ಸಾರಿಗೆ ಸಂಸ್ಥೆ ಬಸ್ ಚಾಲಕನಿಗೆ ಸೋಂಕು
Team Udayavani, Jul 7, 2020, 12:06 PM IST
ದೇವರಹಿಪ್ಪರಗಿ: ದೇವರಹಿಪ್ಪರಗಿ ನಿವಾಸಿ ಮತ್ತು ರಸ್ತೆ ಸಾರಿಗೆ ಬಸ್ನ ಚಾಲಕನಿಗೆ ಕೋವಿಡ್ ಸೋಂಕು ತಗುಲಿದ್ದು, ಸೋಮವಾರ ಸೋಂಕಿತ ವ್ಯಕ್ತಿಯ ಮನೆ ಸುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಲಾಗಿದೆ. ಇಡೀ ರಾಜ್ಯಾದ್ಯಂತ ಕೋವಿಡ್ ಹಾವಳಿ ಅಟ್ಟಹಾಸ ಮೀರಿದ್ದರೂ ದೇವರಹಿಪ್ಪರಗಿ ಪಟ್ಟಣಕ್ಕೆ ಮಾತ್ರ ಕಾಲಿಟ್ಟರಲಿಲ್ಲ. ಆದರೆ ಈಗ ರಸ್ತೆ ಸಾರಿಗೆ ಚಾಲಕನೊಬ್ಬನಿಗೆ ಸೋಂಕು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಸೋಂಕಿತ ವ್ಯಕ್ತಿಯು ವಿಜಯಪುರ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕನಿಗೆ ವಿಜಯಪುರ-ಕಲಬುರಗಿ-ವಿಜಯಪುರ ಸಂಚರಿಸಿದ್ದ ಎಂದು ತಿಳಿದು ಬಂದಿದೆ. ಕಳೆದ ಒಂದು ವಾರದ ಹಿಂದೆ ಜ್ವರ ಬಂದಿದೆ ಎಂದು ಕೆಲಸಕ್ಕೆ ರಜೆ ಹಾಕಿದ್ದರು. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೊಳಪಡಿಸಿದಾಗ ಸೋಮವಾರ ಸೋಂಕು ದೃಢಪಟ್ಟಿದೆ.
ಈತನ ಸಂಪರ್ಕಕ್ಕೆ ಬಂದ ಸುಮಾರು 11 ಜನ ಸಂಬಂಧಿಕರಿಗೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಸೋಂಕಿತ ಚಾಲಕ ವಾಸವಿದ್ದ ಪ್ರದೇಶದಿಂದ 100 ಮೀ. ಶೀಲ್ ಡೌನ್ ಮಾಡಲಾಗಿದೆ. 200 ಮೀಟರ್ ಬಫರ್ ಝೋನ್ ಮಾಡಲಾಗಿದೆ ಎಂದು ಮುಖ್ಯಾಧಿ ಕಾರಿ ಎಲ್.ಡಿ. ಮುಲ್ಲಾ ತಿಳಿಸಿದ್ದಾರೆ.