ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ ಮೈಸೂರು ಹುಲಿ, ಟಿಪ್ಪುವಲ್ಲ: ಪ್ರತಾಪ್ ಸಿಂಹ
Team Udayavani, May 19, 2022, 11:55 AM IST
ಮೈಸೂರು: ಎಂದಿಗೂ ಮೈಸೂರು ಹುಲಿ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ. ನಮ್ಮ ಹುಲಿ ಕೆ.ಆರ್.ಎಸ್. ಕಟ್ಟಿದ್ದಾರೆ. ಬೆಂಗಳೂರಿಗೆ ಕರೆಂಟ್ ಕೊಟ್ಟರು. ಅವರೇ ಎಂದಿಂಗೂ ನಮ್ಮ ಹುಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮೈಸೂರು ಹುಲಿ ಯಾವಾಗ ಆಗಿದ್ದ? ಯಾವ ಹುಲಿ ಕೊಂದಿದ್ದನಂತೆ. ಪೋಸ್ಟರ್ ಗಳಲ್ಲಿ ಹುಲಿ ಚಿತ್ರಗಳನ್ನು ಹಾಕಿಬಿಟ್ಟರೆ ಮೈಸೂರು ಹುಲಿ ಆಗಬಿಡ್ತಾನ? ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಸುಲ್ತಾನ್ ಯಾವ ರಣರಂಗದಲ್ಲಿ ಹೋರಾಟ ಮಾಡಿದ್ದ? ಟಿಪ್ಪು ಸುಲ್ತಾನ್ ಕೋಟೆಯೊಳಗೆ ಸತ್ತಿದ್ದು. ಆದರೆ ಹುಲಿ ಎಂದಿಗೂ ಬೋನ್ ನಲ್ಲಿ ಸಾಯುವುದಿಲ್ಲ ಎಂದು ಟೀಕಿಸಿದರು.
ಟಿಪ್ಪು ಸುಲ್ತಾನ್ ಯುದ್ಧ ಮಾಡದೆ ಸಂಧಾನಕ್ಕೆ ಕಳುಹಿಸಿದ್ದ. ನಾಲ್ಕನೇ ಆಗ್ಲೋ ಮೈಸೂರು ಯುದ್ಧದಲ್ಲಿ ಹುಲಿ ಎಲ್ಲಿತ್ತು. ಕೋಟೆಯೊಳಗೆ ಸತ್ತು ಬಿದ್ದಿತ್ತು. ಯಾರೋ ನಾಲ್ಕು ಜನ ಟಿಪ್ಪು ಸುಲ್ತಾನ್ ನನ್ನು ಹುಲಿ ಅಂದಕಾರಣಕ್ಕೆ ಅವನು ಮೈಸೂರು ಹುಲಿ ಆಗಲ್ಲ ಎಂದರು.
ಇದನ್ನೂ ಓದಿ:ಮತ್ತೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ: 1,000 ರೂಪಾಯಿ ಗಡಿ ದಾಟಿದ ದರ
ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆದರೆ ದಲಿತರ ಸಾಲ ಮನ್ನ ಮಾಡುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಯಾವ ರಾಜ್ಯದಲ್ಲಿ ಅವರು ಮುಖ್ಯಮಂತ್ರಿಯಾಗುತ್ತಾರೆಂಬುದು ನನಗ ಗೊತ್ತಿಲ್ಲಾ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ದರು. ಡಾ.ಜಿ ಪರಮೇಶ್ವರ ಸಿಎಂ ಆಗುವುದನ್ನ ತಪ್ಪಿಸಿದ್ದೆ ಸಿದ್ದರಾಮಯ್ಯನವರು ದಲಿತರಿಗೆ ಕೊಟ್ಟ ಕೊಡುಗೆ. ಪರಮೇಶ್ವರ ಅಂಗಾಲಾಚಿದರೂ ಮಂತ್ರಿ ಸ್ಥಾನವನ್ನು ಕೊಡಲಿಲ್ಲಾ. ಕೋಲಾರದಲ್ಲಿ ಮುನಿಯಪ್ಪ ಹಾಗೂ ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯರನ್ನು ಸೋಲಿಸಿದ್ದೇ ಸಿದ್ದರಾಮಯ್ಯ ದಲಿತರಿಗೆ ಕೊಟ್ಟ ಕೊಡುಗೆ. ದಲಿತ ಸಮಾಜ ಪ್ರಜ್ಞಾವಂತ ಸಮಾಜ. ಸಿದ್ದರಾಮಯ್ಯನವರಿಗೆ ಮುಸ್ಲಿಂರಿಗೆ ಬಗ್ಗೆ ಮಾತ್ರ ವಿಶೇಷ ಕಾಳಜಿ ಇದೆ ಹೊರತು ದಲಿತ ಸಮಾಜದ ಮೇಲಲ್ಲಾ ಎಂದರು.
