ಕೋಮುವಾದಿ, ಜಾತ್ಯತೀತ ಶಕ್ತಿಗಳ ಮಧ್ಯೆ ಹೋರಾಟ
Team Udayavani, Mar 27, 2019, 12:59 PM IST
ತಿ.ನರಸೀಪುರ: ಲೋಕಸಭಾ ಚುನಾವಣೆಯು ಜಾತ್ಯತೀತ ಹಾಗೂ ಕೋಮುವಾದಿ ಶಕ್ತಿಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು, ಜಾತ್ಯತೀತ ಶಕ್ತಿ ಗೆಲ್ಲಿಸಲು ಕಾಂಗ್ರೆಸ್ ಬೆಂಬಲಿಸುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಮನವಿ ಮಾಡಿದರು.
ತಾಲೂಕಿನ ತಲಕಾಡು ನಾಯಕರ ಸಮುದಾಯ ಭವನದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ನಂತರ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ.
ಉದ್ಯೋಗದ ಭರವಸೆ ಹುಸಿಯಾಗಿದೆ. ಸರ್ಜಿಕಲ್ ಸ್ಟ್ರೈಕ್ ನೆಪವಿಟ್ಟು ರಾಜಕೀಯ ಮಾಡುತ್ತಿದ್ದಾರೆ. ವಿದೇಶದಲ್ಲಿನ ಕಪ್ಪು ಹಣ ತಂದು ಬಡವರ ಖಾತೆಗಳಿಗೆ ಹಣ ಹಾಕುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ. ಇಂತಹ ಸರ್ಕಾರವನ್ನು ದೂರಡಲು ಮತ್ತೆ ಕಾಂಗ್ರೆಸ್ಗೆ ಅಧಿಕಾರ ನೀಡಬೇಕು ಎಂದು ಕೋರಿದರು.
ಚುನಾವಣಾ ಗಿಮಿಕ್: ಐದು ವರ್ಷ ಆಡಳಿತ ನಡೆಸಿದ ಮೋದಿಯವರು ಚುನಾವಣೆ ಸಮೀಪಿಸುತ್ತಿದ್ದಂತೆ ರೈತರ ಬ್ಯಾಂಕ್ ಖಾತೆಗಳಿಗೆ 6 ಸಾವಿರ ರೂ. ನೀಡುವುದಾಗಿ ಘೋಷಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಈ ಬಗ್ಗೆ ಆಲೋಚಿಸಿದ ಮೋದಿ ಈಗ ಮಾಡುತ್ತಿದ್ದಾರೆ. ಇದು ಚುನಾವಣಾ ಗಿಮಿಕ್, ಇದರ ಬದಲು ರೈತರ ಸಾಲಮನ್ನಾ ಮಾಡಿದ್ದರೆ ಎಷ್ಟೋ ರೈತರ ಬದುಕಿಗೆ ಅನುಕೂಲವಾಗುತ್ತಿತ್ತು ಎಂದರು.
ಪರಿಷತ್ ಸದಸ್ಯ ಧರ್ಮಸೇನಾ, ಕೋಟೆ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ಮಾಜಿ ಸಂಸದ ಎಂ. ಶಿವಣ್ಣ, ಮಾಜಿ ಶಾಸಕ ಕೃಷ್ಣಪ್ಪ, ಬಾಲರಾಜು ಜಿಪಂ ಸದಸ್ಯ ಮಂಜುನಾಥ, ತಾಪಂ ಅಧ್ಯಕ್ಷ ಚೆಲುವರಾಜು, ಸದಸ್ಯ ಕುಕ್ಕೂರು ಗಣೇಶ್, ಸುಧಾ ಮಹದೇವಯ್ಯ, ಮುಖಂಡರಾದ ವಜ್ರೆಗೌಡ, ಕೆ.ಸಿ. ಬಲರಾಮ, ಹೇಳವರಹುಂಡಿ ಸೋಮು ಇತರರಿದ್ದರು.
ಮಹದೇವಪ್ಪ ಗೈರು: ತಲಕಾಡಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಗೆ ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು. ಈ ಹಿಂದೆ ನಡೆದ ಜನಸಂಪರ್ಕ ಅಭಿಯಾನದಲ್ಲಿ ಗೈರಾಗಿದ್ದ ಅವರು ಇಂದಿನ ಪ್ರಚಾರ ಸಭೆಗೆ ಬರುತ್ತಾರೆಂಬ ಮಾತಿತ್ತು. ಆದರೆ, ಗೈರಾಗಿರುವುದು ಹಲವು ಚರ್ಚೆಗೆ ಗ್ರಾಸವಾಗಿತ್ತು.
ಬೆಲೆ ಏರಿಸಿದ್ದೇ ಮೋದಿ ಸಾಧನೆ: ವರುಣಾ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ದೇಶ ವಿಶ್ವದಲ್ಲಿ 65ನೇ ಸ್ಥಾನದಲ್ಲಿತ್ತು. ಬಿಜೆಪಿ ಸರ್ಕಾರ ಬಂದ ವೇಳೆ 111ನೇ ಸ್ಥಾನಕ್ಕೆ ಇಳಿದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸಾಧನೆ. ಪೆಟ್ರೋಲ್, ಡಿಸೇಲ್ ಅಡುಗೆ ಅನಿಲ ಬೆಲೆ ಏರಿಸಿದ್ದೇ ಇವರ ಸಾಧನೆ. ಕಪ್ಪು ಹಣದ ತರುವ ಪರಿಕಲ್ಪನೆ ಬರಿ ಸುಳ್ಳಾಗಿದೆ. ರೈತರ ಸಾಲ ಮನ್ನಾ ಮಾಡಿಲ್ಲ. ಮೋದಿ ಬರೀ ಪ್ರಚಾರಕ್ಕಾಗಿ ಹಣ ಖರ್ಚು ಮಾಡಿದ್ದಾರೆ ಎಂದು ಕಿಡಿಕಾರಿದರು.