ಆಮೆವೇಗದಲ್ಲಿ ಸಾಗಿದೆ ಸೇತುವೆ ಕಾಮಗಾರಿ
ಹಳ್ಳ ಬಂದರೆ ವಾಹನ ಸವಾರರ ಗೋಳಾಟ
Team Udayavani, Sep 19, 2019, 3:23 PM IST
ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮದ ಬಳಿಯಿರುವ ಕಲ್ಲಹಳ್ಳಕ್ಕೆ ನಿರ್ಮಿಸಲಾಗುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಆಮೆ ವೇಗದಲ್ಲಿ ಸಾಗಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಮಾರನಬಸರಿ, ಜಕ್ಕಲಿ, ರೋಣ, ಹಾಲಕೆರೆ, ಯಲಬುರ್ಗಾ, ಕೊಪ್ಪಳ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಬೇಕೆಂದು ಗ್ರಾಮಗಳ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದರಂತೆ ಸರ್ಕಾರ ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪೆರೇಷನ್ (ಕೆಆರ್ಡಿಸಿಎಲ್) ವತಿಯಿಂದ 1.74 ಲಕ್ಷ ರೂ. ಗಳಲ್ಲಿ 2019 ಫೆಬ್ರುವರಿದಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ಗುತ್ತಿಗೆ ಪಡೆದ ಆಂಧ್ರದ ಕಂಪನಿಯು ಆಮೆಗತಿಯಲ್ಲಿ ಕಾಮಗಾರಿ ನಡೆಸಿದ್ದರಿಂದ ಜನರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಮಳೆಗೆ ಹಳ್ಳ ಕೊಚ್ಚಿರುವುದರಿಂದ ಬಸ್ ಹಾಗೂ ಖಾಸಗಿ ವಾಹನ, ಚಕ್ಕಡಿ, ಎತ್ತುಗಳಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಾರನಬಸರಿ, ಹಾಲಕೆರೆ, ಯಲಬುರ್ಗಾ, ಕೊಪ್ಪಳಕ್ಕೆ ನಿತ್ಯ ಹೊರಡುವ ಬಸ್ಗಳು ನರೇಗಲ್ಲ ಮಾರ್ಗವಾಗಿ ಸಂಚಾರಿಸುತ್ತವೆ. ಆದರೆ, ದಿನಂಪ್ರತಿ 4 ರಿಂದ 5 ಸಾವಿರಕ್ಕೂ ಅಧಿಕ ಜನರು ತಾಲೂಕು ಕೇಂದ್ರ ರೋಣ, ಗಜೇಂದ್ರಗಡಕ್ಕೆ ಓಡಾಡುತ್ತಾರೆ. ಸೇತುವೆ ಕಾಮಗಾರಿಯು ಕುಂಟುತ್ತಾ ಸಾಗಿರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.