ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ?: ಪ್ರತಾಪ್ ಸಿಂಹ
Team Udayavani, Sep 17, 2021, 11:40 AM IST
ಮೈಸೂರು: ಸಿದ್ದರಾಮಯ್ಯನವರಿಗೆ ಈಗ ಯಾಕೆ ದೇಗುಲದ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ. ಈ ಪ್ರೀತಿ ಲಿಂಗಾಯತರನ್ನ ಒಡೆದು ರಾಜಕಾರಣ ಮಾಡುವಾಗ ಇರಲಿಲ್ಲವೇ? ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ ನಿಮಗೆ ದೇವಸ್ಥಾನಗಳ ಕೆಡವುವ ಬಗ್ಗೆ ಕೋರ್ಟ್ ಆದೇಶ ಗೊತ್ತಾಗಲಿಲ್ವ ಸಿದ್ದರಾಮಯ್ಯಮವರೇ ಎಂದು ಸಂಸದ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆಡಳಿತದಲ್ಲಿ ಕೋರ್ಟ್ಗೆ ವರದಿ ಕೊಡಬೇಕಿತ್ತು. ಎಂಟು ವಾರದಲ್ಲಿ ವರದಿ ನೀಡಲು ಕೋರ್ಟ್ ಗಡುವು ನೀಡಿತ್ತು. 2018 ಫೆ. 6 ರಂದು ದೇವಸ್ಥಾನ ತೆರವು ವಿಚಾರದಲ್ಲಿ ಅಂತಿಮ ಆದೇಶ ಕೊಟ್ಟಿದೆ. ಈ ಆದೇಶವನ್ನು ನಿಮಗೂ ಐಎಎಸ್ ಅಧಿಕಾರಿಗಳು ಸರಿಯಾಗಿ ವಿವರಿಸಿಲ್ಲ. ಆಗ ಬಿಜೆಪಿ ಸರಕಾರ ಇತ್ತು, ಅವತ್ತು ಅಧಿಕಾರಿಗಳು ತಪ್ಪು ಮಾಡಿದರು. ಬಿಜೆಪಿ ಆಡಳಿತದಲ್ಲೂ ಆ ತಪ್ಪು ನಡೆಯಿತು. ನಿಮ್ಮ ಅಧಿಕಾರದಲ್ಲೂ ಆ ತಪ್ಪು ಮುಂದುವರಿಯಿತು. ಆಡಳಿತಾತ್ಮಕ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಸರಕಾರಕ್ಕೆ ಸರಿಯಾದ ವಿವರಣೆ ನೀಡುತ್ತಿಲ್ಲ. ರಾಜಕಾರಣಿಗಳು ಅಧಿಕಾರಿಗಳು ಮಾಡುವ ತಪ್ಪನ್ನು ತಮ್ಮ ಮೇಲೆ ಎಳೆದುಕೊಳ್ಳಬೇಡಿ ಎಂದರು.
ಇದನ್ನೂ ಓದಿ:ನಾನು ಎಲ್ಲಿ ಚುನಾವಣೆ ಎದುರಿಸಬೇಕು ಎನ್ನುವುದನ್ನು ಹಿರಿಯರು ನಿರ್ಧರಿಸುತ್ತಾರೆ: ವಿಜಯೇಂದ್ರ
ಸಿದ್ದರಾಮಯ್ಯನವರೇ ನೀವು ದೇವಸ್ಥಾನ ಉಳಿಸಿಕೊಳ್ಳಲು ಯಾವ ಪ್ರಯತ್ನ ವನ್ನು ನಿಮ್ಮ ಆಡಳಿತದಲ್ಲಿ ಮಾಡಲಿಲ್ಲ. ನಿಮಗೆ ದೇವಸ್ಥಾನ ಬಗ್ಗೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಮಾಡುತ್ತಿರಲಿಲ್ಲ. ವೋಟಿಗಾಗಿ ವೀರಶೈವ – ಲಿಂಗಾಯತ ಜಾತಿ ಒಡೆಯುತ್ತಿರಲಿಲ್ಲ. ಅಧಿಕಾರಿಗಳು ಮಾಡುವ ಲೋಪಕ್ಕೆ ಜನಪ್ರತಿನಿಧಿಗಳು ಹೊಡೆದಾಡುವುದು ಬೇಡ ಎಂದರು.