ಶಾಲೆಯಲ್ಲೇ ಶಿಕ್ಷಕರು ಬಿಸಿಯೂಟ ಸೇವಿಸಿ
Team Udayavani, Jan 15, 2020, 3:00 AM IST
ಎಚ್.ಡಿ.ಕೋಟೆ: ಪಟ್ಟಣದ ಆದರ್ಶ ಶಾಲೆಯಲ್ಲಿ ಬಿಸಿಯೂಟದಲ್ಲಿ ಹುಳುಬಿದ್ದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆಯೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಎಚ್ಚರಿಕೆ ನೀಡಿದರು. ಅಲ್ಲದೇ ಶಾಲೆಯಲ್ಲಿ ತಯಾರಿಸುವ ಬಿಸಿಯೂಟವನ್ನು ಶಿಕ್ಷಕರೂ ಸೇವಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕು ಕೇಂದ್ರ ಸ್ಥಾನದ ಆದರ್ಶ ಶಾಲೆಯಲ್ಲಿ ಕೆಲ ದಿನಗಳ ಹಿಂದೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಆದರ್ಶ ಶಾಲೆಗೆ ಮಂಗಳವಾರ ಭೇಟಿ ನೀಡಿ ಶಾಲೆಯ ಮುಖ್ಯಶಿಕ್ಷಕ ಸೇರಿದಂತೆ ಸಹಶಿಕ್ಷಕರು ಹಾಗೂ ಅಡುಗೆ ತಯಾರಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಹುಳುಗಳು ಬಿದ್ದಿದ್ದ ಆಹಾರ ಧಾನ್ಯಗಳನ್ನು ಬಿಸಿಯೂಟಕ್ಕೆ ಬಳಸುತ್ತಿರುವುದನ್ನು ಮುಖ್ಯಶಿಕ್ಷಕರು ಸೇರಿದಂತೆ ಶಿಕ್ಷಕರು ಏಕೆ ಪರಿಶೀಲನೆ ನಡೆಸಿಲ್ಲ?, ಅಡುಗೆ ಸಹಾಯಕ ಮಹಿಳೆಯರು ಅಕ್ಕಿ, ಬೇಳೆಯಲ್ಲಿ ಹುಳು ಬಂದಿರುವ ವಿಷಯವನ್ನು ನಿಮ್ಮ ಗಮನಕ್ಕೆ ತಂದಿರಲಿಲ್ಲವೇ ಎಂದು ಮುಖ್ಯಶಿಕ್ಷಕರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಡುಗೆ ಸಹಾಯಕ ಮಹಿಳೆಯರು, ಕಳೆದ 10 ದಿನಗಳ ಹಿಂದೆಯೇ ಹುಳು ಬಂದಿದ್ದ ಅಕ್ಕಿ ಮತ್ತು ಬೇಳೆ ಮಾದರಿಯನ್ನು ಶಾಲೆಯ ಮುಖ್ಯಶಿಕ್ಷಕರಿಗೆ ತೋರಿಸಿದಾಗ, ಅವರು ” ಈ ಒಂದು ತಿಂಗಳು ಅಡ್ಜಸ್ಟ್ ಮಾಡಿ, ಹಣ ಇಲ್ಲ’ ಎಂದು ಹೇಳಿದ್ದರು ಎಂದು ಅಳಲು ತೋಡಿಕೊಂಡರು.
ಬಳಿಕ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಸೋಮಶೇಖರ್, ಹುಳುಬಿದ್ದಿರುವ ವಿಷಯ ನನಗೆ ತಿಳಿದೇ ಇಲ್ಲ, ನಾನು ಪ್ರತಿದಿನ ಆಹಾರ ಪದಾರ್ಥ ಪರೀಕ್ಷಿಸಿಯೇ ಅಡುಗೆಯವರಿಗೆ ವಿತರಿಸುತ್ತಿದ್ದೇನೆ, ನನ್ನಿಂದ ಅಡುಗೆ ತಯಾರಿಕಾ ಮಹಿಳೆಯರು ಸಾಲದ ರೂಪದಲ್ಲಿ ಹಣ ಕೇಳಿದ್ದರು. ನಾನು ಕೊಡಲಿಲ್ಲವಾದ್ದರಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಶಾಲೆಯ ಅಗತ್ಯಕ್ಕೆ ತಕ್ಕಂತೆ ನನ್ನಿಂದ ಅಲ್ಪಸ್ಪಲ್ಪ ಹಣ ಹೂಡಿಕೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಘಟನೆ ಬಳಿಕ ಜಿಲ್ಲಾಧಿಕಾರಿಗಳ ಶಾಲೆಗೆ ಭೇಟಿ ನೀಡಿದಾಗ ಉಗ್ರಾಣದಲ್ಲಿ ಅಕ್ಕಿ ಬೇಳೆ ಊಹಿಸಲಾಗದಷ್ಟು ಹುಳು ಹೇಗೆ ಬರಲು ಸಾಧ್ಯ? ಹಾಗೂ 2019ರ ನವೆಂಬರ್ ಮಾಹೆಯಲ್ಲಿಯೇ ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೇಟ್ ಬಳಸುತ್ತಿದ್ದದ್ದನ್ನು ಏಕೆ ಶಿಕ್ಷಕರು ಗಮನಿಸಿಲ್ಲ. ಇತ್ಯಾದಿ ಪ್ರಶ್ನೆಗಳು ಚರ್ಚೆಗೆ ಬಂದವು.
