ಶ್ರೀ ತ್ರಿಪುರಸುಂದರಿ ದೇವಾಲಯ ಜೀರ್ಣೋದ್ಧಾರ
Team Udayavani, Feb 16, 2020, 3:00 AM IST
ತಿ.ನರಸೀಪುರ: ಮೂಗೂರು ಗ್ರಾಮವನ್ನು ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹಾಗೂ ಶ್ರೀ ತ್ರಿಪುರಸುಂದರಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲು ಯೋಜನಾ ವೆಚ್ಚದ ಅನುದಾನವನ್ನು ಮುಖ್ಯಮಂತ್ರಿಗಳಿಂದ ಬಿಡುಗಡೆ ಮಾಡಿಸಲಾಗುವುದು ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ, ಜೀರ್ಣೋದ್ಧಾರ ಕಾಮಗಾರಿ ನೀಲ ನಕ್ಷೆ ವೀಕ್ಷಿಸಿದ ಬಳಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ದೇವಾಲಯ ಜೀರ್ಣೋ ದ್ಧಾರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದು ಮೊದಲ ಹಂತದ ಹಣ 4 ಕೋಟಿ ರೂ. ಬಿಡುಗಡೆ ಮಾಡಿಸಲಾಗುವುದು ಎಂದರು.
ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು: ಜೀರ್ಣೋದ್ಧಾರ ಕಾಮಗಾರಿ ನಿರ್ವಹಣೆ ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಕಾರ್ಮಿಕರ ಕೊರತೆಯ ನೆಪದಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗದಿದ್ದರೆ ಈಗಲೇ ಹೇಳಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಜೊತೆ ನೆರೆಯ ರಾಜ್ಯಗಳಿಂದ ನುರಿತ ಕಾರ್ಮಿಕರನ್ನು ಕರೆಸುತ್ತೇವೆ. ವೈಯಕ್ತಿಕ ಹಾಗೂ ತಾಂತ್ರಿಕ ಕಾರಣಗಳು ಎಲ್ಲವನ್ನೂ ಬದಿಗಿಟ್ಟು, ಖುದ್ದಾಗಿ ಹಾಜರಿದ್ದು
ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮುಜರಾಯಿ ಹಾಗೂ ಪುರಾತತ್ವ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ 212ರ ಬಳಿ ಸ್ಥಳಾಂತರಗೊಂಡಿರುವ ದೇವಾಲಯ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅತ್ಯಾಧುನಿಕ ಶೌಚಾಲಯ ನಿರ್ಮಿಸಿ: ಜಾತ್ರೋತ್ಸವದ ವೇಳೆ ಹಳೆ ರಥದಲ್ಲಿಯೇ ರಥೋತ್ಸವ ನಡೆಯುತ್ತಿರುವ ಬಗ್ಗೆ ಭಕ್ತರು ಗಮನಸೆಳೆದಾಗ ಜಿಲ್ಲಾಧಿಕಾರಿಗಳ ಪರಿಮಿತಿಯೊಳಗೆ ನೂತನ ರಥವನ್ನು ಸಿದ್ಧಪಡಿಸುವಂತೆ ಡೀಸಿ ಅಭಿರಾಮ್ ಜಿ.ಶಂಕರ್ ಅವರಿಗೆ ಸೂಚಿಸಿದ ಸಚಿವರು, 1.50 ಕೋಟಿ ರೂ.ಗಳ ವೆಚ್ಚದ ಯೋಜನೆಯಲ್ಲಿ ಸುಸಜ್ಜಿತ ಅತ್ಯಾಧುನಿಕ ಶೌಚಾಲಯವನ್ನು ಭಕ್ತಾದಿಗಳು ಹಾಗೂ ಸಾರ್ವಜನಿಕರಿಗೆ ಪಾವತಿ ಮತ್ತು ಬಳಕೆ ಯೋಜನೆಯಲ್ಲಿ ನಿರ್ಮಾಣ ಮಾಡುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಅವರಿಗೆ ಸಲಹೆ ನೀಡಿದರು.
