ಕಲುಷಿತ ನೀರು ಸೇವನೆ: ಜೂಕೂರು ಜನ ಅಸ್ವಸ್ಥ
Team Udayavani, Jul 5, 2022, 3:07 PM IST
ಮಾನ್ವಿ: ತಾಲೂಕಿನ ಜೂಕೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಕೆಲ ಜನರು ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದು, ಶಾಲೆಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ಪ್ರಾರಂಭಿಸಲಾಗಿ ದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ರಾಯಚೂರು ಸರಕಾರಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಜಿಪಂ ಸಿಇಒ ನೂರ್ಜ್ವಹಾರಾ ಖಾನಂ, ಎಸ್ಪಿ ನಿಖೀಲ್.ಬಿ ಮತ್ತು ತಹಶೀಲ್ದಾರ್ ಚಂದ್ರಕಾಂತ್ ಎಲ್.ಡಿ. ಅವರು, ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ನದಿ ನೀರನ್ನು ಪರಿಶೀಲಿಸಿದರು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಶೇಖರಯ್ಯ ಮಾತನಾಡಿ, ಗ್ರಾಮಸ್ಥರು ಹೆಚ್ಚು ರೈತಾಪಿ ಜನರಿದ್ದು, ಜಮೀನುಗಳ ಹತ್ತಿರದ ಕಲುಷಿತ ನದಿ ನೀರನ್ನು ಕುಡಿದಿದ್ದರಿಂದ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದಾರೆ. ಜೂಕೂರು ಗ್ರಾಮದಲ್ಲಿ 14 ಜನರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, 4 ಜನರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಸರ್ವೇ ಕೈಗೊಂಡಿದ್ದು, ತಾತ್ಕಾಲಿಕ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ಇಒ ಅಣ್ಣರಾವ್, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಮಹಮ್ಮದ್ ಯೂನುಸ್, ಮಹೇಶ, ಅಕ್ಷರ ದಾಸೋಹ ಅಧಿಕಾರಿ ಸುರೇಶ ನಾಯಕ, ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸುಭದ್ರದೇವಿ ಸೇರಿದಂತೆ ಕಂದಯ ಇಲಾಖೆ ಅಧಿಕಾರಿಗಳು ಇದ್ದರು.