ಅಸ್ವಸ್ಥಗೊಂಡಿದ್ದ ಆನೆ ಚಿಕಿತ್ಸೆ ಫಲ ನೀಡದೆ ಸಾವು
Team Udayavani, Apr 28, 2019, 3:00 AM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಸೇರಿದ ಆನೆ ಚೌಕೂರು ಸೆಕ್ಷನ್ನಲ್ಲಿ ಶುಕ್ರವಾರ ನಿತ್ರಾಣ ಗೊಂಡಿದ್ದ ಕಾಡಾನೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಹ್ನ ಸಾವನ್ನಾಪ್ಪಿದೆ.
ಹುಣಸೂರು-ವಿರಾಜಪೇಟೆ ರಸ್ತೆಯ ಪ್ರಾದೇಶಿಕ ಅರಣ್ಯ ವಿಭಾಗದ ಆನೆ ಚೌಕೂರು ಸೆಕ್ಷನ್ನ ಪಿರಿಯಾಪಟ್ಟಣ ವಲಯದ ಜೋಡಿಕಟ್ಟೆ ಕಳ್ಳ ಬೇಟೆ ತಡೆ ಶಿಬಿರದ ಬಳಿ ಸುಮಾರು 45-50 ವರ್ಷದ ಹೆಣ್ಣಾನೆಯೊಂದು ಶುಕ್ರವಾರ ಅಸ್ವಸ್ಥಗೊಂಡು ಬಿದ್ದಿದ್ದನ್ನು ಗಮನಿಸಿದ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಹುಣಸೂರು ಡಿಸಿಎಫ್ ವಿಜಯಕುಮಾರ್ ತಕ್ಷಣವೇ ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ರೆಹಮಾನ್ರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನದ ವೇಳೆಗೆ ಅಸುನೀಗಿದೆ. ಸಂಜೆ ವೇಳೆಗೆ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆನೆಯ ಸಾವಿಗೆ ಕಲುಷಿತ ನೀರು ಸೇವನೆ ಹಾಗೂ ಆಹಾರ ಕೊರತೆಯಿಂದ ಡೀ ಹೈಡ್ರೇಷನ್ನಿಂದ ಬಳಲುತ್ತಿರಬಹುದೆಂದು ಶಂಕಿಸಲಾಗಿದೆ. ಆದರೆ, ನಿಖರವಾದ ಕಾರಣ ಶವ ಪರೀಕ್ಷೆ ವರದಿ ಬಂದ ನಂತರವೇ ಗೊತ್ತಾಗಲಿದೆ ಎಂದು ಡಿಸಿಎಫ್ ವಿಜಯಕುಮಾರ್ ತಿಳಿಸಿದರು.