ಅನುದಾನ ಬಿಡುಗಡೆಗೆ ಮನವಿ: ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಮನೆದೇವರಾದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯವನ್ನು ಜೀಣೋದ್ಧಾರ ಗೊಳಿಸಲು ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಂದ 17 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ 5 ಕೋಟಿ ಬಿಡುಗಡೆಯಾಗಿ, ಕೋಟಿ ಹಣ ಮಾತ್ರ ಮಂಜೂರಾಗಿದ್ದರಿಂದ ಹಣಕ್ಕೆ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ನಾಲ್ಕು ಕೋಟಿ ರೂಗಳನ್ನು ಉಸ್ತುವಾರಿ ಸಚಿವರು ಸರ್ಕಾರದಿಂದ ಬಿಡುಗಡೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ: ಈಗಾಗಲೇ ಒಂದುವರೆ ಕೋಟಿ ರೂ.ಗಳ ವೆಚ್ಚದ ಕಲ್ಯಾಣಿ ಕೊಳದ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕಾಲದಲ್ಲಿಯೇ ಗಣ್ಯರ ಅತಿಥಿಗೃಹ ನಿರ್ಮಾಣಕ್ಕೂ ಆರು ಕೋಟಿ ರೂ. ಮಂಜೂರಾಗಿದ್ದರೂ ನಿವೇಶನ ಸಮಸ್ಯೆಯಿಂದ ಕಾಮಗಾರಿ ಬಾಕಿ ಇತ್ತು. ಈಗ ತೋಟಗಾರಿಕೆ ನಿವೇಶನವನ್ನು ಅತಿಥಿ ಗೃಹ ನಿರ್ಮಾಣ ಕಾಮಗಾರಿಗೆ ಹಸ್ತಾಂತರಿಸಿ ಕೊಂಡಿರುವುದರಿಂದ ಮುಂದಿನ ಬಜೆಟ್ನಲ್ಲಿ ಅನುದಾನ ಮಂಜೂರಾತಿಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಈ ಹಿಂದೆ ಕೈಗೊಳ್ಳಲಾಗಿದ್ದು ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರು.
ಶಾಸಕ ಎಂ.ಅಶ್ವಿನಿ ಕುಮಾರ್, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಡಾ.ಎನ್.ಎಲ್. ಭಾರತಿಶಂಕರ್, ಜಿಪಂ ಸದಸ್ಯ ಎಸ್.ವಿ.ಜಯಪಾಲ ಭರಣಿ, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಪಾರುಪತ್ತೆಗಾರ ಎಂ.ಬಿ.ಸಾಗರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಜಿಪಂ ಮಾಜಿ ಸದಸ್ಯರಾದ ಎಂ.ಆರ್.ಸೋಮಣ್ಣ, ಶಶಿಕಲಾ ನಾಗರಾಜು, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಸಿ. ಲೋಕೇಶ್, ಮುಖಂಡರಾದ ಎಂ.ಆರ್.ಶಿವಮೂರ್ತಿ, ಎಚ್.ಎಂ.ಪರಶಿವಮೂರ್ತಿ, ಎಂ.ನಾಗೇಂದ್ರ, ಪುಟ್ಟಮಾದನಾಯಕ ಇತರರು ಇದ್ದರು.
ಸಂಸದರಿಂದ 10 ಲಕ್ಷ, ಎಂಎಲ್ಸಿಯಿಂದ 20 ಲಕ್ಷ ಘೋಷಣೆ: ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯ ಜೀರ್ಣೋದ್ಧಾರ ಪರಿಶೀಲನಾ ಸಭೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮನವಿಯಂತೆ ಜೀರ್ಣೋದ್ಧಾರಕ್ಕೆ ಸಂಸದರ ನಿಧಿಯಿಂದ 10 ಲಕ್ಷ ರೂ. ಘೋಷಣೆ ಮಾಡಿದರೆ, ಶೌಚಾಲಯ ನಿರ್ಮಾಣಕ್ಕೆ ವಿಧಾನಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 20 ಲಕ್ಷ ರೂ. ನೆರವು ನೀಡುವುದಾಗಿ ಮರಿತಿಬ್ಬೆಗೌಡ ಘೋಷಿಸಿದರು.