ಬಳಿಕ ಮಾತನಾಡಿದ ಶಾಸಕರು, ಮೇಲ್ನೋಟಕ್ಕೆ ಶಿಕ್ಷಕರ ಒಗ್ಗಟ್ಟಿನಲ್ಲಿ ಕೊರತೆ ಕಂಡು ಬರುತ್ತಿದೆ. ಪರೀಕ್ಷೆ ಮುಗಿಯುವ ತನಕ ನಿಯಮಾನುಸಾರ ಶಾಲೆಯ ಪ್ರತಿಯೊಬ್ಬ ಶಿಕ್ಷಕರೂ ಒಂದೊಂದು ತಿಂಗಳು ಉಗ್ರಾಣ ಮತ್ತು ಬಿಸಿಯೂಟ ತಯಾರಿಕೆ ಜವಾಬ್ದಾರಿ ತೆಗೆದುಕೊಳ್ಳಬೇಕು. ಎಲ್ಲಾ ಶಿಕ್ಷಕರು ಮತ್ತು ಅಡುಗೆ ಸಹಾಯಕ ಮಹಿಳೆಯರು ಶಾಲೆಯಲ್ಲಿಯೇ ಊಟ ಸೇವಿಸಬೇಕು.
ಮತ್ತೂಮ್ಮೆ ಇಂತಹ ಘಟನೆಗಳು ತಾಲೂಕಿನ ಯಾವುದೇ ಶಾಲೆಯಲ್ಲಿ ಕಂಡು ಬಂದರೂ ಅದಕ್ಕೆ ಮುಖ್ಯಶಿಕ್ಷಕರನ್ನೇ ನೇರ ಹೊಣೆ ಮಾಡುವ ಎಚ್ಚರಿಕೆ ನೀಡಿದರು. ಇದಕ್ಕೂ ಮುನ್ನ ಶಾಸಕ ಅನಿಲ್ ಚಿಕ್ಕಮಾದು ಸರದಿಯಲ್ಲಿ ಊಟ ಮಾಡುತ್ತಿದ್ದ ಶಾಲೆಯ ವಿದ್ಯಾರ್ಥಿಗಳ ಬಳಿಗೆ ತೆರಳಿ ಊಟದಲ್ಲಿ ಶುಚಿ ರುಚಿ ಕುರಿತಂತೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್.ಮಂಜುನಾಥ್, ತಾಪಂ ಇಒ ರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಅಕ್ಷರದಾಸೋಹದ ಸಿದ್ದರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಪುರಸಭಾ ಸದಸ್ಯರಾದ ಎಚ್.ಸಿ.ನರಸಿಂಹಮೂರ್ತಿ, ರಾಜು, ಲೋಕೇಶ್, ಪ್ರೇಮ್ಸಾಗರ್, ಜಿಪಂ ಮಾಜಿ ಸದಸ್ಯ ಚಿಕ್ಕವೀರನಾಯ್ಕ, ಶಂಭುಲಿಂಗನಾಯ್ಕ ಸೇರಿದಂತೆ ಶಾಲೆಯ ಶಿಕ್ಷಕರು ಹಾಜರಿದ್ದರು.
ಅಡುಗೆ ಮನೆಗೆ ಕಾಲಿಡದ ಶಿಕ್ಷಕರು!: ಆದರ್ಶ ಶಾಲೆಗೆ ಶಾಸಕ ಅನಿಲ್ ಚಿಕ್ಕಮಾದ ಭೇಟಿ ನೀಡಿದ ಸಂದರ್ಭದಲ್ಲಿ ಅಂದಿನ ಅವಘಡ ಕುರಿತು ಸ್ಪಷ್ಟನೆ ನೀಡಿದ ಅಡುಗೆ ಸಹಾಯಕ ಮಹಿಳೆಯರು, ಈ ಶಾಲೆಯಲ್ಲಿ ಪ್ರತಿದಿನ ಮಕ್ಕಳ ಹಾಜರಾತಿಗೆ ತಕ್ಕಂತೆ ಅಕ್ಕಿ ಬೇಳೆ ನೀಡುವುದಕ್ಕಾಗಲಿ, ಊಟ ಹೇಗಿದೆ?,
ಶುಚಿ ರುಚಿಯಾಗಿದೆಯೇ, ಅಡುಗೆ ತಯಾರಿ ಸ್ವತ್ಛತೆಯನ್ನು ಪರೀಕ್ಷಿಸಲು ಕಳೆದ ನಾಲ್ಕು ವರ್ಷಗಳಿಂದ ಯಾವ ಶಿಕ್ಷಕರೂ ಅಡುಗೆ ಮನೆಗೆ ಬರುತ್ತಿಲ್ಲ, ಆ ದಿನ ಅಡುಗೆ ತಯಾರಾದ ಮೇಲೆ ಹುಳುಮಿಶ್ರಣದ ಸಾಂಬರ್ ಸೇವಿಸಿ ವಿದ್ಯಾರ್ಥಿಗಳು ಅಸ್ಪಸ್ಥರಾದರ ಘಟನೆಗೆ ಮುಖ್ಯ ಶಿಕ್ಷಕರ ಬೇಜವಾಬ್ದಾರಿ ಕಾರಣ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