ಮತದಾನ ಹಬ್ಬದಂತೆ ಆಚರಿಸಿದ ಗ್ರಾಮೀಣರು
Team Udayavani, May 13, 2018, 1:04 PM IST
ಮೈಸೂರು: ವಿಧಾನಸಭೆ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶನಿವಾರ ಪ್ರಜಾಪ್ರಭುತ್ವದ ಹಬ್ಬದ ವಾತಾವರಣ ಕಂಡು ಬಂದಿತು. ಅಕ್ಷರಸ್ಥ ಮತದಾರರು ಹೆಚ್ಚಿರುವ ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿನ ಮತದಾರರು ಮತ ಚಲಾಯಿಸಲು ಹೆಚ್ಚಿನ ಉತ್ಸಾಹ ತೋರಿಲ್ಲ. ಆದರೆ, ಗ್ರಾಮೀಣ ಮತದಾರರು ಚುನಾವಣೆಯನ್ನು ಹಬ್ಬದಂತೆ ಆಚರಿಸಿದರು.
ಸಿದ್ದರಾಮಯ್ಯಗೆ ಸ್ವಾಗತ: ಮುಖ್ಯಮಂತ್ರಿಯವರ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಹಲವು ಮುಖಂಡರು ಬೆಳಗ್ಗಿನಿಂದಲೇ ಸಿದ್ದರಾಮಯ್ಯ ಬರುವಿಕೆಯನ್ನು ಎದುರು ನೋಡುತ್ತಾ ಕುಳಿತಿದ್ದರು. ಮಧ್ಯಾಹ್ನ 12 ಗಂಟೆ ವೇಳೆಗೆ ಸಿದ್ದರಾಮಯ್ಯ ಆಗಮಿಸಿದ ಕೂಡಲೇ ಜೈಕಾರ ಕೂಗಿ ಸಂಭ್ರಮದಿಂದ ಬರಮಾಡಿಕೊಂಡರು. ಮನೆ ದೇವರು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮತಗಟ್ಟೆಗೆ ಬಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪುತ್ರ ಡಾ. ಯತೀಂದ್ರರೊಂದಿಗೆ ಬಂದು ಹಕ್ಕು ಚಲಾಯಿಸಿದರು.
ಮತ ಚಲಾಯಿಸಿದ ಕೃಷಿಕರು: ಗ್ರಾಮೀಣ ಪ್ರದೇಶದ ರೈತರು ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದರೂ ಬಿಸಿಲೇರುತ್ತಲೇ ಮತಗಟ್ಟೆಗೆ ಬಂದು ಮತಚಲಾಯಿಸಿ ಮತ್ತೆ ತಮ್ಮ ಕೆಲಸಗಳಿಗೆ ತೆರಳಿದರು. ಸ್ತ್ರೀಶಕ್ತಿ ಸಂಘಗಳ ಸದಸ್ಯರು ಗುಂಪು ಗುಂಪಾಗಿ ಬಂದು ಮತಚಲಾಯಿಸುತ್ತಿದ್ದರು. ವಯೋವೃದ್ಧರು, ಅನಾರೋಗ್ಯ ಪೀಡಿತರು ಗಾಲಿ ಕುರ್ಚಿ, ಇನ್ನೊಬ್ಬರ ಸಹಾಯದಿಂದ ಮತಗಟ್ಟೆಗಳಿಗೆ ಬಂದು ಚಲಾಯಿಸುತ್ತಿದ್ದುದು ಕಂಡು ಬಂದಿತು.
ಮನವೊಲಿಸುವ ಕಸರತ್ತು: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಆಲನಹಳ್ಳಿಯ ನಂದಿನಿ ಬಡಾವಣೆಯಲ್ಲಿನ ಶ್ರೀ ನಿರ್ವಾಣ ಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗಳಲ್ಲಿ ಜನ ಸರದಿಯಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದರು. ಮತಗಟ್ಟೆಯ ಅನತಿ ದೂರದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತದಾರರಿಗೆ ಚೀಟಿ ಬರೆದುಕೊಡುವ, ಅಂತಿಮ ಹಂತದಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚಿಸುವ ಕೆಲಸದಲ್ಲಿ ನಿರತರಾಗಿದ್ದರು.
