ಕೋವಿಡ್ ವೈರಸ್ ಹರಡದಂತೆ ಎಚ್ಚರಿಕೆ ವಹಿಸಿ: ಪಾಟೀಲ
Team Udayavani, May 1, 2020, 1:47 PM IST
ಬಸವಕಲ್ಯಾಣ: ನಿರಗುಡಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವ ಕಾರ್ಮಿಕರಿಗೆ ಶಾಸಕ ರಾಜಶೇಖರ ಪಾಟೀಲ ಮಾಸ್ಕ್ ವಿತರಿಸಿದರು.
ಬಸವಕಲ್ಯಾಣ: ಲಾಕ್ಡೌನ್ ಮುಗಿಯುವವರೆಗೂ ಕೋವಿಡ್ ವೈರಸ್ ಹರಡದಂತೆ ಮುಂಜಾಗೃತೆ ವಹಿಸಬೇಕು ಹಾಗೂ ಬಿತ್ತನೆ ಸಮಯದಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಬೀಜ ಹಾಗೂ ರಸಾಯನಿಕ ಗೊಬ್ಬರ ಸಂಗ್ರಹ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಾಜೇಶಖರ ಪಾಟೀಲ ಹೇಳಿದರು.
ತಾಲೂಕಿನಲ್ಲಿ ಹುಮನಾಬಾದ್ ವಿಧಾನಸಭೆ ಒಳಪಡುವ ವಿವಿಧ ಗ್ರಾಮಗಳಲ್ಲಿ ಕೈಗೊಂಡಿರುವ ಉದ್ಯೋಗ ಖಾತ್ರಿ ಕೆಲಸ ಪರಿಶೀಲಿಸಿ ರಾಜೇಶ್ವರನಲ್ಲಿ ಅಧಿಕಾರಿಗಳ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಲಸ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮುಖಕ್ಕೆ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಈಗಾಗಲೇ ವಿವಿಧೆಡೆ ನರೇಗಾ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೆಲಸ ನೀಡಬೇಕು. ಜನರಿಗೆ ಜೀವನ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಸೂಚಿದರು.
ಜೂನ್ ತಿಂಗಳಲ್ಲಿ ಬಿತ್ತನೆ ಆರಂಭವಾಗುತ್ತದೆ. ಹೀಗಾಗಿ ರೈತರಿಗೆ ಬೇಕಾದ ಬೀಜ, ರಸಾಯನಿಕ ಗೊಬ್ಬರವನ್ನು ಕಡಿಮೆ ಬೀಳದಂತೆ ಸಂಗ್ರಹ ಮಾಡಿಕೊಳ್ಳಬೇಕು ಮತ್ತು ಕೋವಿಡ್ ವೈರಸ್ ಮುಂಜಾಗೃತೆ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್ಡೌನ್ ಮುಗಿಯುವವರೆಗೂ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಮಾರಾಟ ಮಾಡಲು ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.
ನಂತರ ತೋಟಗಾರಿಕೆ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್, ಜಿಪಂ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ರಾಜೇಶ್ವರ ಜಿಪಂ ಸದಸ್ಯ ಗುಂಡುರೆಡ್ಡಿ ಹಮಲಾಪುರೆ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ತಾಪಂ ಇಒ ಮಡೋಳಪ್ಪ ಪಿ.ಎಸ್., ವ್ಯವಸ್ಥಾಪಕ ಜಯಪ್ರಕಾಶ ಚವ್ಹಾಣ, ಸಿಡಿಪಿಒ ಶಾರದಾ ಕಲಮಲಕರ್ ಇದ್ದರು.