ಕೃಷ್ಣಾ ನದಿಗೆ 1.63 ಲಕ್ಷ ಕ್ಯೂಸೆಕ್ ನೀರು
ಆಲಮಟ್ಟಿ ಜಲಾಶಯದಿಂದ ಬಸವಸಾಗರಕ್ಕೆ ಭಾರೀ ಪ್ರಮಾಣದಲ್ಲಿ ನೀರು •20 ಕ್ರಸ್ಟ್ಗೇಟ್ಗಳಿಂದ ನದಿಗೆ ನೀರು ಬಿಡುಗಡೆ
Team Udayavani, Jul 31, 2019, 11:05 AM IST
ಲಿಂಗಸುಗೂರು: ಬಸವಸಾಗರ ಜಲಾಶಯದ 20 ಗೇಟ್ಗಳ ಮುಖಾಂತರ 1.63 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದ್ದು, ಜಲಾಶಯದಿಂದ ನೀರು ಧುಮ್ಮಿಕ್ಕುತ್ತಿರುವ ನಯನ ಮನೋಹರ ದೃಶ್ಯ.
ನಾರಾಯಣಪುರ: ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ನಿರಂತರ ಒಳ ಹರಿವು ಬರುತ್ತಿರುವುದರಿಂದ ಮಂಗಳವಾರ ಬೆಳಗ್ಗೆ ಬಸವಸಾಗರ ಜಲಾಶಯದ 20 ಕ್ರಸ್ಟ್ಗೇಟ್ ತೆರೆದು 1 ಲಕ್ಷ 63 ಸಾವಿರ ಕ್ಯೂಸೆಕ್ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಯಿತು.
ದಿನದಿಂದ ದಿನಕ್ಕೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗುವ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಅಣೆಕಟ್ಟು ಅಧಿಕಾರಿಗಳು ಸೋಮವಾರ 1 ಲಕ್ಷ ಕ್ಯೂಸೆಕ್ನಷ್ಟು ನೀರನ್ನು ಹೊರಬಿಡಲು 17 ಗೇಟ್ಗಳನ್ನು ತೆರೆದಿದ್ದರು, ಅದು ಸೋಮವಾರ ರಾತ್ರಿ ಅಷ್ಟೋತ್ತಿಗೆ 1 ಲಕ್ಷ 30 ಸಾವಿರಕ್ಕೆ ಏರಿಕೆಯಾದಾಗ ಗೇಟ್ಗಳ ಸಂಖ್ಯೆ ಹೆಚ್ಚಿಸಲಾಯಿತು. ಮಂಗಳವಾರ ಬೆಳಗ್ಗೆ ಒಳಹರಿವು ಏಕಾಏಕಿ 1 ಲಕ್ಷ 63 ಸಾವಿರಕ್ಕೆ ತಲುಪಿದ್ದರಿಂದ ಜಲಾಶಯದ 30 ಕ್ರಸ್ಟ್ ಗೇಟ್ಗಳ ಪೈಕಿ 20 ಗೇಟ್ಗಳನ್ನು ತೆರೆದು 1 ಲಕ್ಷ 63 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೃಷ್ಣಾ ನದಿ ತೀರದ ಘಟ್ಟಪ್ರದೇಶದ ನಗರ ಪಟ್ಟಣಗಳಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹೀಗಾಗಿ ಆಲಮಟ್ಟಿ ಜಲಾಶಯಕ್ಕೆ ಗರಿಷ್ಠ ಪ್ರಮಾಣದ ಒಳಹರಿವು ಇದ್ದು, ಮುಂದಿನ ಅವಧಿಗೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಇದೆ. ಪ್ರಸ್ತುತ ಜಲಾಶಯ ಗರಿಷ್ಠ ಮಟ್ಟದಲ್ಲಿ 491.43 ಮೀಟರ್ಗೆ ನೀರು ಬಂದು ತಲುಪಿದ್ದು, 29.62 ಟಿಎಂಸಿ ಅಡಿ ನೀರು ಸಂಗ್ರಹವಿದೆ ಎಂದು ತಿಳಿಸಿದ್ದಾರೆ.