ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಗ್ರಾಮ ಪ್ರವೇಶ
Team Udayavani, May 3, 2021, 2:01 PM IST
ನಂಜನಗೂಡು: ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ಗ್ರಾಮಕ್ಕೆ ಬನ್ನಿ. ಇಲ್ಲದಿದ್ದರೆ ಆಶ್ರಯವೂ ಇಲ್ಲ, ಪ್ರವೇಶವೂ ಇಲ್ಲ, ಇದನ್ನು ಕಡ್ಡಾಯವಾಗಿ ಪಾಲಿಸಬೇಕು.-ಇದು ತಾಲೂಕಿನ ಕೊಣನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆರು ಗ್ರಾಮಗಳಲ್ಲಿ ಮುಖಂಡರು ಈನಿರ್ಣಯ ಕೈಗೊಂಡಿದ್ದು, ಆರೂ ಹಳ್ಳಿಗಳ ಬೀದಿ ಬೀದಿಗಳಲ್ಲಿ ಈ ಕುರಿತು ಟಾಂಟಾಂ ಹೊಡೆಸಲಾಗುತ್ತಿದೆ.
ನಾಲ್ಕು ದಿನದ ಹಿಂದೆ ಅತ್ತೆ ಮನೆಗೆ ಬಂದಿದ್ದ ಅಳಿಯ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಇದರಿಂದ ಗ್ರಾಮದ ಜನರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ಭಯಭೀತರಾಗಿದ್ದರು. ಹೀಗಾಗಿ ಕೊಣನೂರು ಗ್ರಾಪಂವ್ಯಾಪ್ತಿಯ ಗ್ರಾಮಸ್ಥರು ಹಾಗೂ ಯಜಮಾನರು ಸೇರಿ ಈ ನಿರ್ಬಂಧ ನಿರ್ಣಯ ಕೈಗೊಂಡಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯಲ್ಲಿ ಸದ್ಯ ಹೊರಗಿನವರಿಗೆ ಯಾರೂ ಆಶ್ರಯ ನೀಡಬಾರದು. ಗ್ರಾಮದವರೇ ಆಗಿದ್ದೂ ಪರ ಊರಿನಲ್ಲಿದ್ದವರು ಕೂಡ ಗ್ರಾಮಪ್ರವೇಶಿಸುವಾಗ ಕೊರೊನಾ ನೆಗೆಟಿವ್ ವರದಿ ಪಡೆದುಕೊಂಡು ಅದನ್ನು ತೋರಿಸಿ ಗ್ರಾಮಕ್ಕೆ ಬರಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಎಷ್ಟೇ ಪ್ರಭಾವಿಯಾ ಗಿದ್ದರೂ ಪ್ರವೇಶ ನಿಷಿದ್ಧ. ಈ ಕುರಿತು ಗ್ರಾಪಂ ವ್ಯಾಪ್ತಿಗೆ ಒಳಪಡುವ ಹನುಮನಪುರ, ಮರಳ್ಳಿ, ಪಿಮರಳ್ಳಿ, ಪಾಳ್ಯ, ಕೋಣನೂರು ಪಾಳ್ಯ, ಕೊಣನೂರು ಗ್ರಾಮ ಗಳಲ್ಲಿಟಾಂ ಟಾಂ ಹೊಡೆಸಲಾಗಿದೆ.