ಗಣರಾಜ್ಯೋತ್ಸವದಿಂದ ಹೊಸ ತಾಲೂಕು ಕಾರ್ಯಾರಂಭ
Team Udayavani, Jan 12, 2018, 12:09 PM IST
ಎಚ್.ಡಿ.ಕೋಟೆ: ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಹುದಿನಗಳ ಬೇಡಿಕೆಯಾಗಿದ್ದ ಸರಗೂರು ತಾಲೂಕು ಸೇರಿದಂತೆ 50 ತಾಲೂಕು ತಾಲೂಕುಗಳ ರಚನೆಗೆ ಮುಂದಾಗಿ ಘೋಷಣೆ ಮಾಡಿದ್ದು, ಇದೇ ತಿಂಗಳ ಜ.26 ರ ಗಣರಾಜ್ಯೋತ್ಸವ ದಿನದಿಂದ ಎಲ್ಲ ಹೊಸ ತಾಲೂಕುಗಳು ಕಾರ್ಯ ಆರಂಭಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನೂತನ ತಾಲೂಕು ಕೇಂದ್ರ ಸರಗೂರು ಪಟ್ಟಣದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಎಚ್.ಡಿ.ಕೋಟೆ ತಾಲೂಕು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ದೊಡ್ಡ ತಾಲೂಕಾಗಿದ್ದರೂ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕಾಗಿತ್ತು, ಆ ಹಿನ್ನಲೆಯಲ್ಲಿ ತಾಲೂಕಿನಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ ಯಾವುದೇ ತಾರತಮ್ಯ ಮಾಡದೇ ಎಚ್.ಡಿ.ಕೋಟೆ ತಾಲೂಕಿಗೆ 1400 ಕೋಟಿ ರೂ. ಅನುದಾನವನ್ನು ಸರ್ಕಾರ ಕೊಟ್ಟಿದೆ, ರಾಜ್ಯದ ಇತಿಹಾಸದಲ್ಲೇ ಯಾವ ತಾಲೂಕಿಗೂ ಯಾವ ಸರ್ಕಾರದ ಅವಧಿಯಲ್ಲೂ ಇಷ್ಟು ಪ್ರಮಾಣದ ಅನುದಾನ ಕೊಟ್ಟಿಲ್ಲ ಎಂದು ತಿಳಿಸಿದರು.
ಅನಾರೋಗ್ಯದ ಹಿನ್ನಲೆಯಲ್ಲಿ ಆಕಾಲಿಕ ಮರಣಕ್ಕೆ ತುತ್ತಾದ ಕ್ಷೇತ್ರದ ಶಾಸಕರಾಗಿದ್ದ ಚಿಕ್ಕಮಾದು ಅವರು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಇರಬೇಕಿತ್ತು, ಅವರಿಲ್ಲದೆ ಈ ಸರ್ಕಾರಿ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರೂ ಒಂದು ನಿಮಿಷ ಮೌನಚರಣೆ ಮಾಡಿ ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದ ಸಿಎಂ, ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತಿದೆ ಹಾಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಖರ್ಚಲ್ಲಿ ಕಾರ್ಯಕ್ರಮ ಆಯೋಜಿಸಿ ಚುನಾವಣಾ ಪ್ರಚಾರಕ್ಕೆ ಹೋಗ್ತಿದ್ದಾರೆ ಎಂದು ವಿರೋಧ ಪಕ್ಷಗಳುಆರೋಪಿಸುತ್ತಿದ್ದಾರೆ.
ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ಸಾಲ ಮನ್ನಾ: ನಾವು ಅಧಿಕಾರಕ್ಕೆ ಬರುವ ಮುನ್ನ ಚುನಾವಣ ಪ್ರಣಾಳಿಕೆಯಲ್ಲಿ ನೀಡಿದ್ದ, 165 ಭರವಸೆಗಳಲ್ಲಿ ಈಗಾಗಲೇ 155 ಭರವಸೆಗಳನ್ನು ಈಡೇಸಿದ್ದೇವೆ, ಪ್ರಣಾಳಿಕೆಯಲ್ಲಿ ಸೇರದಿದ್ದರೂ ಕಳೆದ ಮೂರು ವರ್ಷಗಳಲ್ಲಿ ಭೀಕರ ಬರಗಾಲ ಅವರಿಸಿದ್ದರಿಂದ ರೈತರು ಸಹಕಾರ ಬ್ಯಾಂಕ್ಗಳಲ್ಲಿ ಪಡೆದಿದ್ದ 50 ಸಾವಿರ ರೂ ಸಾಲ ಮನ್ನ ಮಾಡಿದ್ದೇವೆ.
