ಮೈತ್ರಿ ಪಕ್ಷಗಳ ವಿರುದ್ಧ ಸುಮಲತಾ ಅಸಮಾಧಾನ
Team Udayavani, Mar 5, 2019, 7:47 AM IST
ಕೆ.ಆರ್.ನಗರ: ಅಂಬರೀಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಸೆ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಪಟ್ಟಣದಲ್ಲಿ ನಡೆದ ಅಂಬರೀಶ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಂಬರೀಶ್ ಹತ್ತಾರು ವರ್ಷಗಳಿಂದ ಕಾಂಗ್ರೆಸ್ನಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಮತ್ತು ಮತದಾರರು ಬಲಿಷ್ಠವಾಗಿದ್ದಾರೆ.
ಜನಾಭಿಪ್ರಾಯ ಒಂದು ರೀತಿಯಿದ್ದರೆ, ಅದನ್ನು ಅರ್ಥ ಮಾಡಿಕೊಳ್ಳದ ಪಕ್ಷಗಳು ಮತ್ತೂಂದು ರೀತಿಯಲ್ಲಿ ಯೋಚಿಸುತ್ತಿವೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದರು. ನಟ ದೊಡ್ಡಣ್ಣ ಮಾತನಾಡಿ, ನನ್ನ ತಾಯಿ ಇದೇ ತಾಲೂಕಿನ ಚನ್ನಪ್ಪನಕೊಪ್ಪಲು ಗ್ರಾಮದವರಾಗಿದ್ದು, ಅಂಬರೀಶ್ ಅಭಿಮಾನಿಗಳು ಇಂದು ಇಟ್ಟಿರುವ ಪ್ರೀತಿ ಮತ್ತು ಅಭಿಮಾನ ಮುಂದೆಯೂ ಶಾಶ್ವತವಾಗಿರಲಿ ಎಂದರು.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮಾತನಾಡಿ, ಅಂಬರೀಶ್ ಹೆಸರು ಮಂಡ್ಯದಲ್ಲಿ ಅಳಿಯಬಾರದು ಎಂಬ ಅಭಿಮಾನಿಗಳ ಒತ್ತಾಸೆ ಮತ್ತು ಜನರ ಕೂಗು ಸುಮಲತಾ ರಾಜಕೀಯ ಪ್ರವೇಶಿಸುವಂತೆ ಮಾಡಿದ್ದು, ಕಾಂಗ್ರೆಸ್ನಿಂದ ಟಿಕೆಟ್ ಕೇಳಿದ್ದು, ನಿಮ್ಮ ಬೆಂಬಲ ಮತ್ತು ಶಕ್ತಿ ಅವರ ಮೇಲೆ ಎಂದಿಗೂ ಇರಲಿ ಎಂದರು.
ಸಭೆಯಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಶ್ರೀರಾಮ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಡ್ಯಕುಮಾರ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯ್ಯದ್ ಜಾಬೀರ್, ನೈಸ್ ಸಂಸ್ಥೆ ಉಪಾಧ್ಯಕ್ಷ ಟಿ.ಮಹದೇವ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ಹರೀಶ್, ಮಾಜಿ ಅಧ್ಯಕ್ಷರಾದ ಡಿ.ಕಾಂತರಾಜು, ನರಸಿಂಹರಾಜು, ಉಪಾಧ್ಯಕ್ಷೆ ಪಾರ್ವತಿ, ಸದಸ್ಯ ಕೆ.ಎಲ್.ಕುಮಾರ್, ಕೆ.ಜಿ.ಸುಬ್ರಹ್ಮಣ್ಯ,
ಮಾಜಿ ಸದಸ್ಯ ಕೋಳಿ ಪ್ರಕಾಶ್, ದೊಡ್ಡೇಕೊಪ್ಪಲು ಗ್ರಾಪಂ ಅಧ್ಯಕ್ಷೆ ಸುನೀತಾ, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎಸ್.ಮಹೇಶ್, ಕೆ.ಎನ್.ಪ್ರಸನ್ನಕುಮಾರ್, ತಾಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಟರಾಜು, ತಾಲೂಕು ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಜಿ.ಎಂ.ಹೇಮಂತ್, ಕಾಂಗ್ರೆಸ್ ಮುಖಂಡರಾದ ಮೂಡಲಕೊಪ್ಪಲು ಕೃಷ್ಣೇಗೌಡ, ಶಕುಂತಲಮ್ಮ, ದಿಡ್ಡಹಳ್ಳಿ ಬಸವರಾಜು, ಚಿಬುಕಹಳ್ಳಿ ಬಸವರಾಜು ಇತರರಿದ್ದರು.
ಕಾಂಗ್ರೆಸ್ ಅಸ್ತಿತ್ವ ಕಾಪಾಡುವ ಸದುದ್ದೇಶ: ತನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಹಾಗೂ ಯಾವುದೇ ಪದವಿಗೆ ಆಸೆಪಟ್ಟವಳಲ್ಲ. ಆದರೆ, ಅಂಬರೀಶ್ ಅಭಿಮಾನಿಗಳು ನಾವುಗಳು ರಾಜಕೀಯವಾಗಿ ಅನಾಥರಾಗಿ ಬಿಡುತ್ತೇವೆ.
ಹೀಗಾಗಿ ಅಣ್ಣನ ಸ್ಥಾನ ತುಂಬಬೇಕೆಂದು ಒತ್ತಡ ಹೇರುತ್ತಿರುವುದರಿಂದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಾಪಾಡುವ ಸದುದ್ದೇಶದಿಂದ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ್ದೇನೆ ಎಂದು ಸುಮಲತಾ ತಿಳಿಸಿದರು.
ಈಗಾಗಲೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ತಿಳಿಸಿದ್ದೇನೆ. ಸ್ಪರ್ಧಿಸುವುದಾದರೆ ಅದು ಮಂಡ್ಯ ಕ್ಷೇತ್ರದಿಂದ ಮಾತ್ರ. ಬೇರೆ ಕ್ಷೇತ್ರದ ಬಗ್ಗೆ ಕನಸಿನಲ್ಲಿಯೂ ಯೋಚಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.