ಜಾನಪದ ಬದುಕಿನ ಭಾಗ: ಗೋಡ್ರಿ
ಜಾನಪದ ಉಳಿದರೆ ಮಾತ್ರ ದೇಶದ ಸಂಸ್ಕೃತಿ ಉಳಿಯಲು ಸಾಧ್ಯ
Team Udayavani, Apr 21, 2019, 5:01 PM IST
ನಾರಾಯಣಪುರ: ಕೊಡೇಕಲ್ ಪಟ್ಟಣದ ಶ್ರೀ ಬಸವ ಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಮಕ್ಕಳ ಜಾನಪದ ಹಬ್ಬಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ನಾರಾಯಣಪುರ: ನಾಗರಿಕತೆ ಬೆಳೆದಂತೆಲ್ಲ ಗ್ರಾಮೀಣ ಪ್ರದೇಶಗಳ ಸಂಸ್ಕೃತಿ ಮತ್ತು ಜನಪದ ಕಲೆ ಮರೆಯಾಗುತ್ತಿದ್ದು, ಮಕ್ಕಳಿಗೆ ಜನಪದ ಕಲೆ ಹಾಗೂ ಹಿಂದಿನ ನಮ್ಮ ಸಂಪ್ರದಾಯದ ಬಗ್ಗೆ ತಿಳಿವಳಿಕೆ ಮೂಡಿಸುವ ಮಕ್ಕಳ ಜನಪದ ಹಬ್ಬ ಕಾರ್ಯಕ್ರಮ ಅರ್ಥಪೂರ್ಣ ವೇದಿಕೆಯಾಗಿದೆ ಎಂದು ಕೊಡೇಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸಣ್ಣ ಗೋಡ್ರಿ ಹೇಳಿದರು.
ಕೊಡೇಕಲ್ ಪಟ್ಟಣದ ಶ್ರೀ ಬಸವ ಜ್ಯೋತಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಧಾರವಾಡದ ಬಾಲ ವಿಕಾಸ ಅಕಾಡೆಮಿ ಮತ್ತು ರಂಗಂಪೇಟ ಜಾನಪದ ಕಲಾಲೋಕ ಸಂಯುಕ್ತಾಶ್ರಯದಲ್ಲಿ ನಡೆದ ಮಕ್ಕಳ
ಜಾನಪದ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾನಪದ ಎನ್ನುವುದು ನಮ್ಮ ಬದುಕಿನ ಒಂದು ಭಾಗವಾಗಿದೆ. ಇದು ನಮ್ಮ ಪೂರ್ವಿಕರಿಂದ ಬಂದ ಬಳುವಳಿಯಾಗಿದೆ. ಜಾನಪದದಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡು ಇದೆ. ಜಾನಪದ ಉಳಿದರೆ ದೇಶದ ಸಂಸ್ಕೃತಿ
ಉಳಿಯಲು ಸಾಧ್ಯ. ಹೀಗಾಗಿ ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಕಳೆದ ಹಲವು
ವರ್ಷಗಳಿಂದ ಬಾಲ ವಿಕಾಸ ಅಕಾಡೆಮಿ ಜಾನಪದ ಸಾಹಿತ್ಯ, ಕಲೆ ಉಳಿಸುವತ್ತ ವಿಶೇಷ ಗಮನ ಹರಿಸಿರುವುದು ಶ್ಲಾಘನೀಯ ಕಾರ್ಯ ಕೆಲಸ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡಮಿ ಸದಸ್ಯರಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಪೋಷಕರು ಮಕ್ಕಳಿಗೆ ಪಾಠದ ಜತೆಗೆ ನೃತ್ಯ ,ಜಾನಪದ ಸಾಹಿತ್ಯ ಮತ್ತು ನಮ್ಮ ಸಾಂಸ್ಕೃತಿಕ ಕಲೆ ಮೈಗೂಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಹಿರಿಯ ಸಾಹಿತಿ ವೀರೇಶ ಹಳ್ಳೂರ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಜಾನಪದ ಸೊಗಡು ಬಿಂಬಿಸುವ ವಿವಿಧ ಹಾಡುಗಳು, ಏಕಪಾತ್ರ ಅಭಿನಯದಂತಹ ಕಲೆ ಪ್ರದರ್ಶಿಸಿ ಗಮನ ಸೆಳೆದರು.
ಅಮರಲಿಂಗೇಶ್ವರ ಸಂಗೀತ ಪಾಠಶಾಲೆ ಮತ್ತು ಸೋಮನಾಥ ಸಂಗೀತ ಪಾಠಶಾಲೆ ಮಕ್ಕಳು ಪ್ರಾರ್ಥನೆ ನಡೆಸಿಕೊಟ್ಟರು. ಕೋರಿಸಂಗಯ್ಯ ಗಡ್ಡದ, ಕೋಟ್ರೇಶ ಕೋಳೂರ, ಚಂದ್ರಶೇಖರ ಹೊಕ್ರಾಣಿ,
ಸಂಗಣ್ಣ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಸೀತಾರಾಮ ನಾಯ್ಕ, ಸಂಗೀತ ಕಲಾವಿದರಾದ ಆಮಯ್ಯ ಮಠ, ಈಶ್ವರ ಬಡಿಗೇರ, ಬಸಣ್ಣ ಗುರಿಕಾರ ಇದ್ದರು. ಸಂಗನಗೌಡ ಧನರೆಡ್ಡಿ ಸ್ವಾಗತಿಸಿದರು.
ಬಸವರಾಜ ಭದ್ರಗೋಳ ನಿರೂಪಿಸಿದರು. ಮಲ್ಲಯ್ಯಸ್ವಾಮಿ ಇಟಗಿ ವಂದಿಸಿದರು