ಮಹಿಳೆಯರ ಸರದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾಭ್ಯಾಸ ಮಾಡಿದ ಕುಪ್ಪೇಗಾಲದ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರ ಉದ್ದನೆಯ ಸರದಿ ಸಾಲು ಕಂಡು ಬಂದಿತು. ತಿ.ನರಸೀಪುರ ಪಟ್ಟಣದಲ್ಲಿರುವ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿನ ವರುಣಾ ಕ್ಷೇತ್ರದ ಮತಗಟ್ಟೆಯ ಪೈಕಿ ಒಂದರಲ್ಲಿ ಉದ್ದನೆಯ ಸಾಲು, ಮತ್ತೂಂದು ಮತಗಟ್ಟೆ ಖಾಲಿ ಇತ್ತು.
ಹೆಳವರ ಹುಂಡಿ, ಗೆಜ್ಜಗನಹಳ್ಳಿಯ ಮತಗಟ್ಟೆಯಲ್ಲೂ ಉದ್ದನೆಯ ಸಾಲಿತ್ತು. ಆದರೆ, ನಗರ್ಲೆ ಮತಗಟ್ಟೆಯಲ್ಲಿ ಮಧ್ಯಾಹ್ನ 1.40 ಆದರೂ ಮತದಾರರು ಹೆಚ್ಚಿರಲಿಲ್ಲ. ನಂಜನಗೂಡು ಕ್ಷೇತ್ರದ ಹೊರಳವಾಡಿ ಹೊಸೂರಿನ ಮತಗಟ್ಟೆಯ ಒಟ್ಟು 367 ಮತದಾರರ ಪೈಕಿ ಮಧ್ಯಾಹ್ನ 2 ಗಂಟೆಯಾದರೂ ಕೇವಲ 57 ಮಂದಿ ಮತ ಚಲಾಯಿಸಿದ್ದರು. ಹೀಗಾಗಿ ಅಲ್ಲಿನ ಮತಗಟ್ಟೆ ಸಿಬ್ಬಂದಿ ಜನರಿಲ್ಲದೆ ಆರಾಮಾಗಿದ್ದರು.
ಚಾಮುಂಡೇಶ್ವರಿ ಕ್ಷೇತ್ರದ ಮಂಡಕಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಉತ್ತಮ ಮತದಾನ ಕಂಡುಬಂದಿತು. ಮಧ್ಯಾಹ್ನ 2.45ರ ವೇಳೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ಮತಗಟ್ಟೆ ಸಂಖ್ಯೆ 247ರಲ್ಲಿ ಒಟ್ಟು 1233 ಮತದಾರರ ಪೈಕಿ 850 ಮಂದಿ ಮತದಾನ ಮಾಡಿದ್ದರೆ, ಮತಗಟ್ಟೆ ಸಂಖ್ಯೆ 248ರಲ್ಲಿನ 783 ಮತದಾರರ ಪೈಕಿ 545 ಮಂದಿ ಹಕ್ಕು ಚಲಾಯಿಸಿದ್ದರು. ಗೆಜ್ಜಗಳ್ಳಿಯ ಮತಗಟ್ಟೆ ಬಳಿಯೂ ಉದ್ದನೆಯ ಸರದಿಕಂಡು ಬಂದಿತು.
ಕಳೆದ ಚುನಾವಣೆಯಲ್ಲಿ ಚೆನ್ನಾಗಿಯೇ ಇದ್ದೆ, ನಾನೇ ಬಂದು ಮತ ಹಾಕಿದ್ದೆ. ಆದರೆ, ನಾಲ್ಕು ವರ್ಷಗಳ ಹಿಂದೆ ನಾಯಿ ಕಡಿತದಿಂದ ಕಾಲುಗಳ ಸ್ವಾಧೀನ ಕಳೆದುಕೊಂಡು ತಿರುಗಾಡಲು ಸಾಧ್ಯವಿಲ್ಲದಂತಾಗಿದೆ, ಆದರೂ ನನ್ನ ಹಕ್ಕು ಚಲಾಯಿಸಬೇಕು ಎಂದು ಬಂದಿದ್ದೇನೆ.
-ಸಣ್ಣಯ್ಯ, ವರುಣಾ ಕ್ಷೇತ್ರದ ಬನ್ನಹಳ್ಳಿಹುಂಡಿ ಮತಗಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Politics: ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಎಚ್.ವಿಶ್ವನಾಥ್
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ
Congress ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ ಬರುತ್ತೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