ಗಿರಿಜನರಿಗೆ ರಕ್ತಹೀನತೆ, ಅಪೌಷ್ಟಿಕತೆ, ಚರ್ಮರೋಗ
Team Udayavani, Aug 30, 2019, 3:00 AM IST
ಹುಣಸೂರು: ತಾಲೂಕಿನ ಶೆಟ್ಟಹಳ್ಳಿ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಮೈಸೂರು ವೈದ್ಯಕೀಯ ತಜ್ಞರ ಸಂಘವು ಜೆಎಸ್ಎಸ್ ಆಸ್ಪತ್ರೆ ಸಹಕಾರದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ 350ಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು.
ಶೆಟ್ಟಹಳ್ಳಿ ಕೇಂದ್ರದ ಸಮುದಾಯ ಭವನದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಹೆಚ್ಚು ಗಿರಿಜನರಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಇರುವುದು ಪತ್ತೆಯಾಗಿದೆ. ಅಲ್ಲದೇ 26 ಮಂದಿಗೆ ರಕ್ತದೊತ್ತಡ, 49 ಮಂದಿಗೆ ಮಧುಮೇಹ ಹಾಗೂ ಬಹುತೇಕ ಮಕ್ಕಳಿಗೆ ಚರ್ಮದ ಕಾಯಿಲೆ ಇರುವುದು ಕಂಡು ಬಂದಿದೆ. 14 ಮಂದಿಗೆ ಇಸಿಜಿ ಪರೀಕ್ಷೆ ನಡೆಸಲಾಯಿತು. ಇಬ್ಬರಲ್ಲಿ ಹೃದಯ ಕಾಯಿಲೆ ಪತ್ತೆಯಾಯಿತು.
ಶಿಬಿರದಲ್ಲಿ ಮಾತನಾಡಿದ ಮೈಸೂರು ವೈದ್ಯಕೀಯ ತಜ್ಞರ ಸಂಘದ ಅಧ್ಯಕ್ಷ ಡಾ.ಬಾನುಕುಮಾರ್, ಆದಿವಾಸಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಶಿಬಿರ ನಡೆಸಲಾಗುತ್ತಿದ್ದು, ಸಂಘದ ವತಿಯಿಂದಲೇ ಉಚಿತ ಔಷಧ ವಿತರಿಸಲಾಗಿದೆ ಎಂದರು.
ಶಿಬಿರದಲ್ಲಿ ಸಂಘದ ಕಾರ್ಯದರ್ಶಿ ಡಾ.ಅಶೋಕ್, ಸದಸ್ಯರಾದ ಡಾ.ಉದಯಕುಮಾರ್, ಡಾ.ಶಂಕರಪ್ಪ, ಡಾ.ಶಿವಸ್ವಾಮಿ, ಡಾ.ಅಯ್ಯಪ್ಪ, ಹುಣಸೂರಿನ ಡಾ.ವೃಷಬೇಂದ್ರಪ್ಪ, ಡಾ.ಮಹೇಶ್ಶೆಟ್ಟಿ, ಲೋಕೇಶ್, ವಿನೋದ್ಕುಮಾರ್, ಗಂಗೂ, ಪುನರ್ವಸತಿ ಕೇಂದ್ರದ ಅಧ್ಯಕ್ಷರಾದ ರಾಜಪ್ಪ, ಚಂದ್ರು, ಆಶ್ರಮ ಶಾಲೆ ಮುಖ್ಯ ಶಿಕ್ಷಕ ಶಿವಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿ ಶೋಭಾ, ಸಂಜು, ದೀಪು ಇತರರಿದ್ದರು.