ರಾಜಕೀಯ ಸ್ಥಾನಕ್ಕಾಗಿ ವೀರಶೈವ ಲಿಂಗಾಯತರು ಒಗ್ಗಟ್ಟಾಗಿ: ಮಹದೇವಸ್ವಾಮಿ
Team Udayavani, Aug 7, 2017, 1:36 PM IST
ಮೂಗೂರು: ಪ್ರಸ್ತುತ ವೀರಶೈವ ಲಿಂಗಾಯತರು ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ವಿದ್ಯೋದಯ ಶಿಕ್ಷಣ ಸಂಸ್ಥೆ ಗೌರವ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಹೇಳಿದರು.
ತಿ.ನರಸೀಪುರ ತಾಲೂಕು ಮೂಗೂರು ಗ್ರಾಮದಲ್ಲಿ ನಡೆದ ವೀರಶೈವ ಹಿತರಕ್ಷಣಾ ಸಮಿತಿ ಮೈಸೂರು ವಿಭಾಗದ ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸೂಯೆ, ಗುಂಪುಗಾರಿಕೆ, ನಿರ್ಲಕ್ಷ್ಯತೆಯಿಂದ ಸಮುದಾಯದಲ್ಲಿ ಒಡಕು ಮೂಡಿದೆ.
ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 12 ಲಕ್ಷ ಮತದಾರರನ್ನು ಹೊಂದಿರುವ ವೀರಶೈವ ಲಿಂಗಾಯತರು ತಮ್ಮ ರಾಜಕೀಯ ಸ್ಥಾನಮಾನಗಳಿಲ್ಲದೇ ಇತರೆ ಸಮುದಾಯದ ಜನರ ಮನೆ ಬಾಗಿಲು ಕಾಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಸ್ಥಾನಮಾನ ವಂಚಿತ: ಸಮುದಾಯದಲ್ಲಿ ಒಡಕು ಮಾಡಿ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಜೊತೆಗೆ ವೀರಶೈವಲಿಂಗಾಯತ ರಾಜಕೀಯ ಸ್ಥಾನಮಾನಗಳಿಂದ ವಂಚಿಸುವ ಹುನ್ನಾರ ಕಾಣದ ಕೈಗಳಿಂದ ನಡೆಯುತ್ತಿದೆ.
ಸಮುದಾಯದ ಜನರಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ ಮೀಸಲಾತಿ ಇದ್ದರೂ ಕೂಡ ಸ್ಥಾನಮಾನ ಸಿಗದಂತಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಯುವಕರು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಮನಸ್ಥಿತಿ ಹೊಂದುವ ಜೊತೆಗೆ ಸಮಾಜದಲ್ಲಿನ ಒಡಕನ್ನು ಸರಿಪಡಿಸಿಕೊಂಡು ರಾಜಕೀಯ ಸ್ಥಾನಮಾನ ಪಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಂಘಟಿತ ಹೋರಾಟ ನಡೆಸಿ: ತಿ.ನರಸೀಪುರ ಕ್ಷೇತ್ರ ಮೀಸಲು ವಿಧಾನಸಭಾ ಕ್ಷೇತ್ರವಾದ್ದರಿಂದ ಬಲಾಡ್ಯರು ರಾಜಕೀಯ ಸ್ಥಾನಮಾನಗಳನ್ನು ನಿರಂತರವಾಗಿ ಅನುಭವಿಸಿಕೊಂಡು ಬರುತ್ತಿದ್ದು, ಇತರೆ ವರ್ಗದವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕವಾಗಿ ಸ್ಥಾನಮಾನಗಳಿಲ್ಲದೇ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದರ ವಿರುದ್ದ ಇಂದಿನ ಯುವ ಸಮುದಾಯ ಸಂಘಟಿತವಾಗಿ ಹೋರಾಟ ನಡೆಸಬೇಕಿದೆ ಎಂದು ವೀರಶೈವ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಸಿ.ಪಿ.ತಮ್ಮಣ್ಣ ತಿಳಿಸಿದರು.
ಸಭೆಯಲ್ಲಿ ವಾಟಾಳು ಸಿದ್ದಲಿಂಗಶಿವಚಾರ್ಯಸ್ವಾಮೀಜಿ, ವೀರಶೈವ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸಿ.ಎಂ.ಪ್ರಕಾಶ್, ಮುಖಂಡರಾದ ಎಂ.ಬಿ.ಬಸವಣ್ಣ, ಸೀಹಳ್ಳಿ ಗುರುಮೂರ್ತಿ, ಕುರುಬೂರು ಭೃಂಗೇಶ್, ಕೆ.ಜಿ.ವಿರೇಶ್, ನಾಗರಾಜು, ಎಂ.ಚಂದ್ರಶೇಖರ್, ಹೆಳವರಹುಂಡಿ ಸಿದ್ದಪ್ಪ, ಚಿನ್ನಬುದ್ಧಿ, ಹ್ಯಾಕನೂರು ಉಮೇಶ್, ವಾಟಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮರಿನಂಜಪ್ಪ, ಬನ್ನಹಳ್ಳಿಹುಂಡಿ ಶಿವಕುಮಾರ್, ಮಮತಾ ಶಿವಪ್ರಸಾದ್, ಮಾದಪ್ಪ, ತೊಟ್ಟವಾಡಿ ಮಹದೇವಪ್ಪ, ಪ್ರಭುಸ್ವಾಮಿ, ಸುತ್ತೂರು ಚಿಕ್ಕಮಾದಪ್ಪ, ಚಂದ್ರಪ್ಪ, ಉಪನ್ಯಾಸಕ ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.