ರಾಜ್ಯದಲ್ಲಿ ಏನೇನು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ : ವಿ. ಸೋಮಣ್ಣ
Team Udayavani, May 1, 2022, 5:22 PM IST
ಮೈಸೂರು : ನಾನು ಇಲಾಖೆಯಿಂದ ಎಷ್ಟು ಮನೆ ಕಟ್ಟಿಸಿದ್ದೇನೆ ಎಂಬುದನ್ನ ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯನವರಿಗೆ ತೋರಿಸಲು ನಾನು ಸಿದ್ಧ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ವಸತಿ ಇಲಾಖೆಯಿಂದ ಒಂದೇ ಒಂದು ಮನೆ ಆಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರು ಪದೇ ಪದೇ ಯಾಕೆ ಈ ಮಾತು ಹೇಳುತ್ತಿದ್ದಾರೆ ಅಂತಾ ಗೊತ್ತಿಲ್ಲ. ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ. ನಾನು ಎಷ್ಟು ಮನೆ ಕಟ್ಟಿದ್ದೇನೆ ಎಂಬುದನ್ನ ಇಡೀ ರಾಜ್ಯ ಸುತ್ತಿ ಸಿದ್ದರಾಮಯ್ಯನವರಿಗೆ ತೋರಿಸಲು ಸಿದ್ಧ. ನಾನು ಏನೇನು ಅಭಿವೃದ್ಧಿ ಮಾಡಿದ್ದೇನೆ ಎಂದು ಅವರಿಗೆ ತೋರಿಸುತ್ತೇನೆ ಎಂದು ಬಹಿರಂಗ ಆಹ್ವಾನ ನೀಡಿದರು.
ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ನಾವು ಬಹಳ ಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದುಕೊಂಡಿದ್ದೇವು. ಆದರೆ, ಅವರ ಮಾತುಗಳಿಂದ ಅವರು ಎಂತಾ ಅನುಭವಸ್ಥರು ಎಂಬುದು ಗೊತ್ತಾಗುತ್ತಿದೆ. ಬೊಮ್ಮಾಯಿಯವರ ನೇತೃತ್ವದ ಸರ್ಕಾರ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಾ, ಉತ್ತಮ ಆಡಳಿತ ನೀಡುತ್ತಿದೆ. ಎಲ್ಲಾ ಆರೋಪಗಳಿಗೂ ಕಾಲವೇ ಉತ್ತರ ನೀಡಲಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ರಾಕಿಯನ್ನು ಗೇಲಿ ಮಾಡಿದ ಐರಾ!: ಮುದ್ದು ಮಗಳ ವಿಡಿಯೋ ಹಂಚಿಕೊಂಡ ಯಶ್