ನೋಡ ಬನ್ನಿ ಮೈಸೂರ ದಸರೆಯ ಸಂಭ್ರಮ!
Team Udayavani, Oct 10, 2018, 6:00 AM IST
ಇನ್ನು 10 ದಿನ ಇಡೀ ಮೈಸೂರಿಗೆ ಮೈಸೂರೇ ಸಂಭ್ರಮದೂರು! ನಾಡಹಬ್ಬ ದಸರೆಗೆ ಬುಧವಾರ ಚಾಲನೆ ಸಿಗಲಿದ್ದು ಅ.19ರ ವರೆಗೂ ಒಂದಿಲ್ಲೊಂದು ಕಾರ್ಯಕ್ರಮಗಳ ಸಿರಿದೌತಣ ಸಿಗಲಿದೆ.
ಸುಧಾಮೂರ್ತಿ ಚಾಲನೆ
ಬುಧವಾರ ಬೆಳಗ್ಗೆ 7.05ರಿಂದ 7.30ಕ್ಕೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಯವರಿಂದ ಚಾಲನೆ.
ಖಾಸಗಿ ದರ್ಬಾರ್
ಬೆಳಗ್ಗೆ 10 ಗಂಟೆಗೆ ದರ್ಬಾರ್ ಹಾಲ್ನಲ್ಲಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಪ್ರತಿದಿನವೂ ಬೆಳಗ್ಗೆ 10 ಮತ್ತು ಸಂಜೆ 7 ಗಂಟೆಗೆ 20 ನಿಮಿಷಗಳ ವರೆಗೆ ಖಾಸಗಿ ದರ್ಬಾರ್ ನಡೆಯಲಿದೆ.
ಜಂಬೂಸವಾರಿ
ಅ.19ರಂದು ಮಧ್ಯಾಹ್ನ 2.30ರಿಂದ 3.16ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆ ಆರಂಭ. ಸಿಎಂರಿಂದ ನಂದಿಧ್ವಜಕ್ಕೆ
ಪೂಜೆ. ಅಂದು ಸಂಜೆ ಬನ್ನಿಮಂಟಪ ಮೈದಾನದಲ್ಲಿ ರಾಜ್ಯಪಾಲರಿಂದ ಪಂಜಿನ ಕವಾಯತಿಗೆ ಚಾಲನೆ
ಓಪನ್ ಸ್ಟ್ರೀಟ್ ಫೆಸ್ಟಿವಲ್
ಅ.13 ರಂದು ಕೃಷ್ಣರಾಜ ಬುಲ್ ವಾರ್ಡ್ ರಸ್ತೆಯಲ್ಲಿ ಬೆಳಗ್ಗೆ 6 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಡೆಯಲಿದೆ. ಯುವಕರು ಮತ್ತು ಮಕ್ಕಳಿಗೆ ಪ್ರಿಯವಾದ ಹಬ್ಬವಿದು.
ವಿದ್ವಾನ್ ಪ್ರಶಸ್ತಿ ಪ್ರದಾನ
ಬುಧವಾರ ಸಂಜೆ 6 ಗಂಟೆಗೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಿಎಂ ಕುಮಾರಸ್ವಾಮಿಯವರಿಂದ ದಸರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ. ಜತೆಗೆ ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ರಿಗೆ 2018ರ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ.
ಮಿನಿ ಜಂಬೂಸವಾರಿ
ಇದೇ ಮೊದಲ ಬಾರಿಗೆ ಅ.14 ರಂದು ಸಾಂಸ್ಕೃತಿಕ ಮೆರವಣಿಗೆ ನಡೆಸಲು ಯೋಜಿಸಲಾಗಿದೆ. ಅರಮನೆ ಆವರಣದಿಂದ ಆರಂಭವಾಗಿ, ಬನ್ನಿಮಂಟಪದಲ್ಲಿ ಮುಗಿಯಲಿದೆ. ವಿವಿಧ ಕಾಲೇಜುಗಳ 1000 ವಿದ್ಯಾರ್ಥಿಗಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆಯಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳೂ ಭಾಗಿಯಾಗಲಿವೆ. ಆದರೆ, ಅಂಬಾರಿ ಇರಲ್ಲ.