ಮೀನು ಸಾಗಾಟ ನಿರ್ಬಂಧ: ಗೋವಾಕ್ಕೆ ಸಿಎಂ ಪತ್ರ
Team Udayavani, Dec 1, 2018, 6:20 AM IST
ರಾಯಚೂರು: ಕರ್ನಾಟಕದ ಮೀನು ಸಾಗಣೆ ನಿರ್ಬಂಧ ಹಿಂಪಡೆಯುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೋವಾ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಖಾತೆ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದ ಮೀನುಗಳಲ್ಲಿ ರಾಸಾಯನಿಕ ಅಂಶ ಕಂಡುಬಂದಿದ್ದು, ಇದು ಕ್ಯಾನ್ಸರ್ಕಾರಕವಾಗಿದೆ. ಇದರಿಂದ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆಂಬ ಕಾರಣವೊಡ್ಡಿ ಮೀನು ಆಮದು ಸಂಪೂರ್ಣ ನಿಷೇಧ ಮಾಡಿ ಗೋವಾ ಸರ್ಕಾರ ಆದೇಶ ಹೊರಡಿಸಿತ್ತು. ಈ ಬಗ್ಗೆ ತಾವು ಗೋವಾ ಸರ್ಕಾರದ ಮೀನುಗಾರಿಕೆ ಖಾತೆ ಸಚಿವರನ್ನು ಸಂರ್ಪಕಿಸಿ ಮಾತನಾಡಿದ್ದು, ಅದು ಸರ್ಕಾರದಿಂದ ಮಾಡಿದ ಆದೇಶವಲ್ಲ. ಆರೋಗ್ಯ ಇಲಾಖೆಯಿಂದ ನೀಡಲಾಗಿದೆ ಎಂಬುದು ಗೊತ್ತಾಯಿತು.
ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೋವಾ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಅಲ್ಲದೇ, ರಾಜ್ಯದ ಮೀನು ವ್ಯಾಪಾರಿಗಳಿಗೆ ಗುಣಮಟ್ಟದ ದೃಢೀಕರಣ ಪ್ರಮಾಣ ಪತ್ರ ನೀಡಲು ನಿರ್ಧರಿಸಲಾಗಿದೆ. ಆ ಪತ್ರ ಇದ್ದವರಿಗೆ ಮೀನು ಸಾಗಣೆ ಮಾಡಲು ಅವಕಾಶ ನೀಡುವಂತೆಯೂ ಪತ್ರದಲ್ಲಿ ಕೋರಲಾಗಿದೆ ಎಂದು ತಿಳಿಸಿದರು.