನುಭವಿಗಳಿಗೆ ಕೊಳಚೆ ನಿರ್ಮೂಲನೆ ಮಂಡಳಿಯಿಂದ 55 ಮನೆ ನಿರ್ಮಿಸಲು ಆದೇಶಿಸಲಾಗಿತ್ತು. 1 ಎಕರೆ ಜಾಗದಲ್ಲಿ ಮನೆ ಕಟ್ಟಲು ಕಾಮಗಾರಿ ಆರಂಭವಾಗಿತ್ತು. ಅದರಲ್ಲಿ 20 ಮನೆಗಳ ನಿರ್ಮಾಣ ಕಾರ್ಯ ಒಂದು ಹಂತದಲ್ಲಿ ಮುಗಿದಿದೆ. 36 ಫಲಾನುಭವಿಗಳು ಮಾತ್ರ ಮನೆ ತೆರವು ಮಾಡಿದ್ದಾರೆ. ಉಳಿದ 19 ನಿವಾಸಿಗಳು ತೆರವು ಮಾಡದೇ ಅಲ್ಲೇ ವಾಸವಾಗಿದ್ದಾರೆ.
ಗುಡಿಸಲು ಮುಕ್ತ ನಿವಾಸಿಗಳಾಗಿಸುತ್ತೇವೆ ಎಂದು ತೆರವುಗೊಳಿಸಿ, ಇತ್ತ ಗುಡಿಸಲೂ ಇಲ್ಲ ಮನೆಯೂ ಇಲ್ಲ ಎಂಬ ಅತಂತ್ರ ಸ್ಥಿತಿಯಲ್ಲಿದ್ದೇವೆ ಎಂದು ಧರ್ಮಸಿಂಗ್ ಕಾಲೊನಿ ನಿವಾಸಿಗಳು ನೋವು ತೋಡಿಕೊಂಡರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿಗಳು ಶೀಘ್ರ ಅಲ್ಲಿರುವವರಿಗೆ ನೋಟಿಸ್ ಜಾರಿಗೊಳಿಸಿ ಜನವರಿ ತಿಂಗಳಲ್ಲೇ ಎಲ್ಲರನ್ನೂ ತೆರವುಗೊಳಿಸಿ ಮನೆ ನಿರ್ಮಿಸಿಕೊಡಿಸುವುದಾಗಿ ಭರವಸೆ ನೀಡಿದರು.
ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲಿಸಿ, ಉಳಿದ 19 ನಿವಾಸಿಗಳನ್ನು ಕೂಡಲೇ ತೆರವುಗೊಳಿಸಲಾಗುವುದು. ಅಲ್ಲದೇ, ಮನೆ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ಸಾಗಲು ಅಗತ್ಯ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ನನ್ನ ಗಂಡ (ಸಫಾಯಿ ಕರ್ಮಚಾರಿ) 2007ರಲ್ಲಿ ಮ್ಯಾನ್ಹೋಲ್ಗೆ ಬಿದ್ದು ಸಾವನ್ನಪ್ಪಿದ. ಈವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ನಾನು ಬಾಡಿಗೆ ಮನೆಯಲ್ಲಿದ್ದೇನೆ. ನನಗೂ ಒಂದು ಸೂರು ಕಲ್ಪಿಸಿಕೊಡಿ ಎಂದು ಸರೋಜಮ್ಮ ಕೇಳಿಕೊಂಡರು. ಶೀಘ್ರವೇ ಸೂರು ಕಲ್ಪಿಸಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಮದ್ಯದಂಗಡಿ ತೆರವು, ಸಮುದಾಯ ಭವನ, ಕಸ ವಿಲೇವಾರಿ ಮೊದಲಾದ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಕಪಿನಿಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ್, ತೇಜಶ್ರೀ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪೌರಕಾರ್ಮಿಕರ ಸಮಸ್ಯೆ ಬಗೆಹರಿಸಿ: ಮೈಸೂರು ಎರಡು ಬಾರಿ ನಂ.1 ಸ್ವತ್ಛನಗರಿಯಾಗಿ ಗುರುತಿಸಿಕೊಳ್ಳಲು ಪೌರಕಾರ್ಮಿಕರ ಶ್ರಮವೇ ಕಾರಣ. ತಮ್ಮ ಮಕ್ಕಳ ಶಿಕ್ಷಣಕ್ಕೂ ಗಮನ ಕೊಡದೇ ಬೆಳಗ್ಗೆ 6ರಿಂದ ಸಂಜೆ 5ಗಂಟೆವರೆಗೆ ಸ್ವತ್ಛತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕೆಲಸದ ವೇಳೆ ಶೌಚಕ್ಕೆ ಹೋಗಲು ಮಹಿಳೆಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯಿಲ್ಲ.
ಕೆಲವೊಮ್ಮೆ ಮೂರು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರೂ, ಬೋನಸ್ ನೀಡಲ್ಲ. ನಂ.1 ಸ್ವತ್ಛನಗರಿಗೆ ಕಾರಣರಾಗಿದ್ದಾರೆಂದು ಬಹುಮಾನ ಕೂಡ ನೀಡಲ್ಲ ಎಂದು ಸಮಸ್ಯೆ ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮುಂದಿನ ಬಾರಿ ಬಹುಮಾನ ನೀಡಬೇಕೆಂದು ಈಗಾಗಲೇ ಪಾಲಿಕೆ ನಿರ್ಧರಿಸಿದೆ. ನಿಮ್ಮ ಬೇಡಿಕೆಗಳನ್ನು ಒಂದು ಸಭೆ ನಡೆಸಿ ಚರ್ಚಿಸಲಾಗುವುದು. ಶೌಚಕ್ಕೆ ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.