ಕ್ರೂರಿ ಕೋವಿಡ್ : ಪತ್ನಿಯ ತಿಥಿ ದಿನಕ್ಕೆ ಪತಿ ಸಾವು ; ತಬ್ಬಲಿಯಾದ ಮಕ್ಕಳು
Team Udayavani, May 30, 2021, 12:04 PM IST
ಮೈಸೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಪತ್ನಿಯ ತಿಥಿಯ ದಿನದಂದೇ ಪತಿಯೂ ಕೋವಿಡ್ನಿಂದಾಗಿ ಸಾವನ್ನಪ್ಪಿದ ಕರುಣಾಜನಕ ಘಟನೆ ಮೈಸೂರಿನಲ್ಲಿ ನಡೆದಿದೆ.
ನಗರದ ಗಂಗೋತ್ರಿ ಲೇಔಟ್ನ ನಿವಾಸಿ, ಸರ್ಕಾರಿ ಪದವಿ ಕಾಲೇಜುವೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದ ಕೆ.ಸುಷ್ಮ(37) ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಪ್ರಸನ್ನ (44) ಕೋವಿಡ್ ನಿಂದ ಬಲಿಯಾಗಿದ್ದಾರೆ.
ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 14 ವರ್ಷದ ಪಿ.ಹರ್ಷ ಹಾಗೂ 12 ವರ್ಷದ ನಯನ ಭವಿಷ್ಯ ಕತ್ತಲ ಕೂಪದಲ್ಲಿ ಸಿಲುಕಿದೆ.
ಒಂದು ತಿಂಗಳ ಹಿಂದೆ ಪತಿಗೆ ಕೋವಿಡ್ ಸೋಂಕು ದೃಢವಾಗಿತ್ತು. ನಂತರ ಕೆಲ ದಿನದಲ್ಲಿ ಪತ್ನಿಯಲ್ಲಿಯೂ ಸೋಂಕು ಕಾಣಿಸಿಕೊಂಡಿತ್ತು. ದಂಪತಿ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಉಳಿದುಕೊಂಡಿದ್ದರೂ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಸುಷ್ಮಾ ಕೊಂಚ ಹಿಂದುಳಿದ್ದರು ಎನ್ನಲಾಗಿದೆ. ಈ ಪರಿಸ್ಥಿತಿ ಕೈಮೀರಿದ್ದರಿಂದ ಮೇ 16 ರಂದು ಸುಷ್ಮಾ ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಪತಿ ಪ್ರಸನ್ನ ಅವರನ್ನು ಸಹ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ : ವ್ಯಕ್ತಿಯ ಸಾವಿನ ರಹಸ್ಯ ಭೇಧಿಸಲು ಹೊರಟ ಪೊಲೀಸರಿಗೆ ಶಾಕ್: ಬಯಲಾಯ್ತು ಮಹಿಳೆಯ ಖತರ್ನಾಕ್ ಕೆಲಸ
ಶಾಲೆಗೆ ರಜೆ ಇದ್ದ ಕಾರಣ ಮಕ್ಕಳಿಬ್ಬರು ತಾತನೊಂದಿಗೆ ವಾಸಮಾಡಿಕೊಂಡಿದ್ದರು.
ಶುಕ್ರವಾರ ಸುಷ್ಮಾ ಅವರ ಹನ್ನೊಂದನೇ ದಿನದ ಕಾರ್ಯವನ್ನು ಮಾಡಲು ನಗರಕ್ಕೆ ಮಕ್ಕಳು ಆಗಮಿಸಿದ್ದರು. ಇತ್ತ ತಿಥಿ ಕಾರ್ಯ ನಡೆಯಬೇಕಾದರೆ ಅತ್ತ ತಂದೆ ಪ್ರಸನ್ನ ಕೋವಿಡ್ನಿಂದ ಸಾವನ್ನಪ್ಪಿರುವ ಸುದ್ದಿಗೊತ್ತಾಗಿದೆ. ಇತ್ತ ತಿಥಿ ಕಾರ್ಯವನ್ನೂ ಪೂರ್ಣಗೊಳಿಸದೇ ಅನಾಥವಾದ ಮಕ್ಕಳನ್ನು ತಾತ ಮತ್ತೆ ತನ್ನೂರಿಗೆ ಕರೆದುಕೊಂಡು ಹೋಗಿದ್ದಾರೆ. ಕುಟುಂಬದ ಆಧಾರವಾಗಿದ್ದವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯದಲ್ಲೂ ಮೌನ ಆವರಿಸಿದೆ.
ವಿಷಯ ಕೇಳಿ ನಮಗೂ ನೋವಾಯಿತು. ಸದ್ಯ ಲಾಕ್ಡೌನ್ ಸ್ಥಿತಿ ಕಡಿಮೆಾಂದ ಬಳಿಕ ಎಲ್ಲರೊಟ್ಟಿಗೂ ಚರ್ಚಿಸಿ ಮಕ್ಕಳ ಭವಿಷ್ಯಕ್ಕೆ ವಿಶ್ವವಿದ್ಯಾನಿಲುಂದಿಂದ ಆಗುವ ನೆರವನ್ನು ನೀಡಲಾಗುವುದು.– ಪ್ರೊ.ಜಿ.ಹೇಮಂತ್ಕುಮಾರ್, ಕುಲಪತಿ, ಮೈಸೂರು ವಿವಿ.