ಬಿಜೆಪಿ ಏಕೆ ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲ ಮನ್ನಾ ಮಾಡಲಿಲ್ಲ, ಇನ್ನೇನು ಮುಖ್ಯಮಂತ್ರಿ ಸರ್ಕಾರಿ ಕೆಲಸಕ್ಕೆ ಸ್ವಂತ ಖರ್ಚನಲ್ಲಿ ಹೋಗಬೇಕ ಎಂದು ಟೀಕಿಸಿದ ಮುಖ್ಯಮಂತ್ರಿ, ಮೋದಿ ದೊಡ್ಡ ದೊಡ್ಡ ವಿಮಾನದಲ್ಲಿ ವಿದೇಶ ಪ್ರವಾಸ ಹೋಗ್ತಾರಲ್ಲ ಅವರೂ ಸ್ವಂತ ಹಣದಲ್ಲಿ ಹೋಗ್ತರಾ ಎಂದು ಛೇಡಿಸಿದ ಅವರು ಟೀಕೆಗೂ ಅಧಾರ ಬೇಕು, ಟೀಕೆಗೆೆ ಟೀಕೆನೇ ಆಗಬಾರದು ಎಂದರು.
ಹೋರಾಟದ ಪ್ರತಿಫಲ: ಸಂಸದ ಆರ್.ಧ್ರುವನಾರಯಣ್ ಮಾತನಾಡಿ, ಇವತ್ತಿನ ದಿನವನ್ನು ಸರಗೂರಿನ ಜನತೆ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನ, ಸುಮಾರು 35 ವರ್ಷಗಳ ಹೋರಾಟ ಪ್ರತಿಫಲವಾಗಿ ಹಾಗೂ ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿಗಳಾದ್ದರಿಂದ ಸರಗೂರು ನೂತನ ತಾಲೂಕಾಗಿ ಘೋಷಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎಚ್.ಡಿ.ಕೋಟೆ ತಾಲೂಕು ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ತುಂಬಾ ದೊಡ್ಡ ತಾಲೂಕಾಗಿದ್ದರಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸರಗೂರನ್ನು ಮತ್ತೂಂದು ನೂತನ ತಾಲೂಕಾಗಿ ಘೋಷಣೆ ಮಾಡಲಾಗಿದೆ ಎಂದ ಅವರು, ಜಿಲ್ಲೆಯ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದರಿಂದ ಹಿಂದುಳಿದ ತಾಲೂಕಾಗಿದ್ದ ಎಚ್.ಡಿ.ಕೋಟೆ ತಾಲೂಕಿನ ಅಭಿವೃದ್ಧಿಗಾಗಿ ನದಿಯಿಂದ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಮಹತ್ವಕಾಂಶೆಯ 6 ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ತಾಲೂಕಿಗೆ ಮಂಜೂರು ಮಾಡಿದ ಪರಿಣಾಮ ಇಂದು 124 ಗ್ರಾಮಗಳ ಜನರು ಶುದ್ಧ ನೀರು ಕುಡಿಯುತ್ತಿದ್ದಾರೆ.