ಇಷ್ಟೊಂದು ಪ್ರೀತಿ ಯಾಕೆ?: ಪಠ್ಯ ಪುಸ್ತಕದಿಂದ ಭಗತ್ ಸಿಂಗ್, ನಾರಾಯಣಗುರು ಅವರ ಪಠ್ಯವನ್ನ ಕೈ ಬಿಟ್ಟಿಲ್ಲ. ಕಾಂಗ್ರೆಸ್ ವಿನಾಕಾರಣ ಈ ವಿಚಾರದಲ್ಲಿ ವಿವಾದ ಮಾಡುತ್ತಿದೆ. ಕಾಂಗ್ರೆಸ್ಗೆ ದಿಢೀರನೆ ಭಗತ್ ಸಿಂಗ್ ಮೇಲೆ ಯಾಕೆ ಇಷ್ಟೊಂದು ಪ್ರೀತಿ ಬಂತೆಂದು ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಭಗತ್ ಸಿಂಗ್ ಪಠ್ಯ ಮುಂದುವರೆದಿದೆ. ನಾರಾಯಣಗುರು ಅವರ ಪಠ್ಯ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆ ಎಂದರು.
ಆರ್ ಎಸ್ಎಸ್ ಸಂಸ್ಥಾಪಕ ಹೆಡಗೆವಾರ್ ಅವರ ಪಠ್ಯ ಯಾಕೆ ಇರಬಾರದು? ಅವರು ದೇಶ ಪ್ರೇಮದ ಬಗ್ಗೆ ಮಾಡಿದ ಭಾಷಣ ಮಕ್ಕಳಿಗೆ ಸ್ಪೂರ್ತಿಯಾಗಲು ಪಠ್ಯದಲ್ಲಿ ಅಳವಡಿಸಿದ್ದೇವೆ. ಅದರಲ್ಲಿ ತಪ್ಪೇನಿದೆ? ಚಕ್ರವರ್ತಿ ಸೂಲಿಬೆಲೆ ಒಬ್ಬ ಶ್ರೇಷ್ಠ ವಾಗ್ಮಿ. ಅವರು ರಚಿಸಿದ ಪಠ್ಯ ಮಕ್ಕಳಿಗೆ ದೇಶ ಭಕ್ತಿ ತುಂಬಲಿದೆ. ತಾಯಿ ಭಾರತೀಯ ಅಮರ ಪುತ್ರರು ಎಂಬ ಪಠ್ಯ ದೇಶ ಪ್ರೇಮ ಬೆಳಸಲಿದೆ. ಇದರಲ್ಲೂ ಕಾಂಗ್ರೆಸ್ನವ್ರು ತಪ್ಪು ಹುಡುಕುವುದು ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಬೋಲೋ ಭಾರತ್ ಮಾತಕೀ ಜೈ ಎನ್ನುವುದಕ್ಕೂ ಕಾಂಗ್ರೆಸ್ ಗೆ ಸಮಸ್ಯೆಯಿದೆ. ದೇಶಪ್ರೇಮದ ಪಾಠ ಬೋಧಿಸುವುದು ಕಾಂಗ್ರೆಸ್ ಸಮಸ್ಯೆಯಾಗಿದೆ. ಕಾಂಗ್ರೆಸ್ ಯಾವಾಗಲೂ ದೇಶ ವಿರೋಧಿಯಾಗಿಯೇ ವರ್ತಿಸುತ್ತಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.