ಬನಶಂಕರಿ ದೇವಿ ಜಾತ್ರೆ ರಥೋತ್ಸವ
Team Udayavani, Nov 18, 2019, 7:00 PM IST
ನಿಡಗುಂದಿ: ಪಟ್ಟಣದ ಬನಶಂಕರಿ ದೇವಿ ಜಾತ್ರೆ ನಿಮಿತ್ತ ರವಿವಾರ ಸಂಜೆ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ಮಧ್ಯೆ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆಯಿಂದ ಬನಶಂಕರಿ ದೇವಿಗೆ ಕುಂಭಾಭಿಷೇಕ, ವಿಶೇಷ ಪೂಜೆ, ಅಭಿಷೇಕ ಜರುಗಿದವು. ಭಕ್ತರು ತೆಂಗಿನಕಾಯಿ, ನೈವೇದ್ಯ ಅರ್ಪಿಸಿ ದೇವಿ ದರ್ಶನ ಪಡೆದರು. ರಥದ ಕಳಶವನ್ನು ಬೆಳಗ್ಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಕಳಸದಕಟ್ಟೆ ಹತ್ತಿರ ತರಲಾಗಿತ್ತು. ಕಳಶ ಆಗಮಿಸುತ್ತಿದ್ದಂತೆ ಭಕ್ತರು ದಾರಿಯುದ್ದಕ್ಕೂ ನೀರು ಹಾಕುವ ಜತೆಗೆ ಕಳಶಕ್ಕೆ ಹೂಮಾಲೆ ಸಮರ್ಪಿಸಿದರು.
ಸಂಜೆ ಕಳಶವನ್ನು ವಾದ್ಯ ಮೇಳ, ಡೊಳ್ಳುಗಳ ನಿನಾದದ ಮಧ್ಯೆ ಮೆರವಣಿಗೆ ಮೂಲಕ ರಥದ ಹತ್ತಿರ ತರಲಾಯಿತು. ಅನೇಕ ಕಡೆ ಮಹಿಳೆಯರಾದಿಯಾಗಿ ಎಲ್ಲರೂ ಕಳಸದ ಪೂಜೆ ಸಲ್ಲಿಸಿ, ಹೂಮಾಲೆ ಅರ್ಪಿಸಿದರು. ರಥ ವಿಶೇಷವಾಗಿ ಸಿಂಗರಿಸಲಾಗಿತ್ತು. ರಥೋತ್ಸವ ಜರುಗುವಾಗ ಭಕ್ತರ ಘೋಷಣೆ , ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲೆಡೆಯೂ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಹಾರಿಸಿ ಭಕ್ತಿ ಸಮರ್ಪಿಸಿದರು.