ಕೆಳ ಹಂತದ ಅಧಿಕಾರಿಗಳ ಸಹಕಾರ ಅಗತ್ಯ: ಬಸಣ್ಣ
Team Udayavani, Aug 7, 2018, 3:37 PM IST
ಸಿಂಧನೂರು: ತಾಲೂಕು ಮಟ್ಟದ ಅಧಿಕಾರಿಗಳು ಸಂಪೂರ್ಣವಾಗಿ ಜನರ ಸೇವೆ ಮಾಡಿ ಹೆಸರು ಗಳಿಸಲು ಕೆಳ ಹಂತದ ಅಧಿಕಾರಿಗಳ ಸಹಾಯ ಸಹಕಾರ ಅಗತ್ಯವಾಗಿರುತ್ತದೆ ಎಂದು ತಾಪಂ ಇಒ ಬಸಣ್ಣ ಹೇಳಿದರು. ಸಿಂಧನೂರಿನಿಂದ ಕೂಡ್ಲಗಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ನಗರದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಮತ್ತು ವರ್ಗಾವಣೆ ಕಡ್ಡಾಯವಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ಜನರ ಜತೆ ಉತ್ತಮವಾದ ಒಡನಾಟ ಇಟ್ಟುಕೊಂಡು ಸೇವೆಗೆ ಸದಾ ಕಂಕಣಬದ್ಧರಾಗಿರಬೇಕು. ಅಂದಾಗ ಮಾತ್ರ ಜನರು ನಮ್ಮನ್ನು ಗುರುತಿಸುತ್ತಾರೆ.
ತಾವು ಸಿಂಧನೂರಿನಲ್ಲಿ ಸೇವೆ ಸಲ್ಲಿಸಿದ್ದು ಮರೆಯಲಾರದಂತದ್ದು. ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲ ಕೆಲಸ ಕಾರ್ಯಗಳಲ್ಲಿ ನನಗೆ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಕೆಲವೊಂದು ವೇಳೆ ಒತ್ತಡದಿಂದ ಕೆಳ ಮಟ್ಟದ ಅಧಿಕಾರಿಗಳಿಗೆ ಏನಾದರೂ ಮಾತನಾಡಿರಬಹುದು. ಯಾರು ಸಹ ಅದು ನನ್ನ ವೈಯಕ್ತಿಕ ಎಂದು ಭಾವಿಸಿಬೇಡಿ. ನನಗೆ ಸಹಕಾರ ನೀಡಿದಂತೆ ಬರುವ ಅಧಿಕಾರಿಗಳಿಗೂ ಸಹಕಾರ ನೀಡಿ. ಎಲ್ಲರೂ ಸೇರಿ ಕೆಲಸ ಮಾಡಿ ಸಿಂಧನೂರು ತಾಪಂಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಪವನಕುಮಾರ ಮಾತನಾಡಿ, ಸಿಂಧನೂರಿನ ತಾಪಂ ಇಒ ಆಗಿ ಕೆಲಸ ಮಾಡಿ ಈಗ ವರ್ಗವಾಗುತ್ತಿರುವ ಬಸಣ್ಣ ಅವರು ಬಹಳ ನಿಷ್ಠಾವಂತ ಹಾಗೂ ಜನಪರ ಕಾಳಜಿವುಳ್ಳ ಅಧಿಕಾರಿ. ಸರ್ಕಾರಿ ಕೆಲಸದಲ್ಲಿ ವರ್ಗಾವಣೆ ಅನಿವಾರ್ಯವಾದರೂ ಅವರ ಸೇವೆ ಅಸ್ಮರಣೀಯ ಎಂದು ಹೇಳಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಂಠಿಪುಡಿ ನರಸಿಂಹರಾಜು ಮಾತನಾಡಿದರು. ರಾಯಚೂರಿನ ಕಾರ್ಯನಿರ್ವಾಹಕ
ಅಭಿಯಂತರ ಬಸವರಾಜ ಪಲ್ಲೇದ, ಗ್ರಾಮೀಣ ಕುಡಿಯುವ ನೀರು ಮತ್ತ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜನಿಯರ್ ಹನುಮಂತರೆಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ದೊಡ್ಡಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಮುಖಂಡರಾದ ಸೈಯ್ಯದ್ ಯುನೂಸ್ ನವಲಿ, ರಾಮಣ್ಣ ತುರ್ವಿಹಾಳ ಸೇರಿದಂತೆ ಪಿಡಿಒಗಳು ಹಾಗೂ ಕಾರ್ಯಾಲಯದ ಸಿಬ್ಬಂದಿ ಇದ್ದರು.