ಉದ್ಯೋಗಕ್ಕಾಗಿ ಅಲೆಯಬೇಡಿ
Team Udayavani, Sep 27, 2018, 10:51 AM IST
ರಾಯಚೂರು: ವಿದ್ಯಾರ್ಥಿಗಳು ಶಿಕ್ಷಣದ ನಂತರ ಉದ್ಯೋಗಕ್ಕಾಗಿ ಹುಡುಕಾಟ ನಡೆಸದೇ ಸ್ವಂತ ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ನೀಡುವ ಸಾಮರ್ಥಯ ಬೆಳೆಸಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಕಲಬುರಗಿ ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕ ಪ್ರೊ| ಸಿ.ಪಿ. ಬೊಮ್ಮನಪಾಡ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೆಂಟರ್ ಫಾರ್ ಎಂಪ್ಲಾಯ್ಮೆಂಟ್ ಅಪಾರ್ಚುನಿಟೀಸ್ ಆ್ಯಂಡ್ ಲರ್ನಿಂಗ್ (ಸಿಯೋಲ್) ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಸಹಯೋಗದಲ್ಲಿ ಬುಧವಾರ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಇಂಥ ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಶೈಕ್ಷಣಿಕ ಮತ್ತು ವೃತ್ತಿ ಬದುಕು ಸುಧಾರಿಸಿಕೊಂಡು ಉದ್ಯೋಗಕ್ಕಾಗಿ ಹುಡುಕಾಟ ನಡೆಸದೆ ಇತರರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಸಿಯೋಲ್ ಕಾರ್ಯದರ್ಶಿ ಎಂ.ಟಿ. ಮಂಜುನಾಥಸ್ವಾಮಿ ಮಾತನಾಡಿ, ಸಿಯೋಲ್ ಸಂಸ್ಥೆಯು ಹುಟ್ಟಿ ಬೆಳೆದು ಬಂದ ದಾರಿ ಮತ್ತು ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಗುರಿ ಸಾಧಿಸಲು ಸಿಯೋಲ್ ಸಹಕರಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳು ಗಗನ ಕುಸುಮವಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸೂಕ್ತ ಮಾರ್ಗದಲ್ಲಿ ಅಧ್ಯಯನ ನಡೆಸಬೇಕು ಎಂದರು.
ಪ್ರಾಚಾರ್ಯ ಡಾ| ದಸ್ತಗೀರಸಾಬ ದಿನ್ನಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಾಣೇಶ ಕುಲಕರ್ಣಿ, ಸ್ಪರ್ಧಾ ಕರ್ನಾಟಕ ಕೋಚಿಂಗ್ ಸೆಂಟರ್ ಶಿವಮೊಗ್ಗಾದ ವಿಷಯ ತಜ್ಞ ನಂಜಾನಾಯಕ ಡಿ., ಮೋಹನಕುಮಾರ ಎಂ. ಮತ್ತು ಶಂಕರ ಪಾಲ್ಗೊಂಡಿದ್ದರು. ಸಿಯೋಲ್ ಸಂಸ್ಥೆಯ ಪ್ರತಾಪ, ರವಿಕುಮಾರ, ತಿರುಮಲ, ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಧ್ಯಾಪಕ ಪ್ರೊ| ಡಾ|ಶಿವಯ್ಯ ಹಿರೇಮಠ ನಿರೂಪಿಸಿದರು. ಸಿಯೋಲ್ ವ್ಯವಸ್ಥಾಪಕ ಮಹ್ಮದ್ ಯೂಸೂಫ್ ಅಲಿ ಸ್ವಾಗತಿಸಿದರು. ಪ್ರೊ| ಡಾ| ಎಂ. ಶಿವರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಪ್ರೊ| ಮಹಾಂತೇಶ ಅಂಗಡಿ ವಂದಿಸಿದರು.