ಉತ್ಸಾಹದಿಂದ ಚಾಮುಂಡಿ ಬೆಟ್ಟ ಏರಿದ ನಾರಿಮಣಿಯರು
Team Udayavani, Jun 3, 2019, 3:00 AM IST
ಮೈಸೂರು: ನಗರದ ಚಾಮುಂಡಿ ಬೆಟ್ಟವ ಏರುವ ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಭಾಗವಹಸಿ, ಲಗುಬಗೆಯಿಂದ ಬೆಟ್ಟ ಹತ್ತಿದರು.
ತಿಪ್ಪವ್ವ ಸಣ್ಣಕ್ಕಿ ಪ್ರಥಮ: ಅಭ್ಯುದಯ ಮಹಿಳಾ ಸಮಾಜದ ಬೆಳ್ಳಿ ಹಬ್ಬದ ಪ್ರಯುಕ್ತ ಭಾನುವಾರ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಚಾಮುಂಡಿ ಬೆಟ್ಟದ ಪಾದದಿಂದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ 13 ನಿಮಿಷದಲ್ಲಿ ಚಾಮುಂಡಿ ಬೆಟ್ಟ ಹತ್ತಿದ ತಿಪ್ಪವ್ವ ಸಣ್ಣಕ್ಕಿ 20-30 ವರ್ಷದ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಅರ್ಚನಾ -ದ್ವಿತೀಯ, ವಿದ್ಯಾ -ತೃತೀಯ ಸ್ಥಾನ ಪಡೆದುಕೊಂಡರು. ರನಿತಾ ಮತ್ತು ತೇಜಸ್ವಿನಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದುಕೊಂಡರು.
ಸೌಮ್ಯಾ ಪ್ರಥಮ: 30-40 ವರ್ಷದ ವಿಭಾಗದಲ್ಲಿ 17 ನಿಮಿಷಕ್ಕೆ ಬೆಟ್ಟದ ಹತ್ತಿದ ಸೌಮ್ಯಾ ಪ್ರಥಮ ಸ್ಥಾನ ಪಡೆದರೆ, ಆಶಾ ನಾಗಾರಾಜು- ದ್ವಿತೀಯ, ಪ್ರತಿಮಾ ತೃತೀಯಾ, ದೀಪಿಕಾ 4ನೇ ಸ್ಥಾನ ಪಡೆದುಕೊಂಡರು.
ಪ್ರಥಮ ಬಹುಮಾನಕ್ಕೆ 3 ಸಾವಿರ ನಗದು, 2ನೇ ಸ್ಥಾನಕ್ಕೆ 2 ಸಾವಿರ, 3ನೇ ಸ್ಥಾನಕ್ಕೆ 1 ಸಾವಿರ, 4-5ನೇ ಸ್ಥಾನಕ್ಕೆ ತಲಾ 500 ರೂ. ಬಹುಮಾನವಾಗಿ ನೀಡಲಾಯಿತು.
ಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯುದಯ ಮಹಿಳಾ ಸಮಾಜ ಮಹಿಳೆಯರಾದ ಮಂಜುಳಾ -ಪ್ರಥಮ, ಲತಾ ಜಗದೀಶ್-ದ್ವಿತೀಯ, ಪುಷ್ಪಲತಾ-ತೃತೀಯ ಸ್ಥಾನ ಪಡೆದುಕೊಂಡರು.
ಬಹುಮಾನ ವಿತರಣೆ: ಎರಡು ಸಾವಿರ, ಒಂದು ಸಾವಿರ, ಐನೂರು ರೂ.ಗಳನ್ನು ಕ್ರಮವಾಗಿ ವಿಜೇತರಿಗೆ ಶಾಸಕ ಎಸ್.ಎ.ರಾಮದಾಸ್ ಅವರ ಆಸರೆ ಫೌಂಡೇಶನ್ನಿಂದ ವಿತರಿಸಲಾಯಿತು. ಸ್ಪರ್ಧೆಯಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು ಉತ್ಸಾಹದಿಂದ ಬೆಟ್ಟ ಹತ್ತಿಳಿದರು.
ಸಾಮಾಜಿಕ ಕಾರ್ಯ: ಇದಕ್ಕೂ ಮುನ್ನ ಬೆಟ್ಟ ಹತ್ತುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಜೆ.ಪಿ.ನಗರದ ಮಹಿಳಾ ಸಂಘ ಹಲವು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದೆ. ಬೆಳ್ಳಿ ಹಬ್ಬ ಆಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ. ಈ ನಿಟ್ಟಿನಲ್ಲಿ ಇನ್ನುಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಶುಭ ಹಾರೈಸಿದರು.
ಅಭ್ಯುದಯ ಮಹಿಳಾ ಸಮಾಜದ ಅಧ್ಯಕ್ಷೆ ಸುಶೀಲ್ ನಾಗರಾಜು, ಕಾರ್ಯದರ್ಶಿ ಶೈಲಜಾ, ಗೌರವಾಧ್ಯಕ್ಷೆ ಲೋಕೇಶ್ವರಿ ಬಳ್ಳಯ್ಯ ಮತ್ತಿತರರಿದ್ದರು.