ಪ್ರಾಮಾಣಿಕ ಕಾರ್ಯದಿಂದ ಯಶಸ್ಸು ಸಾಧ್ಯ
Team Udayavani, Jul 22, 2019, 3:00 AM IST
ಮೈಸೂರು: ಜೆ.ಪಿ.ನಗರದ ಅರಿವಿನ ಮನೆ ಮಹಿಳಾ ಬಳಗವು ಮಾಜಿ ಸೈನಿಕರು ಮತ್ತು ರೈತರನ್ನು ಸನ್ಮಾನಿಸುವ ಮೂಲಕ ದಶಮಾನೋತ್ಸವವನ್ನು ಆಚರಿಸಿಕೊಂಡಿತು.
ಮೈಸೂರಿನ ಜೆ.ಪಿ.ನಗರದ ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಬಳಗದ 10ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾಜಿ ಯೋಧ ಎಲ್.ಸಿದ್ದಪ್ಪಾಜಿ, ಮಾಜಿ ಹವಾಲ್ದಾರ ಮೆಚಂಡ ಜಿ.ಚಿಟ್ಟಿಯಪ್ಪ, ಮಾಜಿ ನಾಯಕ್ ಎಂ.ಜಿ.ಹಿರಿಯಣ್ಣ ಹಾಗೂ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದ ಪ್ರಗತಿಪರ ರೈತ ಮಹಿಳೆ ಸುನೀತಾ ಅಂದಾನಿ ಅವರನ್ನು ಸನ್ಮಾನಿಸಲಾಯಿತು.
ಬಳಗದಿಂದ ನಿಸ್ವಾರ್ಥ ಸೇವೆ: ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಯಾವ ಆಪೇಕ್ಷೆಯೂ ಇಲ್ಲದೇ ನಿಸ್ವಾರ್ಥವಾಗಿ 10 ವರ್ಷಗಳಿಂದ ಅರಿವಿನ ಮನೆ ಮಹಿಳಾ ಬಳಗ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಕಾರ್ಯ.
ತಮ್ಮ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿದರೆ ಯಶಸ್ಸು ಖಂಡಿತ ಸಿಗುತ್ತದೆ. ಯಾವುದೇ ಸಂಘ- ಸಂಸ್ಥೆಗಳು ಸಮಾಜಮುಖೀಯಾಗಿ ಕಾರ್ಯೋನ್ಮುಖವಾದರೆ, ಸಮಾಜದಲ್ಲಿ ಪರಿವರ್ತನೆ ತರಬಹುದು. ಸದೃಢ ಸಮಾಜ ನಿರ್ಮಿಸಬಹುದು. ಅದಕ್ಕೆ ನಿಸ್ವಾರ್ಥ ಸೇವೆ ಮಾಡಬೇಕು ಎಂದರು.
ಸೈನಿಕ, ರೈತರ ಸನ್ಮಾನಕ್ಕೆ ಪ್ರಶಂಸೆ: ವಿಕೇರ್ ಎಕ್ಸ್-ಸರ್ವಿಸ್ಮೆನ್ ಟ್ರಸ್ಟ್ ಅಧ್ಯಕ್ಷ ಮಂಡೇಟಿರ ಎನ್.ಸುಬ್ರಮಣಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳಲ್ಲಿ ಸೈನಿಕರನ್ನು ಸನ್ಮಾನಿಸಲಾಗುತ್ತದೆ. ರೈತರನ್ನು ಸನ್ಮಾನಿಸುವುದು ವಿರಳ.
ಸಾಮಾಜಿಕ ಕಾರ್ಯಗಳಲ್ಲಿ ನಿರತವಾಗಿರುವ ಅರಿವಿನ ಮನೆ ಮಹಿಳಾ ಬಳಗದ ಸದಸ್ಯೆರು ದೇಶದ ಆಧಾರ ಸ್ತಂಭಗಳಾಗಿರುವ ಸೈನಿಕರು ಮತ್ತು ರೈತರನ್ನು ಸನ್ಮಾನಿಸುತ್ತಿರುವುದು ಪ್ರಶಂಸನೀಯವಾದ ಕಾರ್ಯ ಎಂದು ಹೇಳಿದರು.
ಅರಿವಿನ ಮನೆ ಮಹಿಳಾ ಬಳಗದ ಅಧ್ಯಕ್ಷೆ ಧನ್ಯ ಸತ್ಯೇಂದ್ರಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದ ನಮ್ಮ ಬಳಗವು ಪ್ರತಿಭಾ ಪುರಸ್ಕಾರ, ಬಸವ ಜಯಂತಿಗಳ ಆಚರಿಸುವುದು ಸಾಂಸ್ಕತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್ಎಂಪಿ ಅಕಾಡೆಮಿ ವ್ಯವಸ್ಥಾಪಕಿ ಡಾ.ಸಿ.ತೇಜೋವತಿ, ಮಾಜಿ ಮಹಾಪೌರ ಬಿ.ಎಲ್.ಭೈರಪ್ಪ, ನಗರ ಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್ ಹಾಜರಿದ್ದರು.