ಇದಲ್ಲದೆ ನೀರಾವರಿ, ರಸ್ತೆ, ಭವನಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಡಿ ಹೆಚ್ಚು ಅನುದಾನ ನೀಡಿದ್ದು, ಎಸ್ಇಪಿ, ಟಿಎಸ್ಪಿ ಯೋಜನೆಗಳಲ್ಲೂ ಹೆಚ್ಚು ಅನುದಾನ ಸೇರಿ 1400 ಕೋಟಿ ರೂ. ಅನುದಾನ ತಾಲೂಕಿನ ಅಭಿವೃದ್ಧಿಗೆ ನೀಡಿದ್ದು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಮಾಜಿ ಸಚಿವ ಸತೀಶ್ ಜಾರಕಿಹೋಳಿ, ಸಕ್ಕರೆ ಸಚಿವೆ ಗೀತಾ ಮಹದೇವ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಧರ್ಮಸೇನಾ, ಶಾಸಕ ಕೆ.ವೆಂಕಟೇಶ್, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ್, ಸದಸ್ಯರಾದ ಎಂ.ಪಿ.ನಾಗರಾಜ್, ವೆಂಕಟಸ್ವಾಮಿ, ಶ್ರೀಕೃಷ್ಣ, ಮಹದೇವಮ್ಮ ಚಿಕ್ಕಣ್ಣ, ತಾ.ಪಂ ಅಧ್ಯಕ್ಷೆ ಮಂಜುಳಾ ದೇವಣ್ಣ, ಉಪಾಧ್ಯಕ್ಷೆ ಮಂಜುಳಾ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಶಂಬೇಗೌಡ, ಸದಸ್ಯ ಅಂಕನಾಯ್ಕ.
ಎಚ್.ಡಿ.ಕೋಟೆ ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರ್, ಉಪಾಧ್ಯಕ್ಷೆ ಸುಮಾ ಸಂತೋಷ್, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ, ಸರಗೂರು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ ಬಿಲ್ಲಯ್ಯ, ಸದಸ್ಯರಾದ ಹನುಮನಾಯ್ಕ, ಎಪಿಎಂಸಿ ಅಧ್ಯಕ್ಷ ಸಿದ್ದರಾಜು, ನಂದಿನಿ ಚಂದ್ರಶೇಖರ್, ಜಿಲ್ಲಾಧಿಕಾರಿ ಡಿ.ರಂಧೀಪ್, ಜಿ.ಪಂ ಸಿಇಓ ಶಿವಶಂಕರ್, ತಹಶೀಲ್ದಾರ್ ಕೃಷ್ಣ, ಇನ್ನಿತರರು ಸೇರಿದಂತೆ ಸುಮಾರು 10 ಸಾವಿರಕ್ಕೂ ಹೆಚ್ಚಿನ ಜನರು ಇದ್ದರು.
ಈ ಹಿಂದೆ ಚುನಾವಣೆಗೂ ಮುನ್ನ ಎಚ್.ಡಿ.ಕೋಟೆ ಕ್ಷೇತ್ರಕ್ಕೆ ಚುನಾವಣ ಪ್ರಚಾರಕ್ಕೆ ಬಂದಾಗ ನಾನು ಹಿಂದುಳಿದ ತಾಲೂಕಾಗಿರುವ ಎಚ್.ಡಿ.ಕೋಟೆ ತಾಲೂಕನ್ನು ದತ್ತು ತಗೆದುಕೊಳ್ಳುತ್ತೇನೆ ಎಂದಿದ್ದೆ, ಹಾಗಾಗಿ ತಾಲೂಕಿನ ಅಭಿವೃದ್ಧಿಗಾಗಿ ತಾಲೂಕಿಗೆ ನಮ್ಮ ಪಕ್ಷದ ಶಾಸಕರಿಲ್ಲದಿದ್ದರೂ 1400 ಕೋಟಿ ರೂ. ಹೆಚ್ಚಿನ ಅನುದಾನ ನೀಡಿದ್ದೇನೆ, ನಾವು ಯಾವತ್ತು ಅಧಿಕಾರ ಚಲಾಯಿಸುವುದಕ್ಕೆ ಇರುವುದು ಎಂದು ತಿಳಿದಿಲ್ಲ ಸೇವೆ ಎಂದು ತಿಳಿದಿದ್ದೇನೆ, ಮುಂದೆ ಎಲೆಕ್ಷನ್ ಬರುತ್ತಿದೆ ಓಟು ಕೇಳಲು ಬರುತ್ತೇನೆ ನಾವು ಯಾರನ್ನೇ ಅಭ್ಯರ್ಥಿ ಮಾಡಿದ್ರು ನೀವು ಗೆಲ್ಲಿಸಬೇಕು.
-ಸಿದ್ದರಾಮಯ್ಯ ,ಮುಖ್ಯಮಂತ್ರಿಗಳು