ನೀರು ಹರಿಸದ್ದಕ್ಕೆ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು
Team Udayavani, Apr 19, 2019, 5:03 PM IST
ಚಾಮರಾಜನಗರ: ಸುವರ್ಣಾವತಿ ಜಲಾಶಯ ದಿಂದ ಆಲೂರು ಗ್ರಾಮ ವ್ಯಾಪ್ತಿಯ ಹಳೆ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಹರಿಸದ ಕಾರಣ ಮತದಾನ ಮಾಡುವುದಿಲ್ಲವೆಂದು ನೂರಾರು ಮತದಾರರು ಮತದಾನದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ಮತಗಟ್ಟೆ ಸಂಖ್ಯೆ 113ರಲ್ಲಿ ಸುಮಾರು 1050 ಮತದಾರರಿದ್ದು ಇವರಲ್ಲಿ ಸುಮಾರು 800ಕ್ಕೂ ಹೆಚ್ಚು ಮತದಾರರು ಮತದಾನದಿಂದ ದೂರ ಉಳಿದು ಹಳೆ ಅಚ್ಚುಕಟ್ಟುದಾರರ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಸುವರ್ಣಾವತಿ ಜಲಾಶಯದಲ್ಲಿ 20, 30 ಅಡಿ ನೀರು ಸಂಗ್ರಹವಾಗಿರುವ ಸಂದರ್ಭದಲ್ಲೂ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಬೆಳೆಗಳಿಗೆ ನೀರು ಹರಿಸಲಾಗುತ್ತಿತ್ತು. ಈಗ ಸುವರ್ಣಾವತಿ ಜಲಾಶಯದಲ್ಲಿ 30 ರಿಂದ 48 ಅಡಿಯಷ್ಟು ನೀರಿದೆ. ನೀರಿನ ಅಭಾವದಿಂದ ಆಲೂರು ಭಾಗದಲ್ಲಿ ತೆಂಗಿನ
ತೋಟ, ಅಡಿಕೆಮರ, ಮಾವು, ಹಲಸು ಬಹು ವಾರ್ಷಿಕ ಬೆಳೆಗಳು ಒಣಗುತ್ತಿವೆ. ರೈತರು ಸಂಕಷ್ಟ ದಲ್ಲಿದ್ದಾರೆ. ಈ ಭಾಗಕ್ಕೆ ನೀರು ಹರಿಸುವಂತೆ ಜಿಲ್ಲಾಧಿಕಾರಿ, ಸುವರ್ಣಾವತಿ ನೀರಾವರಿ ಅಧಿಕಾರಿ ಗಳಿಗೆ ಅನೇಕ ಸಲ ಮನವಿ ಮಾಡಲಾಗಿದೆ, ಅಲ್ಲದೆ ಸುವರ್ಣಾವತಿ ಅಧಿಕಾರಿಗಳು ಅಚ್ಚುಕಟ್ಟುದಾರರ ಸಭೆಯಲ್ಲಿ ಭಾಗವಹಿಸಿ ನೀರು ಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ ಹೊರತು ಯಾವುದೋ
ಪ್ರಯೋಜನವಾಗಿಲ್ಲ ಸಮಿತಿ ಸದಸ್ಯರು ದೂರಿದರು. ನೀರಿಗಾಗಿ ಹೋರಾಟ ಮಾಡತ್ತಿದ್ದೇವೆ.
ಇದೊಂದು ಬದುಕಿನ ಹೋರಾಟವಾಗಿದೆ. ಕೂಡಲೇ ನೀರು ಹರಿಸದೇ ಹೋದರೆ ಈ ಭಾಗದ ರೈತರು ಗುಳೆ ಹೋಗಬೇಕಾಗುತ್ತದೆ.. ಕಳೆದ ದಿನಗಳಿಂದೆ ನೀರು ಹರಿಸುವುದಾಗಿ ನೀರಾವರಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮೊನ್ನೆ ನಡೆದ ಸಭೆಯಲ್ಲಿ ನೀರು ಬಿಡುವಂತೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ನೀರು ಹರಿಸುವ ತನಕ ಮತದಾನ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.
ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ: ವಿಷಯ ತಿಳಿದು ಮಾಜಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ.ಗುರುಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರೋ|. ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿ,ಪಂ, ಸದಸ್ಯ ಬಾಲರಾಜು ಮುಖಂಡ ನಿಜಗುಣರಾಜು ಭೇಟಿ ನೀಡಿ ಮತದಾನ ಮಾಡುವಂತೆ ಮನ ವೊಲಿಸಲು ಯತ್ನಿಸಿದರು.
ಮತದಾರರ ಬಿಗಿ ಪಟ್ಟು: ಅಲ್ಲದೇ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ, ಮುಂದಿನ ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ನಿಮ್ಮ ಹಕ್ಕಾದ ಮತದಾನ ಮಾಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಸಡಿಲಿಸಲಿಲ್ಲ. ಮತದಾನದಿಂದ ದೂರ ಉಳಿದರು.