ಸಂಭ್ರಮದ ತಿಂಥಣಿ ಮೌನೇಶ್ವರ ಜಾತ್ರೆ
ಗಮನ ಸೆಳೆದ ಪುರವಂತರ ಸೇವೆ
Team Udayavani, May 20, 2019, 4:52 PM IST
ನಾರಾಯಣಪುರ: ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿಯ ಮೆರವಣಿಗೆಯಲ್ಲಿ ವೀರಾವೇಶದ ಪುರವಂತರ ಸೇವೆ ಪ್ರದರ್ಶನ ನಡೆಯಿತು.
ನಾರಾಯಣಪುರ: ಜಗದ್ಗುರು ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯೂ ಪುರವಂತರ ಸೇವೆಯೊಂದಿಗೆ, ಮಂಗಲ ವಾದ್ಯ ಮೇಳಗಳೊಟ್ಟಿಗೆ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.
ಪಲ್ಲಕ್ಕಿ ಉತ್ಸವ ಮುನ್ನಾ ದಿನವಾದ ಶುಕ್ರವಾರ ಗುಹಾದೇವಾಲಯದಲ್ಲಿರುವ ದೇವರ ಉತ್ಸವ ಮೂರ್ತಿಗಳನ್ನು ಹಾಗೂ ಪೂಜಾ ಸಾಮಗ್ರಿಗಳನ್ನು ಹೊರ ತೆಗೆದು ಸಕಲ ವಾದ್ಯ ಮೇಳಗಳೊಂದಿಗೆ ಕೃಷ್ಣಾ ನದಿ ತೀರಕ್ಕೆ ತೆರಳಿ ಗಂಗಾ ಪೂಜೆಯನ್ನು ನೆರವೇರಿಸಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅಹೋರಾತ್ರಿ ಭಜನೆ ನಡೆಸಲಾಯಿತು.
ವಿಶೇಷ ಜೋಡು ಪಲ್ಲಕ್ಕಿ ಉತ್ಸವ: ಶನಿವಾರ ಬೆಳಗ್ಗೆ ಶ್ರೀ ಮೌನೇಶ್ವರರ ಹಾಗೂ ವೀರಭದ್ರದೇವರ ಉತ್ಸವ ಮೂರ್ತಿ ಹಾಗೂ ಪೂಜಾ ಸಾಮಗ್ರಿಗಳನ್ನು ಹೊತ್ತ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ದೇವಸ್ಥಾನದಿಂದ ಚಾಲನೆ ದೊರೆಯಿತು.
ಮೆರವಣಿಗೆಯೂ ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತ ಮಾರ್ಗದಿಂದ ಬಂಡೆಗುಡ್ಡ ಕ್ಯಾಂಪ್, ಕೆಬಿಜೆಎನ್ನೆಲ್ ವಸತಿ ಗೃಹದ ಮಾರ್ಗವಾಗಿ ಆಗಮಿಸಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತಲುಪಿತು. ರಾತ್ರಿಯೇ ದೇವರುಗಳ ಪೂಜಾ ಸಾಮಗ್ರಿಗಳನ್ನು ಗುಹಾದೇವಾಲಯದಲ್ಲಿ ಪುನಃ ಪ್ರವೇಶವಾಗುವ ಮೂಲಕ ಜಾತ್ರೆಯೂ ಮಂಗಲೋತ್ಸವಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ದೇವತೆ ದುರ್ಗಾ ದೇವಿಗೆ ಉಡಿ ತುಂಬುವ ಶಾಸ್ತ್ರ ನೆರವೇರಿಸಲಾಯಿತು.
ಗ್ರಾಮದ ಮಹಿಳೆಯರು ಇಷ್ಟ ದೇವರಾದ ತಿಂಥಣಿ ಮೌನೇಶ್ವರ ಹಾಗೂ ಶ್ರೀ ವೀರಭದ್ರ ದೇವರುಗಳ ದರ್ಶನ ಪಡೆದು ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ದೈವ ಮಂಡಳಿಯಿಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಭಕ್ತಿ ಭಾವದಿ, ವೀರಾವೇಶದಿಂದ ಪುರವಂತರ ಸೇವೆಯ ಪ್ರದರ್ಶನ ನೋಡುಗರ ಮಂತ್ರ ಮುಗ್ದರನ್ನಾಗಿಸಿತು. ಮೆರವಣಿಗೆಯಲ್ಲಿ ಯುವಕರು ತಿಂಥಣಿ ಮೌನೇಶ್ವರ ಮಹಾರಾಜಕೀ, ಶ್ರೀ ವೀರಭದ್ರದೇವರ ಹೆಸರಲ್ಲಿ ಜಯಘೋಷಗಳನ್ನು ಕೂಗಿದರು.